ಮೃಗಾಲಯದಲ್ಲಿ ಆತಂಕ ತಂದ ಹೆಜ್ಜೆಗುರುತು, ಹೊರಗಿಂದ ಮತ್ತೆ ಬಂತೆ ಚಿರತೆ!
ಮೈಸೂರು, ನವೆಂಬರ್ 9 : ಕೆಲವು ದಿನಗಳ ಹಿಂದೆಯಷ್ಟೇ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಚಿರತೆ ಕಾಣಿಸಿಕೊಂಡು ಸಿಬ್ಬಂದಿ ಮತ್ತು ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೆ ಚಿರತೆ ಮೃಗಾಲಯಕ್ಕೆ ನುಗ್ಗಿದ ಶಂಕೆ ವ್ಯಕ್ತವಾಗಿದೆ.
ಕಾಡಿನ ಚಿರತೆಗಳು ಮೃಗಾಲಯಕ್ಕೆ ನುಗ್ಗಿದ ಶಂಕೆ ವ್ಯಕ್ತವಾಗಿದ್ದು, ಮೃಗಾಲಯ ಆವರಣದಲ್ಲಿ ಚಿರತೆ ಹೆಜ್ಜೆಗಳ ಗುರುತು ಪತ್ತೆಯಾಗಿವೆ. ತಾಯಿ ಹಾಗೂ ಮರಿ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದಾರೆ. ಚಿರತೆ ಹೆಜ್ಜೆ ಗುರುತಿನ ಬಳಿಕ ಅರಣ್ಯ ಸಿಬ್ಬಂದಿಯಲ್ಲಿ ಶಂಕೆ ಹೆಚ್ಚಾಗಿದ್ದು, ಈ ಬಗ್ಗೆ ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿ ಗುಟ್ಟು ಬಿಟ್ಟುಕೊಡುತ್ತಿಲ್ಲ.
ಮೈಸೂರು : 2 ಗಂಟೆಗಳ ಬಳಿಕ ಕೊನೆಗೂ ಬಲೆಗೆ ಬಿದ್ದ ಚಿರತೆ
ಅ. 25ರಂದು ಚಾಮುಂಡಿ ಬೆಟ್ಟದಿಂದ ಸುಮಾರು 2 ವರ್ಷದ ಗಂಡು ಚಿರತೆ ಮೃಗಾಲಯದೊಳಗೆ ಪ್ರವೇಶ ಮಾಡಿ, ಮರವೇರಿ ಕುಳಿತ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಚಿರತೆಯನ್ನು ನೋಡಿದ್ದ ಸಿಬ್ಬಂದಿ ತಕ್ಷಣ ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ, ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.
ಹಲವೆಡೆ ಚಿರತೆ ಹೆಜ್ಜೆ ಗುರುತು
ಆ ಬಳಿಕ ಅದನ್ನು ಮತ್ತೆ ಕಾಡಿಗೆ ವಾಪಸ್ ಬಿಟ್ಟಿದ್ದರು. ಈಗ ಹೊಸ ಚಿರತೆ ಬಂದು ಹೋಗಿದೆ. ಮೃಗಾಲಯದ ಆಸ್ಪತ್ರೆ, ಸಿಂಹದ ಸ್ಥಳ ಸೇರಿದಂತೆ ಅನೇಕ ಕಡೆ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಆ ಚಿರತೆಯ ವಯಸ್ಸು ಎಷ್ಟು, ಅದು ಗಂಡೋ- ಹೆಣ್ಣೋ, ಯಾಕೆ ಇಲ್ಲಿ ಓಡಾಡುತ್ತಿದೆ, ಬರಲು ಕಾರಣವೇನು - ಎಂಬಿತ್ಯಾದಿ ಪ್ರಶ್ನೆಗಳ ಹಿಂದೆ ಅಧಿಕಾರಿಗಳು ಬಿದ್ದಿದ್ದಾರೆ.
ಸಿಬ್ಬಂದಿಯಿಂದ ಕೂಂಬಿಂಗ್
ಚಿರತೆಯ ಹೆಜ್ಜೆ ಗುರುತುಗಳನ್ನು ನೀಡಿರುವ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಹೆಜ್ಜೆ ಗುರುತು ಕಾರಂಜಿ ಕೆರೆಯ ಕಾಂಪೌಂಡ್ ವರೆಗೂ ಕಾಣಿಸುತ್ತಿದೆ. ಆ ನಂತರ ಅದರ ಹೆಜ್ಜೆಗುರುತು ಮಾತ್ರ ಕಾಣಿಸಿಲ್ಲ. ಈ ಹಿನ್ನೆಲೆಯಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್ ಆದೇಶ ಮೇರೆಗೆ ಸಿಬ್ಬಂದಿ ಕಾರಂಜಿ ಕೆರೆ ಸೇರಿದಂತೆ ಮೃಗಾಲಯದ ಸುತ್ತಮುತ್ತ ಕೂಂಬಿಂಗ್ ನಡೆಸಿದ್ದಾರೆ.
ನಾಯಿಗಳ ಬೇಟೆಗೆ ಬರುತ್ತಿವೆಯೆ?
ಜತೆಗೆ ಸರ್ಕಸ್ ನಡೆಸುವ ಸ್ಥಳದ ಬಳಿ ನಾಯಿಗಳು ಹೆಚ್ಚಾಗಿರುವುದರಿಂದ ಇವುಗಳ ಬೇಟೆಗೆ ಚಿರತೆಗಳು ಬರುತ್ತವೆ. ಈ ಭಾಗದಿಂದಲೇ ಚಿರತೆ ಬಂದಿರಬಹುದು ಅಥವಾ ಕಾರಂಜಿ ಕೆರೆ ರಸ್ತೆಯಲ್ಲಿ ಪಿಡಬ್ಲ್ಯೂಡಿ ಅವರು ಮೃಗಾಲಯದ ಪಕ್ಕದ ರಸ್ತೆಯಲ್ಲಿ ಕಾಂಪೌಂಡ್ ಮಟ್ಟಕ್ಕೆ ಮಣ್ಣು ಸುರಿದಿದ್ದಾರೆ. ಈ ಕಡೆಯಿಂದ ಚಿರತೆ ಮೃಗಾಲಯ ಪ್ರವೇಶ ಮಾಡಿರಬಹುದು ಎಂದು ರವಿಶಂಕರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃಗಾಲಯದಲ್ಲಿ ಬೋನು
ಈ ಘಟನೆ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಮತ್ತೆ ಚಿರತೆ ಮೃಗಾಲಯಕ್ಕೆ ಬರಬಹುದು ಎಂಬ ಭೀತಿ ಅವರದ್ದು. ಮೃಗಾಲಯದ ಒಳಗೆ ಹಾಗೂ ಹೊರಗೆ ಬೋನು ಇಡಲಾಗಿದೆ. ಈಗಾಗಲೇ ಕಾರಂಜಿ ಕೆರೆಯಲ್ಲಿ ಚಿರತೆ ಇರಬಹುದು ಎಂಬ ಹಿನ್ನೆಲೆಯಲ್ಲಿ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆ. ಆದರೆ, ಯಾವುದೇ ಕುರುಹು ಪತ್ತೆಯಾಗಿಲ್ಲ.
ಹೆಚ್ಚಿನ ಸಿಬ್ಬಂದಿ ನಿಯೋಜನೆ
ಚಿರತೆ ಹೆಜ್ಜೆ ಗುರುತು ಸಿಕ್ಕ ಕಡೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ, ಗಸ್ತು ತಿರುಗಲು ತಿಳಿಸಲಾಗಿದೆ. ಜತೆಗೆ ಬೆಳಗ್ಗೆ 6ರಿಂದ 8.30ರವರೆಗೆ ಕೂಂಬಿಂಗ್ ನಡೆಸಿ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ರವಿಶಂಕರ್.