ಅನ್ನಭಾಗ್ಯದಿಂದ ಜನರು ಭಿಕ್ಷುಕರಾಗುತ್ತಿದ್ದಾರೆ: ದೊರೆಸ್ವಾಮಿ
ಮೈಸೂರು, ಜನವರಿ 30 : ಅನ್ನಭಾಗ್ಯ ಯೋಜನೆಯನ್ನು ಆರಂಭಿಸುವ ಮೂಲಕ ಜನರನ್ನು ಸೋಮಾರಿ ಹಾಗೂ ಭಿಕ್ಷುಕರನ್ನಾಗಿ ಮಾಡಲಾಗುತ್ತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಆರೋಪಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ ಗಾಂಧಿ ಅಧ್ಯಯನ ಕೇಂದ್ರ ಮತ್ತು ಹಾರ್ಟ್ಫುಲ್ನೆಸ್ ಇನ್ಸಟಿಟ್ಯೂಟ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಗಾಂಧಿ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 69ನೇ ಸರ್ವೋದಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.[ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ: ಇಲ್ಲೊಂದು ಅಪಸ್ವರ]
ಸರಕಾರ ಅನ್ನ ನೀಡುವ ಬದಲು ಕೆಲಸ ಮಾಡುವವರಿಗೆ ಉದ್ಯೋಗವನ್ನು ನೀಡಿದರೆ, ನಿರುದ್ಯೋಗ ಸಮಸ್ಯೆಯನ್ನಾದರೂ ತಡೆಯಬಹುದಿತ್ತು. ಆದರೆ ಅನ್ನಭಾಗ್ಯ ಯೋಜನೆ ರೂಪಿಸುವ ಮೂಲಕ ಜನರನ್ನು ಸರಕಾರದ ಮುಂದೆ ಭಿಕ್ಷುಕರನ್ನಾಗಿಸಿದ್ದಾರೆ ಎಂದರು. ಅನ್ನ ನೀಡುವ ಬದಲು ಉದ್ಯೋಗ ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಎಂದು ಸಲಹೆ ನೀಡಿದರು.
ಗಾಂಧೀಜಿ ಸ್ವಾತಂತ್ರ್ಯದ ನಂತರ ಬಡತನದ ಪಿಡುಗನ್ನು ದೇಶದಿಂದ ತೊಲಗಿಸಬೇಕೆಂದು ಹೋರಾಡಿದರು. ಆದರೆ ಮೋದಿಯವರು ಪ್ರಧಾನಿಯಾದ ಬಳಿಕ ಶಾಸಕರು, ಸಂಸದರ ಹಾಗೂ ರಾಷ್ಟ್ರಪತಿಗಳ ಸಂಬಳ ಮೂರರಷ್ಟು ಹೆಚ್ಚಾಗಿದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಲೇ ಇದ್ದಾರೆ. ಆದರೆ ದೇಶದಲ್ಲಿ ಬಡವರು ಬಡವರಾಗಿಯೇ ಉಳಿದಿರುವುದು ಮಾತ್ರ ವಿಪರ್ಯಾಸ ಎಂದರು.
ಕಾಳಧನವನ್ನು ತೊಡೆದುಹಾಕಲೆಂದು ನರೇಂದ್ರ ಮೋದಿಯವರು 500, 1000 ಮುಖಬೆಲೆಯ ನೋಟುಗಳನ್ನು ರದ್ದು ಗೊಳಿಸಿದ್ದಾರೆ. ಆದರೆ ಇದರಿಂದ ಕಾಳಧನಿಕರಿಗೆ ತೊಂದರೆಯಾಗಲಿಲ್ಲ. ಜನರು ಸಂಕಷ್ಟ ಅನುಭವಿಸುವಂತಾಯಿತು. ಹಲವು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಮೋದಿ ಉತ್ತಮ ನಾಯಕರಾಗುತ್ತಿದ್ದಾರೆ. ಆದರೆ ಅವರು ಅಂಬಾನಿ, ಅದಾನಿಯಂತಹ ದೊಡ್ಡವರ ಸಹವಾಸ ಬಿಡಬೇಕು ಎಂದು ಸಲಹೆ ನೀಡಿದರು.