ಚಾಮುಂಡಿಬೆಟ್ಟದ ಮೆಟ್ಟಿಲಲ್ಲೇ ಕಿಡಿಗೇಡಿಗಳ ಪಾನಗೋಷ್ಠಿ!
ಮೈಸೂರು, ಫೆಬ್ರವರಿ 26: ಭಕ್ತರ ಪಾಲಿನ ಪವಿತ್ರ ತಾಣ ಚಾಮುಂಡಿಬೆಟ್ಟದಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನ ಮಾಡಿ ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆದು ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಪ್ರತಿದಿನವೂ ಸಾವಿರಾರು ಭಕ್ತರು ಬರುತ್ತಾರೆ. ಎಲ್ಲರೂ ದೇವರ ದರ್ಶನ ಮಾಡಿಕೊಂಡು ತೆರಳುತ್ತಾರೆ. ಇನ್ನು ಮುಂಜಾನೆ ಮೆಟ್ಟಿಲೇರಿ ದೇವಸ್ಥಾನಕ್ಕೆ ತೆರಳಿ ಕೈಮುಗಿದು ಬರುವ ದೊಡ್ಡದಾದ ವರ್ಗವಿದೆ.
ಅನ್ಲಾಕ್ ನಂತರ ಚಾಮುಂಡಿ ಬೆಟ್ಟದ ಕಾಣಿಕೆಯಲ್ಲಿ ಸುಧಾರಣೆ: ಸಂಗ್ರಹವಾಗಿದ್ದೆಷ್ಟು?
ಇವರೆಲ್ಲರೂ ನಿತ್ಯದ ವಾಯುವಿಹಾರದ ಜತೆಗೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿದ ತೃಪ್ತಿಯಿಂದ ಹಿಂದಿರುಗುತ್ತಾರೆ. ದಿನನಿತ್ಯ ಚುಮುಚುಮು ಬೆಳಕಿನಲ್ಲಿ ಜನ ಚಾಮುಂಡಿಬೆಟ್ಟದ ಪಾದದಿಂದ ಮೆಟ್ಟಿಲೇರಲು ಆರಂಭಿಸುತ್ತಾರೆ.
ಚಾಮುಂಡಿಬೆಟ್ಟದಲ್ಲಿ 'ಸಪ್ತಪದಿ' ವಿವಾಹ; ಹೆಸರು ನೋಂದಾಯಿಸಿ
ಮಕ್ಕಳು, ಯುವಕ, ಯುವತಿಯರು, ಮಹಿಳೆಯರು ವೃದ್ಧರು ಹೀಗೆ ಎಲ್ಲರೂ ನಿರ್ಭಯವಾಗಿ ಮೆಟ್ಟಿಲೇರುತ್ತಾರೆ. ಆ ಮೂಲಕ ದೇವರ ಸ್ಮರಣೆಯೊಂದಿಗೆ ದೇಹ ದಂಡನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಮಾಮೂಲಿನಂತೆ ಬೆಳಿಗ್ಗೆ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುವವರ ಒಂದೆಡೆಯಾದರೆ, ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಮೆಟ್ಟಿಲೇರುತ್ತಾರೆ.
ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಟೌನ್ ಶಿಪ್; ಎಷ್ಟು ಮನೆಗಳು?
ಮೆಟ್ಟಿಲಲ್ಲಿ ಬಾಟಲಿ ಕಂಡು ಬೆಚ್ಚಿದ ಜನ
ದಿನಂಪ್ರತಿ ಮೆಟ್ಟಿಲೇರಿ ಚಾಮುಂಡೇಶ್ವರಿ ದೇಗುಲಕ್ಕೆ ತೆರಳುವವರಿಗೆ ಶುಕ್ರವಾರ ಶಾಕ್ ನೀಡುವ ದೃಶ್ಯ ಎದುರಾಗಿತ್ತು. ದೇವಸ್ಥಾನಕ್ಕೆ ಅನತಿ ದೂರದಲ್ಲಿ ಸಾವಿರ ಮೆಟ್ಟಿಲಿಗೆ ಸಮೀಪದಲ್ಲಿಯೇ ಬಿಯರ್ ಬಾಟಲಿಗಳು ಮೆಟ್ಟಿಲ ಮೇಲೆಯೇ ಕಾಣಿಸಿದ್ದವು. ಇದೇನಪ್ಪಾ ಎಂದು ಹತ್ತಿರ ಹೋದವರಿಗೆ ಅಲ್ಲಿ ಯಾರೋ ಕಿಡಿಗೇಡಿಗಳು ಮದ್ಯ ಸೇವಿಸಿ, ಮೋಜು ಮಸ್ತಿ ಮಾಡಿದ್ದಾರೆ ಎಂಬುದು ಖಾತ್ರಿಯಾಗಿದೆ.
ಬಾಟಲಿ ಒಡೆದು ವಿಕೃತಿ ಮೆರೆದ ಪುಂಡರು
ಮದ್ಯ ಸೇವಿಸಿ ಬಾಟಲಿಯನ್ನು ಮೆಟ್ಟಿಲಲ್ಲಿ ಬಿಟ್ಟು ಹೋಗಿದ್ದು ಮಾತ್ರವಲ್ಲ, ಬಾಟಲಿಯನ್ನು ಒಡೆದು ಗಾಜಿನ ಚೂರು ಹರಡಿ ವಿಕೃತ ಆನಂದ ಪಟ್ಟಿದ್ದಾರೆ. ಮೆಟ್ಟಿಲನ್ನು ಮುಂಜಾನೆ ಸಮಯದಲ್ಲಿ ಬಹುತೇಕರು ಬರಿಗಾಲಿನಲ್ಲಿಯೇ ಹತ್ತುತ್ತಾರೆ. ಕತ್ತಲಲ್ಲಿ ಒಂದು ವೇಳೆ ನೋಡದೆ ಕಾಲಿಟ್ಟರೆ ಗಾಜಿನ ಚೂರು ಕಾಲಿಗೆ ಚುಚ್ಚುವ ಅಪಾಯವಿತ್ತು. ಇದನ್ನು ಅರಿತ ಕೆಲವರು ಹರಡಿ ಬಿದ್ದಿದ್ದ ಗಾಜನ್ನು ಬದಿಗೆ ಸರಿಸಿ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದರು.
ದೇವಸ್ಥಾನದ ಅನತಿ ದೂರದಲ್ಲಿ ಕೃತ್ಯ
ಬಹುಶಃ ಮಧ್ಯರಾತ್ರಿ ಯಾರೋ ಕಿಡಿಕೇಡಿಗಳು ಪಾರ್ಟಿ ಮಾಡಿದ್ದಾರೆ. ಅಲ್ಲಿಯೇ ಕುಳಿತು ಬಿಯರ್ ಹೀರಿದ್ದಾರೆ. ಬಳಿಕ ಬಾಟಲಿಗಳನ್ನು ಒಡೆದು ಚೂರು ಮಾಡಿ ವಿಕೃತಿ ಮೆರೆದಿದ್ದಾರೆ. ಇಲ್ಲಿಗೆ ಸಮೀಪದಲ್ಲಿಯೇ ಪೊಲೀಸ್ ಹೊರಠಾಣೆ ಇದ್ದರೂ ಅವರ ಇದು ಗಮನಕ್ಕೆ ಬಾರದಿರುವುದು ಮಾತ್ರ ಬೇಸರದ ಸಂಗತಿಯಾಗಿದೆ. ಇಷ್ಟಕ್ಕೂ ಇಂತಹ ಕೃತ್ಯಗಳನ್ನು ಯಾರು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಕಿಡಿಗೇಡಿಗಳ ಈ ಕೃತ್ಯ ಭಕ್ತರಲ್ಲಿ ಬೇಸರ ಮೂಡಿಸಿದ್ದಂತು ಸತ್ಯ.
ಪಾವಿತ್ರ್ಯತೆ ಕಾಪಾಡಿಕೊಳ್ಳುವುದು ಕರ್ತವ್ಯ
ಮಕ್ಕಳು ಮಹಿಳೆಯರನ್ನೆದೆ ಎಲ್ಲರೂ ಧೈರ್ಯವಾಗಿ ಮೆಟ್ಟಿಲೇರಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತಾರೆ. ಹೀಗಿರುವಾಗ ಮದ್ಯ ಸೇವಿಸಿ ಬಾಟಲಿಯನ್ನು ಮೆಟ್ಟಿಲ ಮೇಲೆಯೇ ಎಸೆಯುತ್ತಾರೆಂದರೆ ಭಯವಾಗುವುದು ಸಹಜ. ಅದರಲ್ಲೂ ದೇವಸ್ಥಾನಕ್ಕೆ ಅನತಿ ದೂರದಲ್ಲಿ ಇಂತಹ ಕೃತ್ಯ ನಡೆಸಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಇನ್ನು ಮುಂದೆ ಇಂತಹ ಕೃತ್ಯಗಳಿಗೆ ಅವಕಾಶ ಮಾಡಿಕೊಡದಿರಲಿ.
ಅರಣ್ಯ ಇಲಾಖೆ ಎಚ್ಚರ ವಹಿಸಬೇಕು
ಇದೆಲ್ಲದರ ನಡುವೆ ಅರಣ್ಯ ಇಲಾಖೆಯೂ ಗಮನಹರಿಸಬೇಕಾದ ಮತ್ತೊಂದು ವಿಚಾರ ಏನೆಂದರೆ, ಈಗಾಗಲೇ ಬೇಸಿಗೆಯ ದಿನಗಳು ಆರಂಭವಾಗಿದ್ದು, ಬೆಟ್ಟದಲ್ಲಿ ಕುರುಚಲು ಗಿಡ, ಹುಲ್ಲು ಬಿಸಿಲಿಗೆ ಒಣಗಿ ನಿಂತಿದ್ದರೆ, ಗಿಡಮರಗಳು ಎಲೆ ಉದುರಿಸಿವೆ. ಒಣಗಿದ ಎಲೆಗಳು ರಾಶಿರಾಶಿ ಬಿದ್ದಿವೆ. ಈ ಸಮಯದಲ್ಲಿ ಎಚ್ಚರಿಕೆ ಅಗತ್ಯ. ಒಂದು ಕಿಡಿ ಬಿದ್ದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿದೆ.
ಕೆಲವರು ಸಂಪ್ರದಾಯದಂತೆ ಮೆಟ್ಟಿಲುಗಳಲ್ಲಿ ಕರ್ಪೂರವನ್ನು ಹಚ್ಚುತ್ತಾ ಸಾಗುತ್ತಾರೆ. ಬೇಸಿಗೆಯ ಈ ಸಂದರ್ಭದಲ್ಲಿ ಇದನ್ನು ನಿಯಂತ್ರಿಸುವುದು ಒಳ್ಳೆಯದು ಎಂಬುದು ಪ್ರತಿದಿನ ಮೆಟ್ಟಿಲೇರುವ ಬಹುತೇಕ ಜನರ ಅಭಿಪ್ರಾಯವಾಗಿದೆ.