ಲಂಡನ್ ಮಾದರಿಯ ‘ಅಂಬಾರಿ’ ಬಸ್ ಕೇಳೋರಿಲ್ಲ!
ಮೈಸೂರು, ಫೆಬ್ರವರಿ 11; ಕೆಎಸ್ಆರ್ಟಿಸಿ ಚಾಲನೆ ನೀಡಿದ್ದ ಬಹು ನಿರೀಕ್ಷಿತ ಲಂಡನ್ ಮಾದರಿಯ 'ಅಂಬಾರಿ' ಬಸ್ಗಳಿಗೆ ಜನರೇ ಬರುತ್ತಿಲ್ಲ. ಪರಿಣಾಮ ಒಂದೊಳ್ಳೆ ಯೋಜನೆ ಹಳ್ಳ ಹಿಡಿಯುವ ಲಕ್ಷಣ ಗೋಚರಿಸಿದೆ.
ಕೊರೊನಾ ಕಾರಣಕ್ಕೆ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಲವು ಮನೆಗಳಲ್ಲಿ ನಾಗರಿಕರು ಜ್ವರ, ಶೀತ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದಾರೆ. ಹೀಗಾಗಿ ಇಲಾಖೆಯು ಪ್ರಯಾಣಿಕರಿಲ್ಲದೇ ನಿರೀಕ್ಷಿತ ಆದಾಯ ದೊರೆಯದೇ ಬಸ್ ನಿರ್ವಹಣೆಗೆ ಅನುದಾನದ ಕೊರತೆ ಎದುರಿಸುತ್ತಿದೆ.
ಅಲ್ಲದೆ, ಮೈಸೂರು ನಗರ ಸಾರಿಗೆ ವಿಭಾಗವನ್ನು ಗ್ರಾಮಾಂತರ ವಿಭಾಗದೊಂದಿಗೆ ವಿಲೀನಗೊಳಿಸಲಾಗಿದೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಗುರಿಯಾಗಿಸಿಕೊಂಡು ಆರಂಭಿಸಲಾಗಿದ್ದ ಅಂಬಾರಿ ಯೋಜನೆ ಇದೀಗ ಪ್ರಯಾಣಿಕರೇ ಇಲ್ಲದೆ ಭಣಗುಡುತ್ತಿದೆ.
ಮೈಸೂರಿನಲ್ಲಿ 'ಅಂಬಾರಿ' ಸಂಚಾರಕ್ಕೆ ಕಾಲ ಕೂಡಿ ಬಂತು!
ಮೈಸೂರಿಗೆ ಆಗಮಿಸುವ ಪ್ರವಾಸಿಗರ ಮನತಣಿಸಲೆಂದು ದಸರಾ ವೇಳೆ ನಗರದ ದಾಸಪ್ಪ ಸರ್ಕಲ್ ಬಳಿ ಇರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಕಚೇರಿಯಿಂದ ಆರಂಭಿಸಿದ್ದ ಡಬ್ಬಲ್ ಡೆಕ್ಕರ್ ಬಸ್ಸಿಗೆ ಸದ್ಯ ಕೊರೊನಾ ಭೀತಿಯಿಂದ ಸಾರ್ವಜನಿಕರು ಬರುತ್ತಿಲ್ಲ. ಪರಿಣಾಮ ಕೇವಲ ಒಂದು ಬಸ್ ಸಂಚರಿಸುತ್ತಿದ್ದು, ಉಳಿದ 5 ಬಸ್ಗಳನ್ನು ಬನ್ನಿಮಂಟಪದ ಕೆಎಸ್ಆರ್ಟಿಸಿ ಡಿಪೋದಲ್ಲಿ ನಿಲ್ಲಿಸಲಾಗಿದೆ.
ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್
6 ಅಂಬಾರಿ ಬಸ್ಗಳಿವೆ
ಮೈಸೂರಿನಲ್ಲಿ ಒಟ್ಟು 6 ಅಂಬಾರಿ ಬಸ್ಗಳಿವೆ. ಆದರೆ, ಸದ್ಯಕ್ಕೆ ಕೇವಲ ಒಂದು ಬಸ್ ಸಂಚರಿಸುತ್ತಿದೆ. ಅದೂ ದಿನಕ್ಕೆ ಒಂದು ಟ್ರಿಪ್ ಮಾತ್ರ. ಕೇವಲ 6 ರಿಂದ 10 ಮಂದಿ ಸವಾರಿ ಮಾಡಿ ನಗರದ ಪ್ರಮುಖ ರಸ್ತೆ, ಪಾರಂಪರಿಕ ಕಟ್ಟಡಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಪ್ರತಿ ಟಿಪ್ ಮುಗಿಯುತ್ತಿದ್ದಂತೆ ಬಸ್ ಸ್ವಚ್ಛಗೊಳಿಸಿ ಅದನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸವಾರಿ ಮಾಡುವವರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವುದೂ ಸೇರಿದಂತೆ ಕೋಡ್ ಮಾರ್ಗಸೂಚಿ ಪಾಲಿಸುವಂತೆ ಬಸ್ ಡ್ರೈವರ್ ನಿಗಾ ವಹಿಸುತ್ತಿದ್ದಾರೆ.
ಹೆಚ್ಚುವರಿ ಬಸ್ಗಳ ಸಂಚಾರ
ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬಂದರೆ ಮಾತ್ರ ಹೆಚ್ಚುವರಿ ಬಸ್ ತರಿಸಿ ಟ್ರಿಪ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಬಾರಿ ಬಸ್ ಸೇವೆಯ ಲೋಯರ್ ಡೆಕ್ನಲ್ಲಿ 40 ಆಸನಗಳಿವೆಯಾದರೂ ಓಪನ್ ರೂಟ್ ಆಸನಗಳನ್ನು ಮಾತ್ರ ಜನರು ಆಯ್ಕೆ ಮಾಡಿಕೊಂಡು ಸಂಜೆ ಅಥವಾ ಬೆಳಗ್ಗೆ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಒಂದು ಟ್ರಿಪ್ ಪೂರ್ಣಗೊಳಿಸಲು 2 ತಾಸು ಬೇಕಿದೆ.
ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ?
ದಸರಾ ವೇಳೆ ವಿದ್ಯುತ್ ದೀಪಾಲಂಕಾರವಿದ್ದ ಕಾರಣ ಅಂಬಾರಿ ಬಸ್ನಲ್ಲಿ ನಗರ ಸುತ್ತಲು ಭಾರೀ ಬೇಡಿಕೆ ಇತ್ತು. 6 ಬಸ್ಗಳೂ ಪ್ರತಿನಿತ್ಯ ಕನಿಷ್ಠ 3 ಟ್ರಿಪ್ ಮಾಡುತ್ತಿದ್ದವು. ಕೆಲವೊಮ್ಮೆ ಆಸನಗಳು ಸಿಗದೇ ಪ್ರವಾಸಿಗರು ಈ ಬಸ್ಸಿನಲ್ಲಿ ನಿಂತುಕೊಂಡೇ ವಿಹರಿಸುತ್ತಿದ್ದರು. ಹೆಚ್ಚು ಒತ್ತಡವಿಲ್ಲದೇ ಇರುವುದರಿಂದ ನಿಧಾನವಾಗಿ ಚಲಿಸುವ ಅಂಬಾರಿ ಬಸ್ನಲ್ಲಿ ಪ್ರಯಾಣಿಕರು ಪಾರಂಪರಿಕ ಕಟ್ಟಡ, ಸ್ಮಾರಕಗಳನ್ನು ನೋಡಿ ಖುಷಿಪಡುತ್ತಿದ್ದರು.
ಆದರೆ, ಸದ್ಯ ಕೊರೊನಾದಿಂದ ಜನ ಆತಂಕಗೊಂಡು ಅಂಬಾರಿ ಬಸ್ ಕಡೆ ಮುಖ ಮಾಡಿಲ್ಲ. ಮುಂದಿನ ದಿನಗಳಲ್ಲಿ ಕೊರೊನಾ ಪ್ರಖರತೆ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿ ಅಂಬಾರಿಗೆ ಮತ್ತೆ ಮರುಜೀವ ಬರಬಹುದು ಎಂಬುದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ನಿರೀಕ್ಷೆ.
ಸೆಪ್ಟೆಂಬರ್ನಲ್ಲಿ ಬಸ್ ಸೇವೆ ಆರಂಭವಾಗಿದೆ
2021ರ ಸೆಪ್ಟೆಂಬರ್ನಲ್ಲಿ ಅಂಬಾರಿ ಬಸ್ ಸೇವೆ ಆರಂಭಿಸಲಾಯಿತು. ಬಸ್ನಲ್ಲಿ ಪ್ರಯಾಣ ಮಾಡಲು ಪೂರ್ತಿ ದಿನಕ್ಕೆ 250 ರೂ. ದರವನ್ನು ನಿಗದಿ ಮಾಡಲಾಗಿದೆ. ಬಸ್ಸಿನಲ್ಲಿ ಸಂಚರಿಸುವಾಗ ಪ್ರತಿ ಸ್ಥಳದ ಮಾಹಿತಿಯನ್ನು ಆಡಿಯೋ, ವಿಡಿಯೋ ಸಿಸ್ಟಮ್ನಿಂದ ಪ್ರಯಾಣಿಕರಿಗೆ ವಿವರಿಸಲಾಗುತ್ತದೆ.
ಬೆಂಗಳೂರಿನ ಕೆಎಂಎಸ್ ಬಸ್ ಕವಚ ನಿರ್ಮಾಣ ಸಂಸ್ಥೆ ಈ ಐಷಾರಾಮಿ ಅಂಬಾರಿ ಬಸ್ ನಿರ್ಮಾಣ ಮಾಡಿದೆ. ಮೇಲೆ ಮತ್ತು ಕೆಳಗೆ ಸೇರಿ 40 ಆಸನಗಳಿವೆ. ಸುಮಾರು ಇಪ್ಪತೈದು ಅಡಿಯಷ್ಟು ಎತ್ತರವಿದೆ ಈ ಬಸ್. ಮೈಸೂರು ನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಹಲವು ರಾಜ್ಯ ಸರ್ಕಾರ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಿತ್ತು. ಇದರಲ್ಲಿ ಲಂಡನ್ ಬಿಗ್ ಬಸ್ ಮಾದರಿಯಲ್ಲಿ ಡಬಲ್ ಡೆಕ್ಕರ್ ತೆರೆದ ಬಸ್ ಸೇವೆಯನ್ನು ನಗರದಲ್ಲಿ ಆರಂಭಿಸುವುದು ಸೇರಿತ್ತು.
Recommended Video