ಐಎಂಎ ವಂಚನೆಗೆ ಮೈಸೂರಿನಲ್ಲೂ ಹಲವು ದೂರು ದಾಖಲು
ಮೈಸೂರು, ಜೂನ್ 13: ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಅನೇಕ ಮಂದಿ ನಗರದ ಹಲವು ಠಾಣೆಗಳಲ್ಲಿ ದೂರು ನೀಡಿದ್ದಾರೆ. ನಗರದಲ್ಲಿ ವಾಸಿಸುತ್ತಿರುವ ಮುಸ್ಲಿಂ ಜನಾಂಗದವರೇ ಹೆಚ್ಚಾಗಿ ಹೂಡಿಕೆ ಮಾಡಿದ್ದು, ಐಎಂಎ ಮಾತ್ರವಲ್ಲದೆ ಇಂಥದ್ದೇ ಐದು ವಂಚಕ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಹೂಡಿ ಕಳೆದುಕೊಂಡಿರುವ ಮಾಹಿತಿ ತಿಳಿದುಬಂದಿದೆ.
2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?
ಕಳೆದೊಂದು ವರ್ಷದಲ್ಲಿ ಅಂಬಿಡೆಂಟ್, ಅಜ್ಮೀರ, ಇಜಾಜ್, ಹೀರಾ ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಐಎಂಎ ಸಂಸ್ಥೆ ಸಂಸ್ಥಾಪಕ ಮನ್ಸೂರ್ ಅಲಿ ಖಾನ್ ಮೂಲತಃ ತಿ ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದವನೆಂದು ಕೆಲವರು ಹೇಳುತ್ತಿದ್ದಾರೆ. ಸ್ವಲ್ಪ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮನ್ಸೂರ್, ಅಲ್ಲಿಂದ ದುಬೈಗೆ ತೆರಳಿ ವಾಪಸ್ ಬಂದ ನಂತರ ಸಂಸ್ಥೆಯ ಪರಿಕಲ್ಪನೆಯನ್ನು ತಮ್ಮ ಗೆಳೆಯರು ಹಾಗೂ ಸಮುದಾಯದವರಿಗೆ ತಿಳಿಸಿದ್ದಾನೆ. ಎಲ್ಲರೂ ಲಾಭಾಂಶ ಪಡೆಯುವ ಉದ್ದೇಶದಿಂದ ಬಂಡವಾಳ ಹೂಡಿದ್ದರು ಎನ್ನಲಾಗಿದೆ.
ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ: ಏಳು ಜನರ ಬಂಧನ
ವಂಚನೆಗೊಳಗಾದವರು ನಿರ್ಭೀತಿಯಿಂದ ದೂರು ನೀಡುವಂತೆ ಪೊಲೀಸರು ತಿಳಿಸಿದ ಬೆನ್ನಲ್ಲೇ ಮೋಸಹೋದ ಸುಮಾರು ನೂರು ಮಂದಿ ನಗರದ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರಿನ ಕಲ್ಯಾಣಗಿರಿ, ರಾಜೀವ್ ನಗರ, ಅಜೀಜ್ ಸೇಠ್ ನಗರ, ಸಾತಗಳ್ಳಿ, ಬನ್ನಿಮಂಟಪ, ಉದಯಗಿರಿ, ಮಂಡಿ ಮೊಹಲ್ಲಾ, ನಜರ್ ಬಾದ್ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಐಎಂಎ ವಂಚನೆ ಬಲೆಗೆ ಬಿದ್ದವರಿದ್ದಾರೆ. ಮುಂದೇನು ಮಾಡುವುದೆಂದು ತೋಚದೆ ಸ್ಥಳೀಯ ಕಾರ್ಪೊರೇಟರ್ ಗಳು, ಮುಖಂಡರ ಬಳಿ ಹೋಗಿ ಸಹಕಾರ ಕೇಳುತ್ತಿದ್ದಾರೆ.