ನಾಗರಹೊಳೆ ಅಭಯಾರಣ್ಯದಲ್ಲಿ ಬಸ್ ಅನ್ನು ಅಟ್ಟಾಡಿಸಿಕೊಂಡು ಬಂದ ಗಜರಾಜ
ಮೈಸೂರು, ಜೂನ್ 5 : ಚಲಿಸುತ್ತಿದ್ದ ಬಸ್ ಮೇಲೆ ಆನೆ ಏಕಾಏಕಿ ದಾಳಿ ಮಾಡಲು ಯತ್ನಿಸಿದ ಪರಿಣಾಮ ಬಸ್ ಚಾಲಕ ಅರ್ಧ ಕಿ.ಮೀ ಬಸ್ ಹಿಮ್ಮುಖವಾಗಿ ಚಾಲನೆಮಾಡಿದ ಘಟನೆ ಮೈಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ಕೇರಳ ನೋಂದಣಿಯ ಬಸ್ ಬಳ್ಳೆ ವಲಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಮೂಲಕ ಮಾನಂದವಾಡಿ ಕಡೆಗೆ ತೆರಳುತ್ತಿತ್ತು. ಈ ವೇಳೆ ಗಂಡು ಆನೆ ಏಕಾಏಕಿ ಬಸ್ಮೇಲೆ ದಾಳಿಗೆ ಯತ್ನಿಸಿದೆ. ಈ ಸಂದರ್ಭದಲ್ಲಿ ಚಾಲಕ ಬಸ್ ಅನ್ನು ಅರ್ಧ ಕಿ.ಮೀ ಹಿಮ್ಮುಖವಾಗಿ ಚಾಲನೆ ಮಾಡಿದ್ದಾರೆ.
ಆನೆ ಅಟ್ಟಿಸಿಕೊಂಡು ಬಂದ ಹಿನ್ನಲೆಹಿಮ್ಮುಖವಾಗಿ ಚಾಲನೆ ಮಾಡಿದ್ದು ಬಸ್ ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಕೂಗಾಡಿದ್ದಾರೆ. ಪ್ರಯಾಣಿಕರ ಕಿರುಚಾಟದಿಂದ ಹೆದರಿದ ಗಜರಾಜ ಮತ್ತೆ ಕಾಡಿನ ದಾರಿಹಿಡಿದಿದೆ.
ಗಜರಾಜನ ಆರ್ಭಟ ಕಂಡು ಹೆದರಿದ ಜನರು ಕೆಲ ಕಾಲ ಬೆಚ್ಚಿಬಿದ್ದಿದ್ದರು. ಅನೆ ಕಾಡಿನ ದಾರಿ ಹಿಡಿದ ಬಳಿಕ ಸಾವಿನ ದವಡೆಯಿಂದ ಪಾರಾದೆವೆಂದು ನಿಟ್ಟುಸಿರುಬಿಟ್ಟಿದ್ದಾರೆ.
ಚಿಕ್ಕಮಗಳೂರಿನ ಸಂತವೇರಿ ಘಾಟ್ ಬಳಿ ಕಳೆದ ತಿಂಗಳು ಇದೇ ರೀತಿಯ ಘಟನೆ ನಡೆದಿತ್ತು. ಒಂಟಿ ಸಲಗ ಎದುರಾಗಿ ಬಂದಾಗ ಕೆಎಸ್ಆರ್ಟಿಸಿ ಬಸ್ ಚಾಲಕ ಸುಮಾರು ಒಂದು ಕಿ.ಮೀ. ದೂರ ಹಿಮ್ಮುಖವಾಗಿ ಬಸ್ ಚಲಾಯಿಸಿ ಪ್ರಯಾಣಿಕರನ್ನು ರಕ್ಷಿಸಿದ್ದರು.