ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
ಮೈಸೂರು, ಜನವರಿ 19: ನಮ್ಮ ಊರಿಗೆ ಬರಲು ಉತ್ತಮ ರಸ್ತೆ ನಿರ್ಮಿಸಿ ಕೊಡಿ, ವಾಸಿಸೋಕೆ ಮನೆ ಕಟ್ಟಿಕೊಡಿ, ಕೃಷಿ ಮಾಡೋದಕ್ಕೆ ನೀರಿನ ವ್ಯವಸ್ಥೆ ಮಾಡಿ. ಇದಿಷ್ಟನ್ನು ಮಾಡಿಕೊಟ್ಟರೆ ನಾವು ಕೂಡ ಎಲ್ಲರಂತೆ ತಮ್ಮ ಊರಿನಲ್ಲಿದ್ದು, ಜೀವನ ಸಾಗಿಸುತ್ತೇವೆ. ಹೀಗೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಂದೆ ಮನವಿ ಮಾಡಿಕೊಂಡವರು ಬೇರಾರು ಅಲ್ಲ, ಅರಳಿಕಟ್ಟೆಹುಂಡಿ ಗ್ರಾಮಸ್ಥರು.
ಅರಳಿಕಟ್ಟೆಹುಂಡಿ ಗ್ರಾಮವು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮ ಪಂಚಾಯಿತಿಗೆ ಒಳಪಡುತ್ತದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ ಈ ಗ್ರಾಮ ಸೇರುತ್ತದೆ. ಇದು ಕುಗ್ರಾಮವಾಗಿದ್ದು, ಯಾವುದೇ ಮೂಲ ಸೌಕರ್ಯಗಳು ಇಲ್ಲಿ ಇಲ್ಲದ ಕಾರಣದಿಂದಾಗಿ ಮತ್ತು ಕೃಷಿ ಮಾಡಲು ನೀರಿನ ವ್ಯವಸ್ಥೆಯಿಲ್ಲದೆ ರೈತರು, ಕೂಲಿ ಕಾರ್ಮಿಕರು ಕೆಲಸ ಸಿಗದ ಕಾರಣದಿಂದ ಊರು ಖಾಲಿ ಮಾಡಿದ್ದರು.
ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರ
ಸಿದ್ದರಾಮಯ್ಯ ಅವರ ಕಾಲದಲ್ಲಿ ಬರ ತಲೆದೋರಿತ್ತು. ಹೀಗಾಗಿ ಬಹುತೇಕ ಜನರು ಗ್ರಾಮವನ್ನು ತೊರೆದು ಪಟ್ಟಣ ಸೇರಿದ್ದರು. ಅವತ್ತಿನ ಕಾಲದಲ್ಲಿ ಅರಳಿಕಟ್ಟೆಹುಂಡಿ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಊರು ಬಿಟ್ಟು ಹೋದ ಮಂದಿ ಮತ್ತೆ ಬರುವ ಆಸಕ್ತಿ ತೋರಲಿಲ್ಲ. ಒಂದು ವೇಳೆ ಬಂದರೂ ಅವರಿಗೆ ತಮ್ಮ ಊರಿನಲ್ಲಿ ಮೂಲ ಸೌಕರ್ಯಗಳು ಇರಲಿಲ್ಲ. ಮಕ್ಕಳಿಗೆ ಶಾಲೆ, ಮಾಡೋದಕ್ಕೆ ಕೆಲಸ, ಸಂಚರಿಸುವುದಕ್ಕೆ ರಸ್ತೆ, ಕುಡಿಯೋದಕ್ಕೆ ನೀರು ಹೀಗೆ ಯಾವುದೂ ಇರಲಿಲ್ಲ. ಆದ್ದರಿಂದ ಜನ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಆಗಮಿಸಿ ಮತ್ತೆ ಹೊರಟು ಬಿಡುತ್ತಿದ್ದರಿಂದ ಇಡೀ ಊರಿಗೆ ಊರೇ ಬಿಕೋ ಎನ್ನುತ್ತಿತ್ತು.
ಮೈಸೂರನ್ನು ಯೋಗ ನಗರಿಯಾಗಿಸಲು ಜಿಎಸ್ಎಸ್ ಪಣ!
ಕೃಷಿ ಕೈ ಹಿಡಿಯಲಿಲ್ಲ, ಹೊಟ್ಟೆ ತಣಿಸಲಿಲ್ಲ
ಹಾಗೆ ನೋಡಿದರೆ ಈ ಗ್ರಾಮ ಹಿಂದೆ ಚೆನ್ನಾಗಿಯೇ ಇತ್ತು. ಇಲ್ಲಿ ಸೌಕರ್ಯಕ್ಕೇನು ಕೊರತೆಯಿರಲಿಲ್ಲ. ಉತ್ತಮ ರಸ್ತೆ, ವಿದ್ಯುತ್, ಅಂಗನವಾಡಿ, ಶಾಲೆ ಎಲ್ಲವೂ ಇತ್ತು. ಆದರೆ ನಂತರದ ವರ್ಷಗಳಲ್ಲಿ ಮಳೆ ಬಾರದೆ, ಕೃಷಿ ಮಾಡಲಾಗದೆ ಹೊಟ್ಟೆಪಾಡಿಗಾಗಿ ಹಳ್ಳಿ ಬಿಟ್ಟು ಬೇರೆ ಬೇರೆ ಊರು ಸೇರಿದ್ದಾರೆ. 2003ರಲ್ಲಿ ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ವಾಸಿಸುತ್ತಿದ್ದವು. ಆದರೆ ಕೃಷಿ ಇವರ ಕೈ ಹಿಡಿಯಲಿಲ್ಲ. ಹೊಟ್ಟೆಯನ್ನು ತಣಿಸಲಿಲ್ಲ. ಇನ್ನು ಇಲ್ಲಿದ್ದರೆ ಬದುಕು ಕಷ್ಟ ಎಂದರಿತ ಜನ ಊರು ಬಿಡಲು ತಯಾರಾದರು. ಹೀಗೆ ಹೋದವರು ಮತ್ತೆ ಇತ್ತ ಬರುವ ಪ್ರಯತ್ನ ಮಾಡಲೇ ಇಲ್ಲ. ಪರಿಣಾಮ ಇಡೀ ಗ್ರಾಮ ಪಾಳು ಬಿದ್ದಿದೆ. ಬೀಳುವಂತಾಯಿತು.
ಮನೆಗಳು ಕುಸಿದಿವೆ.. ಜಮೀನು ಪಾಳು ಬಿದ್ದಿದೆ
ಸದ್ಯ ಊರು ಬಿಡದೆ ಬದುಕುತ್ತೇವೆ ಎಂದು ಹೊರಟ ಕುಟುಂಬಗಳದ್ದು ನರಕದ ಜೀವನವಾಗಿದೆ. ರಾತ್ರಿ ವೇಳೆ ಬೀದಿ ದೀಪಗಳಿಲ್ಲದೆ ಕಗ್ಗತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ. ಸರ್ಕಾರ ನೀಡುವ ಅನ್ನ ಭಾಗ್ಯ ನಂಬಿ ಬದುಕುವಂತಾಗಿದೆ. ಇವರಿಗೆ ಕೂಲಿ ಮಾಡಿ ಬದುಕುವುದು ಅನಿವಾರ್ಯವಾಗಿದೆ. ಕೂಲಿ ಮಾಡೋಣ ಎಂದರೂ ಪಕ್ಕದ ಹಳ್ಳಿಗಳಿಗೆ ನಡೆದು ಹೋಗಬೇಕಾಗಿದೆ. ಸತ್ತರೆ ಶವಸಂಸ್ಕಾರಕ್ಕೂ ಜನರಿಲ್ಲದ ಸ್ಥಿತಿ ಗ್ರಾಮದವರದ್ದಾಗಿದೆ. ಊರು ಬಿಟ್ಟ ಗ್ರಾಮಸ್ಥರು ವರ್ಷಕ್ಕೊಮ್ಮೆ ನವೆಂಬರ್ ತಿಂಗಳಲ್ಲಿ ನಡೆಯುವ ಶ್ರೀ ಸಿದ್ದೇಶ್ವರ ಜಾತ್ರೆಗೆ ಬರುತ್ತಾರೆಯಾದರೂ ಹಬ್ಬ ಮುಗಿಸಿ ಮತ್ತೆ ಹೊರಟು ಬಿಡುವುದು ನಡೆಯುತ್ತಲೇ ಇದೆ. ಇದರಿಂದಾಗಿ ಕೆಲವು ಮನೆಗಳು ನಿರ್ವಹಣೆಯಿಲ್ಲದೆ ಕುಸಿದಿವೆ. ಜಮೀನುಗಳು ಪಾಳು ಬಿದ್ದಿವೆ.
ಗ್ರಾಮದ ಅಭಿವೃದ್ಧಿಗೆ ತಡೆಯಾದ ಕೊರೋನಾ
ಪಂಚಾಯಿತಿಯಿಂದ ನಿರ್ಮಿಸಿದ ನೀರಿನ ತೊಂಬೆಗಳು, ವಿದ್ಯುತ್ ಸಂಪರ್ಕ ಎಲ್ಲವೂ ಹಾಗೆಯೇ ಇದೆ. ಹಳ್ಳಿ ಬಿಟ್ಟು ಹೋದ ಬಹುತೇಕರು ಮೈಸೂರು ಪಟ್ಟಣ ಸೇರಿದ್ದು, ಗಾರೆ ಕೆಲಸ ಸೇರಿದಂತೆ ಸಣ್ಣಪುಟ್ಟ ಕಾಯಕ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಅರಳಿಕಟ್ಟೆಹುಂಡಿ ಗ್ರಾಮವು ವರುಣಾ ಕ್ಷೇತ್ರಕ್ಕೆ ಸೇರಿದ್ದು, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಶಾಸಕರಾಗಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಯೋಜನೆ ತಯಾರು ಮಾಡಿ ಮಂಜೂರು ಮಾಡಿಸಿದ್ದರು. ಆದರೆ ಕೊರೊನಾ ಕಾರಣದಿಂದ ಅದ್ಯಾವುದೂ ಮುಂದುವರೆಯಲಿಲ್ಲ.
ವಿಪಕ್ಷ ನಾಯಕರ ಮುಂದೆ ಗ್ರಾಮಸ್ಥರ ಅಳಲು
ಇದೀಗ ಗ್ರಾಮದ ಕೆಲವು ಮುಖಂಡರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅರಳಿಕಟ್ಟೆಹುಂಡಿಯಲ್ಲಿ ವಾಸಿಸುವ ಬಹುತೇಕ ಮಂದಿ ಬಡವರಾಗಿದ್ದು, ಕೂಲಿ ಸಿಗದ ಕಾರಣ ಕೆಲಸ ಹುಡುಕಿಕೊಂಡು ಹೊರಗೆ ಹೋಗಿದ್ದರು. ಆದರೆ ಕೊರೊನಾ ಕಾರಣ ಊರಿಗೆ ಮರಳಿದ ವೇಳೆ ಕೆಲವರ ಮನೆಗಳು ಕುಸಿದು ಬಿದ್ದಿದ್ದು, ಇನ್ನು ಕೆಲವು ಮನೆಗಳು ಕುಸಿದು ಬೀಳುವ ಹಂತದಲ್ಲಿವೆ. ಹೀಗಾಗಿ ಮನೆಗಳನ್ನು ನಿರ್ಮಿಸಿಕೊಡಿ, ಜತೆಗೆ ಕೃಷಿ ಮಾಡಲು ಅನುಕೂಲವಾಗುವಂತೆ ಕೊಳವೆಬಾವಿ ಕಲ್ಪಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಅರಳಿಕಟ್ಟೆಹುಂಡಿ ಜನರ ಬದುಕು ಹಸನಾಗುತ್ತಾ?
ಗ್ರಾಮಸ್ಥರ ಮನವಿ ಆಲಿಸಿದ ಸಿದ್ದರಾಮಯ್ಯ ಅವರು, ಈಗ ನಮ್ಮ ಸರ್ಕಾರ ಅಧಿಕಾರದಲ್ಲಿ ಇಲ್ಲ. ಆದರೂ ಈಗಿರುವ ಬಿಜೆಪಿ ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಇನ್ನಾದರೂ ಅರಳಿಕಟ್ಟೆಹುಂಡಿ ಗ್ರಾಮ ಎಲ್ಲ ಗ್ರಾಮಗಳಂತೆ ಅಭಿವೃದ್ಧಿ ಕಂಡು ಗ್ರಾಮಸ್ಥರು ತಮ್ಮ ಊರಿನಲ್ಲಿಯೇ ಕೃಷಿ ಮಾಡಿಕೊಂಡು ನೆಲೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.