ಕಪಿಲೆಯ ಪ್ರವಾಹಕ್ಕೆ ಬಿರುಕು ಬಿಟ್ಟ ಹೆಜ್ಜಿಗೆ ಸೇತುವೆ, ಸಂಕಷ್ಟದಲ್ಲಿ ರೈತರು
ಮೈಸೂರು, ಆಗಸ್ಟ್ 12: ಕೇರಳದಲ್ಲಿ ಸುರಿದ ಮಹಾಮಳೆಯಿಂದ ನಂಜನಗೂಡಿನ ರೈತರಿಗೆ ಬರೆ ಬಿದ್ದಂತಾಗಿದೆ. ಕಪಿಲಾ ನದಿಯಲ್ಲಿ ಪ್ರವಾಹದ ಅಬ್ಬರ ಹೆಚ್ಚಾಗಿದ್ದು, ಅಲ್ಲಿನ ಮಳೆಯಿಂದಾಗಿ ಇಲ್ಲಿನ ರೈತರ ಪಾಲಿನ ಜೀವನಾಡಿ ಎನಿಸಿದ ಕಪಿಲಾ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿದೆ. ತನ್ನ ಎಡ-ಬಲದ ಜಮೀನುಗಳನ್ನೆಲ್ಲಾ ಜಲಾವೃತಗೊಳಿಸುತ್ತ ಭೋರ್ಗರೆಯುತ್ತಿದ್ದಾಳೆ ಕಪಿಲೆ.
ತಾಲೂಕಿನ ಸಹಸ್ರಾರು ಎಕರೆ ಕೃಷಿ ಭೂಮಿ ಕಪಿಲೆಯ ಪ್ರವಾಹಕ್ಕೆ ಸಿಲುಕಿ, ಕೋಟ್ಯಾಂತರ ರೂ. ನಷ್ಟವಾಗಿದೆ. ನಾಲ್ಕಾರು ವರ್ಷ ನೀರಿಲ್ಲದೆ ಕಂಗೆಟ್ಟಿದ್ದ ಇಲ್ಲಿನ ರೈತ ಈ ಬಾರಿಯ ಪ್ರವಾಹದಿಂದಾಗಿ ಆತಂಕಕ್ಕೆ ಸಿಲುಕಿದ್ದಾನೆ.
ಕಪಿಲೆಯ ರೌದ್ರತೆಗೆ ಮುಳುಗಿದ ಸುತ್ತೂರು ಸೇತುವೆ , ಸಂಪರ್ಕ ಕಡಿತ
ನಂಜನಗೂಡಿನಲ್ಲಿರುವ ಹತ್ತಾರು ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಹರಸಾಹಸ ಪಟ್ಟು ಜನರನ್ನು ಅಲ್ಲಿಂದ ಸ್ಥಳಾಂತರಗೊಳಿಸಿದ್ದಾರೆ ಅಧಿಕಾರಿಗಳು. ಪಟ್ಟಣದ ಹಳ್ಳದಕೇರಿಯಲ್ಲಿ ಒಂದು ಮನೆ ಕುಸಿದಿದೆ. 10ಕ್ಕೂ ಹೆಚ್ಚು ಮನೆಗಳ ಸುತ್ತ ಐದಾರು ಅಡಿಗಳಷ್ಟು ಎತ್ತರದವರೆಗೂ ನೀರು ಸಂಗ್ರಹಗೊಂಡಿದ್ದು, ಮನೆ ಸಾಮಾನುಗಳೆಲ್ಲಾ ನೀರು ಪಾಲಾಗಿವೆ.
ಅವರನ್ನೆಲ್ಲಾ ದೇವಾಲಯದ ಗಿರಿಜಾ ಕಲ್ಯಾಣ ಮಂದಿರಕ್ಕೆ ಸ್ಥಳಾಂತರಿಸಲು ಮನವಿ ಮಾಡಿದರೂ ಅವರು ಗಂಜಿ ಕೇಂದಕ್ಕೆ ಬರಲೊಪ್ಪದೆ ಗ್ರಾಮದ ಇನ್ನಿತರರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇತ್ತ ಬರೋಬ್ಬರಿ 18 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ಕಪಿಲಾ ನೂತನ ಸೇತುವೆಯ ಒಂದು ಭಾಗ ಈಗ ಬಿರುಕು ಬಿಟ್ಟಿದೆ.
ಇಲ್ಲಿನ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟದಿಂದ ಹೆಜ್ಜಿಗೆ, ತೊರೆಮಾವು, ಕೆಂಪಿಸಿದ್ದನಹುಂಡಿ ಸೇರಿದಂತೆ ಛತ್ರ ಹೋಬಳಿಯ ಜನರು ತೆಪ್ಪದ ಮೂಲಕ ನದಿ ದಾಟುತ್ತಿರುವುದನ್ನು ಗಮನಿಸಿದ ಮಾಜಿ ಮುಖ್ಯಮಂತಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೆಜ್ಜಿಗೆ ಸೇತುವೆ ಈಗ ಬಿರುಕು ಬಿಟ್ಟಿದೆ.
ಸೇತುವೆ ನಿರ್ಮಾಣವಾಗಿ, ಜನ ಸಂಚಾರ ಆರಂಭವಾಗಿ 6 ತಿಂಗಳಲ್ಲೇ ಕಪಿಲೆಯ ಪ್ರವಾಹಕ್ಕೆ ಸೇತುವೆ ಹೆಜ್ಜಿಗೆ ಬದಿಯ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಲ್ಲಿನ ರಾಂಪ್ ಗೆ ಬಳಸಲಾದ ಮಣ್ಣು ಕುಸಿಯತೊಡಗಿದಂತೆ ಬಿರುಕು ಹೆಚ್ಚಾಗತೊಡಗಿದೆ.
ಮೈಸೂರು ಮಹಾರಾಜರ ಕಾಲದಲ್ಲಿ 1735 ರಲ್ಲಿ ನಿರ್ಮಿಸಿದ ಸೇತುವೆ ಎರಡು ಶತಮಾನಗಳ ಕಾಲ ಬಸ್ ಹಾಗೂ ರೈಲ್ವೆ ಸಂಚಾರಕ್ಕೆ ಅನುವು ಮಾಡಿದ್ದು, ಈಗಲೂ ಸಾಕಷ್ಟು ಭದ್ರವಾಗಿದೆ.
ಸರ್ಕಾರದ ಅಧೀನ ಸಂಸ್ಥೆಯೇ ನಿರ್ಮಿಸಿದ (ಕೆಆರ್ ಡಿಸಿಎಲ್) ಸೇತುವೆ ಕೇವಲ ಆರೇ ತಿಂಗಳಲ್ಲಿ ಬಿರುಕು ಬಿಟ್ಟು ನಿಂತಿದ್ದು, ಅನೇಕ ಸಂಶಯಗಳಿಗೆ ಎಡೆಮಾಡಿದೆ. ಕಪಿಲಾ ನದಿ ಹೊರ ಹರಿವು ಹೆಚ್ಚಾದಂತೆ ತಲಕಾಡಿನ ಸುತ್ತಮುತ್ತಲ ಕೆಲವು ಪ್ರದೇಶಗಳು ಜಲಾವೃತಗೊಂಡು, ಇನ್ನು ಕೆಲವು ಕಡೆ ಪ್ರವಾಹ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ತಲಕಾಡಿನ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿವೆ.
ತಲಕಾಡಿನ ನಿಸರ್ಗಧಾಮ ಮತ್ತು ನದಿ ತಟಕ್ಕೆ ಸಾರ್ವಜನಿಕರ ಪ್ರವೇಶನ್ನು ನಿಷೇಧಿಸಲಾಗಿದೆ. ಪ್ರಮುಖ ಪ್ರವೇಶ ದ್ವಾರಕ್ಕೆ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದೆ.