ಮೈಸೂರಿನ ಅರಸಿನಕೆರೆಯಲ್ಲಿ ಅಚ್ಚರಿ! ಮೊದಲು ಸಿಕ್ಕಿದ್ದರ ಎದುರು ಇನ್ನೊಂದು ನಂದಿ
ಮೈಸೂರು, ಜುಲೈ 16: ಎರಡು ದಿನದ ಕೆಳಗೆ ಮೈಸೂರಿನ ಅರಸಿನಕೆರೆ ಗ್ರಾಮದಲ್ಲಿ ಕಂಡುಬಂದ ನಂದಿ ಮೂರ್ತಿಯ ಎದುರೇ ಮತ್ತೊಂದು ನಂದಿ ವಿಗ್ರಹ ಕಂಡಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಹೊರ ತೆಗೆಯಲು ಗ್ರಾಮಸ್ಥರು ಪ್ರಯತ್ನಿಸಿದ್ದರು. ಆದರೆ ಈ ಕಾರ್ಯವನ್ನು ಪುರಾತತ್ವ ಇಲಾಖೆ ಸದ್ಯ ನಿಲ್ಲಿಸಿದೆ.
ಅರಸಿನಕೆರೆ ಗ್ರಾಮದ ಹಳ್ಳವೊಂದರಲ್ಲಿ ನಂದಿ ವಿಗ್ರಹದ ಮುಖದ ಭಾಗ ಮೊದಲು ಕಾಣಿಸಿಕೊಂಡಿತ್ತು. ಅದಕ್ಕೆ ಕೆಲವರು ಪೂಜೆಯನ್ನೂ ಸಲ್ಲಿಸುತ್ತಿದ್ದರು. ಪುರಾತನ ಕಥೆಯನ್ನು ನೆಚ್ಚಿಕೊಂಡಿರುವ ಸ್ಥಳೀಯರು, ಈ ಬಾರಿ ಮೂರ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಹೊರ ತೆಗೆಯಬೇಕೆಂದು ನಿರ್ಧರಿಸಿದ್ದರು.
ಕಥೆಯಾಗಿ ಹೇಳುತ್ತಿದ್ದ ದೊಡ್ಡ ನಂದಿ ವಿಗ್ರಹ ಅರಸನಕೆರೆಯಲ್ಲಿ ಕಣ್ಣೆದುರು ಕಂಡಿತು
ಗ್ರಾಮಸ್ಥರು ಪ್ರತಿ ಮನೆಯಿಂದಲೂ ಹಣ ವಸೂಲಿ ಮಾಡಿ, ಕೆಲಸ ಕೂಡ ಆರಂಭಿಸಿದರು. ದಾನಿಯೊಬ್ಬರು ಜೆಸಿಬಿಯನ್ನು ಉಚಿತವಾಗಿ ನೀಡಿದ್ದರು. ಶೇ 70ರಷ್ಟು ಮೂರ್ತಿ ಸುತ್ತಲ ಮಣ್ಣನ್ನು ತೆರವುಗೊಳಿಸಲಾಯಿತು. ಈ ವೇಳೆ ಮತ್ತೊಂದು ನಂದಿ ಮೂರ್ತಿ ವಿಗ್ರಹ ಕೂಡ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಯವರು ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ತಾತ್ಕಾಲಿಕವಾಗಿ ಈ ಕಾರ್ಯವನ್ನು ಅಲ್ಲಿಗೇ ಕೈ ಬಿಡಲಾಗಿದೆ.
ಜೋಡಿ ನಂದಿ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿದ ಮೈಸೂರಿನ ಪಾರಂಪರಿಕ ಸಮಿತಿ ಸದಸ್ಯರಾದ ರಂಗರಾಜು ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ರಾಜಾಡಳಿತದ ಕಾಲದಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಉದ್ದೇಶದಿಂದಲೇ ಈ ಜೋಡಿ ನಂದಿ ವಿಗ್ರಹಗಳನ್ನು ಕೆತ್ತನೆ ಮಾಡಿರಬಹುದು. ಆದರೆ ಮೂರ್ತಿ ಕೆತ್ತನೆ ಪೂರ್ಣಗೊಂಡಿಲ್ಲ. 20 ಅಡಿ ಕೆಳಗಿರುವ ಈ ಬೃಹತ್ ಮೂರ್ತಿಗಳು ಕಳೆದ ವರ್ಷ ಮಳೆ ನೀರಿನಲ್ಲಿ ಮುಳುಗಿ ಹೋಗಿದ್ದವು. ಈ ಬಾರಿ ಮಳೆ ನೀರು ಕಡಿಮೆ ಇರುವ ಕಾರಣ ಜೆಸಿಬಿಯಿಂದ ಮೂರ್ತಿಯ ಸುತ್ತಲೂ ಮಣ್ಣನ್ನು ತೆಗೆಸಿದ್ದಾರೆ. ಶಿಲೆಯನ್ನು ಗಮನಿಸಿದರೆ ಹಿಂದೆ ಹೊಯ್ಸಳರು ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಕಲ್ಲನ್ನೇ ನಂದಿ ವಿಗ್ರಹ ಕೆತ್ತಲು ಬಳಕೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.