ಮೈಸೂರಿನಲ್ಲಿ ನಾಣ್ಯ ಚೆಲ್ಲಿದ ಕಿಡಿಗೇಡಿಗಳು: ಜನರಲ್ಲಿ ಆತಂಕ
ಮೈಸೂರು, ಏಪ್ರಿಲ್ 22: ಮೈಸೂರು ನಗರದ ಬೋಟಿ ಬಜಾರ್ ರಸ್ತೆಯ ಬಳಿ ಕಾರಿನಲ್ಲಿ ಬಂದ ಯಾರೋ ಕಿಡಿಗೇಡಿಗಳು ರಸ್ತೆಯಲ್ಲಿ ನಾಣ್ಯಗಳನ್ನು ಚೆಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
Recommended Video
ಇಂದು ಬೆಳಿಗ್ಗೆ ಯಾರೋ ಕಿಡಿಗೇಡಿಗಳು ಬೋಟಿ ಬಜಾರ್ ರಸ್ತೆಯಲ್ಲಿ ಕಾರಿನಲ್ಲಿ ಬಂದು ನಾಣ್ಯವನ್ನು ಸಾರ್ವಜನಿಕರ ಎದುರೇ ಬಿಸಾಡಿ ಹೋಗಿದ್ದು, ಜನರು ಆತಂಕಪಡುವ ಸ್ಥಿತಿ ಸೃಷ್ಟಿಸಿದೆ. ಕೊರೊನಾ ವೈರಸ್ ಭೀತಿಯ ಬೆನ್ನಲ್ಲೇ ಈ ನಾಣ್ಯ ಚೆಲ್ಲಿರುವುದು ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ.
ನಾಣ್ಯ ಚೆಲ್ಲಿ ಹೋದ ತಕ್ಷಣ ಜನರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ, ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ನಾಣ್ಯಗಳನ್ನು ಸ್ಯಾನಿಟೈಸರ್ ಮಾಡಿ ಎತ್ತಿಕೊಂಡು ಹೋಗಿದ್ದಾರೆ.
ಜನತೆಯಲ್ಲಿ ಭೀತಿಯನ್ನು ಸೃಷ್ಟಿಸುವ ಸಲುವಾಗಿಯೇ ಯಾರೋ ಕಿಡಿಗೇಡಿಗಳು ಈ ರೀತಿ ಕೃತ್ಯವನ್ನು ಎಸಗುತ್ತಿದ್ದು, ಜನತೆ ದಯವಿಟ್ಟು ಯಾರೂ ಭಯಪಡಬೇಡಿ ನಿಮ್ಮ ರಕ್ಷಣೆಗೆ ನಾವಿದ್ದೇವೆ. ಈ ರೀತಿಯ ಕೃತ್ಯಗಳು ಮತ್ತೆಲ್ಲಿಯಾದರೂ ಕಂಡು ಬಂದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದು ಧೈರ್ಯ ತುಂಬಿದ್ದಾರೆ.
ಹತ್ತಿರದಲ್ಲಿರುವ ಸಿಸಿಟಿವಿ ಫೂಟೇಜ್ ಗಳನ್ನು ವೀಕ್ಷಿಸಿ, ಕಾರಿನಲ್ಲಿ ಬಂದವರಾರೆಂದು ಕಂಡು ಹಿಡಿದು ಅವರನ್ನು ಶಿಕ್ಷೆಗೆ ಒಳಪಡಿಸಲಾಗುವುದು. ನಗರದಲ್ಲಿ ಮತ್ತೆ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಜನತೆಗೆ ಭರವಸೆ ನೀಡಿದರು.