ಕಾರಿನ ಬಾಡಿಗೆ 2.5 ಕೋಟಿ ರೂ.: MUDA ದ ಹೊಸ ಹಗರಣ ಬಯಲು
ಮೈಸೂರು ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಒಂಭತ್ತು ಮಂದಿಗೆ ನೀಡಲಾದ ಕಾರಿಗೆ ವರ್ಷಕ್ಕೆ ಎರಡರಿಂದ ಎರಡೂವರೆ ಕೋಟಿ ರೂ. ಬಾಡಿಗೆ ಕಟ್ಟುವ ವಿಷಯ ಬೆಳಕಿಗೆ ಬಂದಿದೆ!
ಮೈಸೂರು, ಮೇ 3 : ಮೈಸೂರು ಮಹಾನಗರಪಾಲಿಕೆ ಎಂದ್ರೆ ಸಾಕು ಹಗರಣಗಳ ಸರಮಾಲೆ ಎಂಬಂತಾಗಿದೆ. ಮೊನ್ನೆ ಮೊನ್ನೆಯಿನ್ನೋ ಫೋನ್ ಬಿಲ್ ಹಗರಣದಿಂದ ಸರಕಾರದ ಬೊಕ್ಕಸಕ್ಕೆ ಕತ್ತರಿ ಹಾಕಿದ್ದ ಪಾಲಿಕೆ ಸದಸ್ಯರ ಮತ್ತೊಂದು ಹಗರಣ ಬಟಾ ಬಯಲಾಗಿದೆ.
ಇದೀಗ ಮೈಸೂರು ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಒಂಭತ್ತು ಮಂದಿಗೆ ನೀಡಲಾದ ಕಾರಿಗೆ ವರ್ಷಕ್ಕೆ ಎರಡರಿಂದ ಎರಡೂವರೆ ಕೋಟಿ ರೂ. ಬಾಡಿಗೆ ಕಟ್ಟುವ ವಿಷಯ ಬೆಳಕಿಗೆ ಬಂದಿದೆ![ಮೈಸೂರು ಪಾಲಿಕೆ ಸದಸ್ಯರ ಕರೆ ಕಡಿತಕ್ಕೆ ಮೇಯರ್ ಗರಂ]
ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು ಪ್ರತಿ ತಿಂಗಳಿಗೆ 18 ರಿಂದ 20ಲಕ್ಷ ರೂಗಳನ್ನು ಕಾರಿನ ಖರ್ಚಿಗಾಗಿ ವ್ಯಯಿಸಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಯಾವ ರೀತಿ ಮಹಾನಗರಪಾಲಿಕೆ ವ್ಯರ್ಥವಾಗಿ ಪೋಲು ಮಾಡುತ್ತಿದೆ ಎಂಬುದಕ್ಕೆ ಇದೇ ಉದಾಹರಣೆ.
ಈ ಕುರಿತಾಗಿ ಮಾಹಿತಿ ನೀಡಿದ ಪಟ್ಟಣ ಮತ್ತು ನಗರ ಯೋಜನೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಂದೀಶ್ ಪ್ರೀತಂ, ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಿಗೆ ಹಾಗೂ ವಿರೊಧ ಪಕ್ಷದ ನಾಯಕರು ಸೇರಿದಂತೆ 9 ಮಂದಿಗೆ ಕಾರನ್ನು ನೀಡಬೇಕು ಎಂದು ಯಾವ ಕಾನೂನು ಹೇಳಿಲ್ಲ. ಅಥವಾ ಯಾವ ಮುನ್ಸಿಪಲ್ ಕಾಯಿದೆಯಲ್ಲೂ ಈ ಕುರಿತು ಇಲ್ಲ. ನನಗೆ ಫೆಬ್ರವರಿ 5 ರಂದು ಕಾರನ್ನು ನೀಡಲಾಗಿತ್ತು.
ನಾನೀಗ ಮೇ.2ರಂದು ಕಾರನ್ನು ವಾಪಸ್ ನೀಡಿದ್ದೇನೆ. ಮೂರು ತಿಂಗಳಲ್ಲಿ ಅದರ ಬಾಡಿಗೆ ಎಷ್ಟಾಯಿತು ಎಂಬುದನ್ನು ತಿಳಿಸಿದರೆ ನಾನದನ್ನು ಭರಿಸಲು ಸಿದ್ಧನಿದ್ದೇನೆ. ಆದರೆ ಇದು ಉಳಿದ ಎಂಟು ಮಂದಿಗೂ ಅನ್ವಯವಾಗಬೇಕು ಎಂದರು. ಇನ್ನು ಕಾರನ್ನು ವಾಪಸ್ ನೀಡಿದ ನಂದೀಶ್ ಪ್ರೀತಂ ಆಯುಕ್ತರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಬರೆದುಕೊಡಿ ಎಂಬುದಾಗಿ ಪತ್ರವನ್ನೂ ಸಹ ನೀಡಿದ್ದಾರೆ. ಇತ್ತ ನಂದೀಶ್ ಪ್ರೀತಂ ಈ ಹಗರಣವನ್ನು ಬೆಳಕಿಗೆ ತಂದಿದ್ದು ಸಾರ್ವಜನಿಕರಿಂದ ಪ್ರಶಂಸನಾರ್ಹವಾಗಿದ್ದಾರೆ.
ಉಸ್ತುವಾರಿ ಸಚಿವರ ವಿಶೇಷಾಧಿಕಾರಿಗೂ ಕಾರು ಏಕೆ?
ಕೇವಲ ಇದಷ್ಟೇ ಅಲ್ಲ, ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ವಿಶೇಷಾಧಿಕಾರಿಗೆ ಮಹಾನಗರಪಾಲಿಕೆ ವತಿಯಿಂದ ಕಾರು ನೀಡಿದ್ದೇಕೆ ಎಂದು ನಗರ ಹಾಗೂ ಪಟ್ಟಣ ಯೋಜನೆಯ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ ಪ್ರಶ್ನಿಸಿದ್ದು, ಮಹಾನಗರಪಾಲಿಕೆಯಲ್ಲಿ ಕಾರು ಬಾಡಿಗೆಗೆಂದು ಕೋಟ್ಯಾಂತರ ಹಣವನ್ನು ಪೋಲು ಮಾಡಲಾಗುತ್ತಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸದೇ ಯಾರ ಯಾರದೋ ಅಭಿವೃದ್ಧಿಗೆ ಬಳಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೋಟಿ ರೂ. ಹಣ ಪೋಲಾಗಿರುವ ಕುರಿತಾಗಿ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ವರ್ಷಕ್ಕೆ ಕೋಟಿಗಟ್ಟಲೇ ಹಣವನ್ನು ಕಾರು ಬಾಡಿಗೆ ಕಟ್ಟುವ ಬದಲು ಪ್ರತಿಯೊಂದು ವಾರ್ಡ್ ಅಭಿವೃದ್ಧಿಗೆ ಬಳಸಿದ್ದರೆ ವಾರ್ಡ್ ಗಳು ಸುಧಾರಣೆಯಾಗುತ್ತಿತ್ತು ಎಂದು ಛೀಮಾರಿ ಹಾಕತೊಡಗಿದ್ದಾರೆ. ಇದೀಗ ಪಾಲಿಕೆ ಆಯುಕ್ತರ ಮುಂದಿನ ನಡೆಯೇನು ಎಂಬುದನ್ನು ಕಾದು ನೋಡಬೇಕಿದೆ