ಪಾಲಿಕೆ ಮೈತ್ರಿ ಗೊಂದಲ: ಭಿನ್ನಮತ ಶಮನಕ್ಕೆ ಮುಂದಾದ ಹೈಕಮಾಂಡ್?
ಮೈಸೂರು, ಫೆಬ್ರವರಿ 28: ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಉಂಟಾಗಿದೆ. ಪಕ್ಷದಲ್ಲಿನ ಭಿನ್ನಮತದ ವಿಚಾರ ಇದೀಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.
ಇತ್ತೀಚೆಗೆ ನಡೆದ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಇಡೀ ರಾಜ್ಯ ರಾಜಕೀಯದ ಗಮನ ಸೆಳೆದಿತ್ತು. ಮೈತ್ರಿ ವಿಚಾರದಲ್ಲಿ ಆರಂಭದಿಂದಲೂ ಮೂರು ಪಕ್ಷಗಳಲ್ಲಿ ಕುತೂಹಲ ಮನೆ ಮಾಡಿತ್ತು. ಆದರೆ ಸಾಕಷ್ಟು ಊಹಾಪೋಹ, ಗೊಂದಲದ ಬೆಳವಣಿಗೆಗಳ ನಡುವೆ ಅಂತಿಮವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ದೋಸ್ತಿ ನಡೆದು, ಪಾಲಿಕೆಯ ಮೇಯರ್ ಸ್ಥಾನ ಜೆಡಿಎಸ್ ಪಾಲಾದರೆ, ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ತೃಪ್ತಿಪಟ್ಟಿತ್ತು.
ಮೈಸೂರು ಮೇಯರ್ ಚುನಾವಣೆ: ದೋಸ್ತಿಗೆ 'ಕೈ' ನಾಯಕರ ಭಿನ್ನರಾಗ!
ಆದರೆ, ಬೇಕು-ಬೇಡಗಳ ನಡುವೆ ಮಾಡಿಕೊಂಡ ಮೈತ್ರಿ ವಿಚಾರ ಕೈ ಪಾಳಯದಲ್ಲಿ ದೊಡ್ಡಮಟ್ಟದ ಭಿನ್ನಮತ ಸ್ಪೋಟಕ್ಕೆ ಎಡೆಮಾಡಿಕೊಟ್ಟಿತು. ಪ್ರಮುಖವಾಗಿ ಮೇಯರ್ ಸ್ಥಾನ ಬಿಟ್ಟುಕೊಟ್ಟು ಮೈತ್ರಿ ಮಾಡಿಕೊಂಡ ಶಾಸಕ ತನ್ವೀರ್ ಸೇಠ್ ನಿರ್ಧಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವು ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಮೈಸೂರು ಮೇಯರ್ ಚುನಾವಣೆ; ಬಿಜೆಪಿಯ ಸುನಂದಾ ಪಾಲನೇತ್ರ ರಾಜೀನಾಮೆ?
ಈ ನಡುವೆ ಮೈತ್ರಿ ವಿಷಯದಲ್ಲಿ ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಶಾಸಕ ತನ್ವೀರ್ ಸೇಠ್ ಅವರನ್ನ ಮಾರ್ಚ್ 1ರಂದು ಖುದ್ದು ಭೇಟಿಯಾಗಿ ಸ್ಪಷ್ಟನೆ ನೀಡುವಂತೆ ಸೂಚನೆ ಸಹ ನೀಡಿದ್ದಾರೆ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ಸ್ಪಷ್ಟ ನಿಲುವು ಹೊಂದಿರುವ ತನ್ವೀರ್ ಸೇಠ್ ಸಹ ಕೆಪಿಸಿಸಿ ಅಧ್ಯಕ್ಷರ ಭೇಟಿಗೆ ಸಜ್ಜಾಗಿದ್ದಾರೆ.
ಮೈಸೂರು ಪಾಲಿಕೆ ನೂತನ ಮೇಯರ್ ಆಗಿ ರುಕ್ಮಿಣಿ ಮಾದೇಗೌಡ ಆಯ್ಕೆ; ಬಿಜೆಪಿಗೆ ಮುಖಭಂಗ
ಹೈಕಮಾಂಡ್ ಮಧ್ಯ ಪ್ರವೇಶ?
ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಭಿನ್ನಮತದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಕಾಂಗ್ರೆಸ್ ಹೈಕಮಾಂಡ್, ಇದೀಗ ಭಿನ್ನಮತ ಶಮನಕ್ಕೆ ಮುಂದಾದಂತಿದೆ. ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಳ್ಳುತ್ತಿರುವ ಕೈ ನಾಯಕರು, ಮೈಸೂರು ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ವಿಷಯದಲ್ಲಿ ಆಗಿರುವ ಗೊಂದಲದ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆ ಇದೆ.
ಭಾನುವಾರ ದೆಹಲಿಗೆ ಸಿದ್ದರಾಮಯ್ಯ
ಅಲ್ಲದೇ, ಮೈತ್ರಿ ವಿಷಯದ ಕುರಿತು ಮೊದಲಿಗೆ ಅಪಸ್ವರ ಎತ್ತಿದ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುಲಾವ್ ನೀಡಿರುವುದು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕುತೂಹಲ ಮೂಡಿಸಿದೆ. ಹೀಗಾಗಿ ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಭೇಟಿಯಾಗುವ ಸಾಧ್ಯತೆ ಇದೆ.
ಡಿಕೆಶಿ ಏಕಪಕ್ಷೀಯ ನಿರ್ಧಾರದ ಬಗ್ಗೆ ಚರ್ಚೆ?
ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರ ಪ್ರಸ್ತಾಪಿಸಲಿದ್ದು, ಜೆಡಿಎಸ್ ಜೊತೆ ಮೈತ್ರಿ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತೆಗೆದುಕೊಂಡಏಕಪಕ್ಷೀಯ ನಿರ್ಧಾರದ ಬಗ್ಗೆ ವಿವರಣೆ ನೀಡಲಿದ್ದಾರೆ. ಇದರಿಂದ ಪಕ್ಷದ ಮೇಲಾಗುವ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ
ಮೈತ್ರಿ ವಿಚಾರದಲ್ಲಿ ಶಾಸಕ ತನ್ವೀರ್ ಸೇಠ್ಗೆ ಕೆಪಿಸಿಸಿ ವತಿಯಿಂದ ನೋಟಿಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ವೀರ್ ಬೆಂಬಲಿಗರು ರೊಚ್ಚಿಗೆದ್ದಿದ್ದರು. ಮೈಸೂರಿನ ಪ್ರಭಾವಿ ರಾಜಕಾರಣಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಶಾಸಕ ತನ್ವೀರ್ ತಂತ್ರ ಉಪಯೋಗಿಸಿ ಪಾಲಿಕೆಯಲ್ಲಿ ಜೆಡಿಎಸ್ ಜತೆ ಮೈತ್ರಿಗೆ ಒಪ್ಪಿಕೊಂಡರು, ಅಂಥವರಿಗೆ ಕೆಪಿಸಿಸಿಯಿಂದ ನೋಟಿಸ್ ಕೊಡಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.