ಹುಣಸೂರಿನಲ್ಲಿ ಎಚ್ ವಿಶ್ವನಾಥ್ ಸೋಲಿಗೆ ಕಾರಣರಾದ ಬಿಜೆಪಿ ನಾಯಕರು!
ಮೈಸೂರು, ಡಿ 19: "ಹುಣಸೂರಿನಲ್ಲಿ ನನ್ನ ಸೋಲಿಗೆ ಕಾರಣವಾದ ಸತ್ಯಾಂಶವನ್ನು ಹೇಳಲೇಬೇಕಿದೆ. ಸತ್ಯವನ್ನು ಎಷ್ಟು ದಿನಾಂತಾ ಮುಚ್ಚಿಡಲು ಸಾಧ್ಯ" ಎಂದು, ಮಾಜಿ ಶಾಸಕ, ಎಚ್. ವಿಶ್ವನಾಥ್ ಹೇಳಿದರು.
"ನನ್ನ ಸೋಲಿಗೆ ಹೇಗೆ ಕಾಂಗ್ರೆಸ್-ಜೆಡಿಎಸ್ ನಾಯಕರು ಒಂದಾದರೋ, ಅದೇ ರೀತಿ ಬಿಜೆಪಿಯ ಕೆಲವು ಮುಖಂಡರೂ ಕಾರಣ" ಎಂದು ವಿಶ್ವನಾಥ್, ಗಂಭೀರ ಆರೋಪ ಹೊರಿಸಿದ್ದಾರೆ.
ನಾನು ಚುನಾವಣೆಯಲ್ಲಿ ಸೋತಿರಬಹುದು, ಇನ್ನೂ ಸತ್ತಿಲ್ಲ: ಎಚ್ ವಿಶ್ವನಾಥ್
ಸೋಲಿಗೆ ಕಾರಣರಾದ ಬಿಜೆಪಿ ಮುಖಂಡರು ಯಾರು ಎನ್ನುವುದನ್ನು ನೇರವಾಗಿ ಹೇಳದ ವಿಶ್ವನಾಥ್, "ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೇ ಇಲ್ಲಿ ಮಾರಾಟವಾದರು" ಎಂದು ಹೇಳಿದ್ದಾರೆ.
"ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ಸಿಗೆ ಮಾರಾಟವಾದ ವಿಚಾರ ಗೌಪ್ಯವಾಗಿಯೇನೂ ಉಳಿದಿಲ್ಲ. ಆದರೆ, ನನ್ನನ್ನು ನಾನು ಯಾರಿಗೂ ಮಾರಿಕೊಂಡಿಲ್ಲ" ಎಂದು ಎಚ್.ವಿಶ್ವನಾಥ್ ಹೇಳುತ್ತಾ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಇನ್ನಷ್ಟು ತರಾಟೆಗೆ ತೆಗೆದುಕೊಂಡರು.
ಯೋಗೀಶ್ವರ್ ಕೊಟ್ಟ ಸೀರೆಯನ್ನು ಬೀದಿಗೆ ಬಿಸಾಕಿದರು: ಜಿ.ಟಿ.ದೇವೇಗೌಡ
"ಎಚ್.ವಿಶ್ವನಾಥ್ ಸೋಲಿನಲ್ಲಿ ನನ್ನ ಪಾತ್ರವಿಲ್ಲ, ಇರುವುದು ಸಿ.ಪಿ.ಯೋಗೀಶ್ವರ್ ಪಾತ್ರ. ಸಿ.ಪಿ.ಯೋಗೀಶ್ವರ್, ಕ್ಷೇತ್ರಕ್ಕೆ ಬಂದು, 'ಜಿ.ಟಿ.ದೇವೇಗೌಡ ಯಾರು, ದೇವೇಗೌಡ ಯಾರು, ಕುಮಾರಸ್ವಾಮಿ ಯಾರು ಎಂದೆಲ್ಲಾ ಏಕವಚನದಲ್ಲಿ ಮಾತನಾಡಿದ್ದಾರೆ. ಅದೇ ವಿಶ್ವನಾಥ್ ಅವರಿಗೆ ಮುಳುವಾಯಿತು" ಎನ್ನುವ ಆರೋಪವನ್ನು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮಾಡಿದ್ದರು.
ಎಚ್.ವಿಶ್ವನಾಥ್ ಸೋಲಿಗೆ, ಜಿಟಿಡಿ, ನೇರವಾಗಿ, ಬಿಜೆಪಿ ಮುಖಂಡ ಯೋಗೀಶ್ವರ್ ಅವರೇ ಕಾರಣ ಎಂದಿದ್ದರು. ಇದನ್ನೇ, ಪರೋಕ್ಷವಾಗಿ ವಿಶ್ವನಾಥ್ ಮತ್ತೆ ಪುನರುಚ್ಚಿಸಿದ್ದಾರೆ.