ಮೈಸೂರು ಮೃಗಾಲಯದಲ್ಲಿ ವನ್ಯಜೀವಿ ನಿರ್ದೇಶಕರ ಸಮ್ಮೇಳನ
ಮೈಸೂರು, ಡಿಸೆಂಬರ್ 16: ಮೈಸೂರು ಮೃಗಾಲಯವು 125 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೈಗೊಂಡಿರುವ ವಿವಿಧ ಚಟುವಟಿಕೆಗಳ ಜತೆಗೆ ಅಖಿಲ ಭಾರತ ವನ್ಯಜೀವಿ ನಿರ್ದೇಶಕರ ಸಮ್ಮೇಳನವನ್ನು ಹಮ್ಮಿಕೊಂಡಿದೆ.
ಸಂಭ್ರಮಾಚರಣೆಯ ಭಾಗವಾಗಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಡಿ.18 ರಿಂದ 21 ರವರೆಗೆ 'ಭಾರತದ ಮೃಗಾಲಯಗಳು -2030 ದೃಷ್ಟಿಕೋನ' ಕುರಿತಾಗಿ ಅಖಿಲ ಭಾರತ ಮೃಗಾಲಯ ನಿರ್ದೇಶಕರುಗಳ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.18 ರಂದು ಬೆಳಿಗ್ಗೆ 9ಕ್ಕೆ ನಗರದ ರ್ಯಾಡಿಸನ್ ಬ್ಲೂ ಸಭಾಂಗಣದಲ್ಲಿ ಸಮ್ಮೇಳನ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಿಶನ್ ಸಿಂಗ್ ಸುಗಾರ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿಗಳು (ನಿವೃತ್ತ) ಹಾಗೂ ಸದಸ್ಯ ಸಿ.ಎಸ್.ಯಾಲಕ್ಕಿ, ಬೆಂಗಳೂರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಪುನಾಟಿ ಶ್ರೀಧರ್, ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಡಿ.ಎನ್.ಸಿಂಗ ಬೆಂಗಳೂರು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ ಸಿ.ಜಯರಾಮ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಇತರರು ಆಗಮಿಸಲಿದ್ದಾರೆ ಎಂದರು.
ಕೇಂದ್ರ ಮೃಗಾಲಯ ಪ್ರಾಧಿಕಾರದ ಸೂಚನೆಯಂತೆ ಡಿ.18, 19 ರಂದು ಮೈಸೂರು ಮೃಗಾಲಯದಲ್ಲಿ, ಡಿ.20, 21 ರಂದು ಕಬಿನಿಯಲ್ಲಿ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ 40 ರಿಂದ 50 ಜನರು ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ 27 ರಾಜ್ಯಗಳ ಪ್ರತಿನಿಧಿಗಳ ಹೆಸರು ನೋಂದಾಯಿಸಿಕೊಂಡಿದ್ದು, ಮಂಗಳೂರು, ಬೆಂಗಳೂರು, ವೆಸ್ಟ್ ಬೆಂಗಾಲ್, ಡಾರ್ಜಲಿಂಗ್, ಅಸ್ಸಾಂ, ಕೇರಳ, ಮಹರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ವಿಶಾಖಪಟ್ಟಣಂ, ಛತ್ತೀಸ್ ಗಡ್, ತಿರುಪತಿ, ತೆಲಂಗಾಣ, ಜೆಕ್ ರಿಪಬ್ಲಿಕ್ ಮೃಗಾಲಯ, ಗೌಹಾಟಿ, ಲಕ್ನೋ, ಕಾನ್ಪುರ್, ಡೆಹರಾಡೋನ್, ರಾಂಚಿ, ಭೂಪಾಲ್, ತ್ರಿಪುರ, ಮೀರೋಸ್ಲೋವ್ ಬರಾಕ್ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.