ದಸರಾ ಪಾಸ್ ವಿತರಣೆಯಲ್ಲಿ ತಾರತಮ್ಯದ ಆರೋಪ; ವಿದೇಶಿಗರಿಗೂ ಸಿಗಲಿಲ್ಲ ಗೋಲ್ಡ್ ಪಾಸ್
ಮೈಸೂರು, ಅಕ್ಟೋಬರ್ 9: ಈ ಬಾರಿಯ ದಸರಾ ಪಾಸ್ ವಿತರಣೆಯನ್ನು ಅಸಮರ್ಪಕವಾಗಿ ಮಾಡಲಾಗಿದ್ದು, ಇದು ಸ್ಥಳೀಯರು, ಪ್ರವಾಸಿಗರಿಗಷ್ಟೇ ಅಲ್ಲದೇ ವಿದೇಶಿಯರ ಮನಸ್ಸಿಗೂ ಬೇಸರ ಉಂಟು ಮಾಡಿದೆ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.
ಪತ್ರಕರ್ತರೊಂದಿಗೆ ಮಾತನಾಡಿದ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅರವಿಂದ ಶರ್ಮಾ ಅವರು "ಪಾಸ್ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣರನ್ನು ಪ್ರತಿ ದಿನ ಹಿಂದೆ ಹೋಗಿ ಓಲೈಸುತ್ತಿದ್ದವರ ಜೇಬಿನ ತುಂಬ ಜಂಬೂಸವಾರಿ ಟಾರ್ಚ್ ಲೈಟ್ ಪಾಸ್ ಇದ್ದು, ಬೇಕಾದವರಿಗೆ ಮಾತ್ರ ಪಾಸನ್ನು ನೀಡಿದ್ದಾರೆ" ಎಂದು ಆರೋಪಿಸಿದರು.
ಅದ್ಧೂರಿಯ ಮೈಸೂರು ದಸರಾ; ಜಂಬೂಸವಾರಿಗೆ ಸಾಕ್ಷಿಯಾದ ಲಕ್ಷಾಂತರ ಜನ
ದಸರಾ ಪಾಸ್ ವಿತರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಹೋರಾಟಗಾರರನ್ನು ಕಡೆಗಣನೆ ಮಾಡಿದ ಮೈಸೂರು ಜಿಲ್ಲಾಡಳಿತದ ಈ ವರ್ತನೆಯನ್ನು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ದಸರಾ ಅತಿಥಿ ಪಾಸ್ ಗಳನ್ನು ಅರಮನೆಯ ಅಂಬಾ ವಿಲಾಸ ಗೇಟ್ ಬಳಿ ಮಂಗಳವಾರ ಬೆಳಿಗ್ಗೆ ಮಾರಾಟ ಮಾಡುತಿದ್ದ ಎಂದು ಆರೋಪಿಸಲಾಗಿದೆ. ಈ ಹಿಂದೆ ನಗರಪಾಲಿಕೆಯ ಪ್ರತೀ ಸದಸ್ಯರಿಗೂ ತಲಾ 25 ಪಾಸ್ ಗಳನ್ನು ನೀಡಲಾಗುತಿತ್ತು. ಆದರೆ ಈ ಬಾರಿ ಕೇವಲ 5 ಪಾಸ್ ಗಳನ್ನು ನೀಡಲಾಗಿದೆ. ಇದನ್ನು ಪ್ರತಿಭಟಿಸಿ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಪಾಲಿಕೆ ಸದಸ್ಯರು ಪ್ರತಿಭಟನೆಯನ್ನೂ ಮಾಡಿದ್ದರು.
ಈ ಬಾರಿ ದಸರಾ ಪಾಸ್ ದೊರಕದೆ ವಿದೇಶೀಯರಿಗೂ ತೀವ್ರ ನಿರಾಸೆಯಾಗಿದೆ. ಸಾಮಾನ್ಯವಾಗಿ ವಿದೇಶಿಗರು ವಾರಕ್ಕೂ ಮುಂಚೆ ಬಂದು ಗೋಲ್ಡ್ ಪಾಸ್ ಖರೀದಿಸಿ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಜತೆಗೆ ನಾನಾ ದಸರಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುತ್ತಾರೆ. ಆದರೆ ಈ ಬಾರಿ ಕೇವಲ ಅರ್ಧಗಂಟೆಯಲ್ಲಿ ದಸರಾದ ಎಲ್ಲಾ ಪಾಸ್ಗಳು ಖಾಲಿ ಆಗಿರುವುದರಿಂದ ದೂರದ ದೇಶದಿಂದ ದಸರಾ ನೋಡಲು ಆಗಮಿಸಿದ್ದ ವಿದೇಶಿಯರ ಮನಸ್ಸಿಗೆ ಬೇಸರ ಉಂಟಾಗಿತ್ತು.
ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ
ಆದರೂ ಛಲಬಿಡದ ಕೆಲವರು ಬಿಸಿಲಿನಲ್ಲಿ ಜನ ಸಾಮಾನ್ಯರೊಂದಿಗೆ ಕುಳಿತು ದಸರಾ ವೀಕ್ಷಣೆ ಮಾಡಿದರು. "ಮೂರು ವರ್ಷದ ಹಿಂದೆ ದಸರಾ ನೋಡಿದ್ದೆ. ಗೋಲ್ಡ್ ಪಾಸ್ ಖರೀದಿಸಿ ಜಂಬೂ ಸವಾರಿ ಕಣ್ತುಂಬಿಕೊಂಡಿದ್ದೆ. ಆದರೆ ಈ ಬಾರಿ ನನಗೆ ಪಾಸ್ ಸಿಗಲಿಲ್ಲ. ಕೇಳಿದರೆ ಖಾಲಿ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಅಷ್ಟು ದೂರದಿಂದ ಬಂದು ದಸರಾ ನೋಡದೆ ಇರುವುದು ಹೇಗೆ ಎಂದು ದಸರಾ ನೋಡಿದೆ. ಇದಕ್ಕೆ ನನ್ನ ಸ್ನೇಹಿತರು ಸಹಕರಿಸಿದರು" ಎಂದು ಬ್ರಿಟನ್ನ ಯುವತಿ ವಿಲಿಯಮ್ಸ್ ಹರ್ಷ ವ್ಯಕ್ತಪಡಿಸಿದ್ದಾರೆ.