ಸೆ. 4ರಂದು ರಸ್ತೆಗಿಳಿಯಲಿದೆ ಅಂಬಾರಿ ಬಸ್; ದರ, ವೇಳಾಪಟ್ಟಿ
ಮೈಸೂರು, ಸೆಪ್ಟೆಂಬರ್ 03; ಮೈಸೂರು ನಗರದಲ್ಲಿ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ ಸೆಪ್ಟೆಂಬರ್ 4ರ ಶನಿವಾರದಿಂದ ಆರಂಭವಾಗುತ್ತಿದೆ. ಓಪನ್ ಟಾಪ್ ವ್ಯವಸ್ಥೆ ಹೊಂದಿರುವ ಡಬಲ್ ಡೆಕ್ಕರ್ ಬಸ್ನಲ್ಲಿ ಕುಳಿತು ಪ್ರವಾಸಿಗರು ಮೈಸೂರು ನಗರದ ಸೌಂದರ್ಯವನ್ನು ಸವಿಯಬಹುದಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾ. ಪು. ಸಿದ್ಧಲಿಂಗಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಳಗ್ಗೆ 9.30 ರಿಂದ ಸಂಜೆ 5.30 ರವರಗೆ ಅಂಬಾರಿ ಡಬಲ್ ಡೆಕ್ಕರ್ ವಾಹನವು ಸಂಚಾರ ನಡೆಸಲಿದೆ.
ಬಳ್ಳಾರಿ; ಹೈದರಾಬಾದ್, ಚೆನ್ನೈಗೆ ಬಸ್ ಸಂಚಾರ ಆರಂಭ
ಅಂಬಾರಿ ಬಸ್ನಲ್ಲಿ ಪ್ರಯಾಣ ಮಾಡಲು ಪೂರ್ತಿ ದಿನಕ್ಕೆ 250 ರೂ. ದರವನ್ನು ನಿಗದಿ ಮಾಡಲಾಗಿದೆ. ಬಸ್ಸಿನಲ್ಲಿ ಸಂಚರಿಸುವಾಗ ಪ್ರತಿ ಸ್ಥಳದ ಮಾಹಿತಿಯನ್ನು ಆಡಿಯೋ, ವಿಡಿಯೋ ಸಿಸ್ಟಮ್ನಿಂದ ವಿವರಿಸಲಾಗುತ್ತದೆ.
ಮೈಸೂರಿನಲ್ಲಿ 'ಅಂಬಾರಿ' ಸಂಚಾರಕ್ಕೆ ಕಾಲ ಕೂಡಿ ಬಂತು!
ಅಂಬಾರಿ ಬಸ್ನ ಮೇಲಿನ ಮಹಡಿ ತೆರೆದಿದ್ದರೆ ಕೆಳಗಿನ ಮಹಡಿ ಹವಾನಿಯಂತ್ರಿತವಾಗಿದೆ. ಸಿಸಿಟಿವಿ ಸೇರಿದಂತೆ ಎಲ್ಲ ಸೌಲಭ್ಯಗಳು ಇದರಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಜನರು ದೂರವಾಣಿ ಸಂಖ್ಯೆ 0821-2423652 ಸಂಪರ್ಕಿಸಬಹುದು.
ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್
ಬಸ್ ಸಂಚಾರದ ಮಾರ್ಗ; ಅಂಬಾರಿ ಡಬಲ್ ಡೆಕ್ಕರ್ ಬಸ್ ನಗರ ಸಂಚಾರ ಹೋಟೆಲ್ ಮಯೂರ ಹೊಯ್ಸಳದಿಂದ ಆರಂಭ. ಡಿಸಿ ಕಛೇರಿ, ಕುಕ್ಕರಹಳ್ಳಿ ಕೆರೆ, ಮೈಸೂರು ವಿಶ್ವವಿದ್ಯಾನಿಲಯ, ರಾಮಸ್ವಾಮಿ ಸರ್ಕಲ್, ಸಂಸ್ಕೃತ ಪಾಠಶಾಲೆ, ಕೆ.ಆರ್.ಸರ್ಕಲ್, ದೊಡ್ಡ ಗಡಿಯಾರ, ಅರಮನೆ ದಕ್ಷಿಣ ದ್ವಾರ, ಹಾರ್ಡಿಂಜ್ ಸರ್ಕಲ್, ಮೃಗಾಲಯ, ಕಾರಂಜಿ ಕೆರೆ, ಗೌಮೆರ್ಂಟ್ ಗೆಸ್ಟ್ ಹೌಸ್, ಸಂತ ಫಿಲೋಮಿನಾ ಚರ್ಚ್, ಬನ್ನಿಮಂಟಪ, ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್, ರೈಲ್ವೆ ನಿಲ್ದಾಣ. ಬಳಿಕ ಹೋಟೆಲ್ ಮಯೂರ ಹೊಯ್ಸಳಕ್ಕೆ ವಾಪಸ್ ಆಗಲಿದೆ.
ಡಬಲ್ ಡೆಕ್ಕರ್ ಅಂಬಾರಿ ಬಸ್ ಸುಮಾರು 25 ಅಡಿಗಳಷ್ಟು ಎತ್ತರವಿದೆ. ಬಸ್ ಸಂಚಾರಕ್ಕೆ ಅಡಚಣೆಯಾಗದಂತೆ ಈ ಬಸ್ ಸಂಚರಿಸುವ ಮಾರ್ಗದಲ್ಲಿದ್ದ ಬಾಗಿಕೊಂಡಿರುವ ಮರಗಳ ಕೊಂಬೆಯನ್ನು ಕತ್ತರಿಸಿ ಓಡಾಟಕ್ಕೆ ಅಗತ್ಯ ವ್ಯವಸ್ಥೆಯನ್ನು ಮಾಡಲಾಗಿದೆ.
ಕಳೆದ ವರ್ಷದ ದಸರಾ ಸಂದರ್ಭದಲ್ಲಿ ನಗರದ ದೀಪಾಲಂಕಾರ ನೋಡಲೆಂದು 'ಅಂಬಾರಿ' ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ದೀಪಾಲಂಕಾರದ ಕಾರಣದಿಂದಾಗಿಯೇ ಬಸ್ ಸಂಚಾರಕ್ಕೆ ಅಡ್ಡಿಯಾಗಿತ್ತು.
ನಗರಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ದಸರಾ ಬಳಿಕವೂ ಬಸ್ ಸೇವೆ ಮುಂದುವರೆಸುವ ಯೋಜನೆ ಇತ್ತು. ಆದರೆ ಕೆಲವೊಂದು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಬಳಿಕ ಕೋವಿಡ್ ಕಾರಣದಿಂದಾಗಿ ಅಂಬಾರಿ ಬಸ್ ರಸ್ತೆಗೆ ಬಂದಿರಲಿಲ್ಲ.
ಬೆಂಗಳೂರಿನಲ್ಲಿರುವ ಕೆಎಂಎಸ್ ಬಸ್ ಕವಚ ನಿರ್ಮಾಣ ಸಂಸ್ಥೆ ಈ ಐಷಾರಾಮಿ ಅಂಬಾರಿ ಬಸ್ ತಯಾರು ಮಾಡಿದೆ. ಮೇಲೆ ಮತ್ತು ಕೆಳಗೆ ಸೇರಿ 40 ಆಸನಗಳಿವೆ. ಸುಮಾರು ಇಪ್ಪತೈದು ಅಡಿಯಷ್ಟು ಎತ್ತರವಿದೆ ಈ ಬಸ್.
ಕರ್ನಾಟಕ ಸರ್ಕಾರ ಮೈಸೂರು ನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಹಲವು ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಿತ್ತು. ಲಂಡನ್ ಬಿಗ್ ಬಸ್ ಮಾದರಿಯಲ್ಲಿ ಡಬಲ್ ಡೆಕ್ಕರ್ ತೆರೆದ ಬಸ್ ಸೇವೆಯನ್ನು ನಗರದಲ್ಲಿ ಆರಂಭಿಸುವುದು ಈ ಘೋಷಣೆಯಲ್ಲಿ ಸೇರಿತ್ತು.
ಸರ್ಕಾರ ಈ ಯೋಜನೆಗಾಗಿ 5 ಕೋಟಿ ರೂ. ಅನುದಾನವನ್ನು ಸಹ ನೀಡಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ನಗರದಲ್ಲಿ ಆರಂಭಿಸಲಾಗುತ್ತಿದೆ.
ಅಂಬಾರಿ ಡಬಲ್ ಡೆಕ್ಕರ್ ಬಸ್ ಮೈಸೂರು ನಗರದಲ್ಲಿ ಈಗಾಗಲೇ ಪ್ರಾಯೋಗಿಕ ಸಂಚಾರವನ್ನು ಪೂರ್ಣಗೊಳಿಸಿದೆ. ಮಾರ್ಚ್ನಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿತ್ತು. ಆದರೆ ಕೋವಿಡ್ ಲಾಕ್ಡೌನ್ ಕಾರಣ ಬಸ್ ಸಂಚಾರ ಆರಂಭವಾಗಿರಲಿಲ್ಲ.
ಕೋವಿಡ್ ಪರಿಸ್ಥಿತಿ ಈಗ ಸುಧಾರಿಸಿದೆ. ಮೈಸೂರಿನ ಪ್ರವಾಸೋದ್ಯಮವೂ ಚೇತರಿಕೆಯನ್ನು ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಅಂಬಾರಿ ಬಸ್ ಸೇವೆಯನ್ನು ನಗರದಲ್ಲಿ ಮತ್ತೆ ಆರಂಭಿಸಲಾಗಿದೆ. ಪ್ರವಾಸಿಗರು ಬಸ್ ಮೂಲಕ ನಗರದ ಸೌಂದರ್ಯವನ್ನು ಸವಿಯಬಹುದಾಗಿದೆ.
Recommended Video