ಹಸಿರಿನಿಂದ ಹಸನಾಗಿದೆ ಬಂಡೀಪುರ ಅಭಯಾರಣ್ಯ
ಮೈಸೂರು, ಜೂನ್ 7: ಬಿಸಿಲಿನ ತಾಪಕ್ಕೆ ಒಣಗಿ ಬರಡೆನಿಸಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ಇತ್ತೀಚಿಗೆ ಸುರಿದ ಮಳೆ ಹಸಿರನ್ನು ತುಂಬುತ್ತಿದೆ. ಈ ನೋಟವೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಬೇಸಿಗೆ ಆರಂಭವಾದಾಗಿನಿಂದ ರಸ್ತೆಯ ಬದಿ ಮತ್ತು ಸಫಾರಿ ವಲಯಗಳಲ್ಲಿ ಹೆಚ್ಚಾಗಿ ಕಂಡು ಬರದ ಪ್ರಾಣಿಗಳು, ಮಳೆ ಬಂದು ವಾತಾವರಣ ತಂಪಾಗುತ್ತಿದ್ದಂತೆ ಕಾಣಿಸಿಕೊಳ್ಳುವುದಕ್ಕೂ ಆರಂಭಿಸಿವೆ.
ಸಫಾರಿ ವಲಯದಲ್ಲಿ ಹೆಚ್ಚು ಕೆರೆಗಳಿವೆ. ಹಾಗಿದ್ದರೂ ಕೆಲವು ತಿಂಗಳುಗಳಿಂದ ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತಿರಲಿಲ್ಲ. ಎರಡು ಮೂರು ವಾರಗಳಿಂದ ಸತತವಾಗಿ ಅರಣ್ಯ ಭಾಗದಲ್ಲಿ ಉತ್ತಮ ಮಳೆಯಾದ್ದರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಸಫಾರಿ ವಲಯದಲ್ಲಿ ವನ್ಯಜೀವಿಗಳು ಕಂಡುಬರುತ್ತಿವೆ. ಆನೆಗಳ ಹಿಂಡು, ಕಾಡೆಮ್ಮೆ, ಜಿಂಕೆ, ಕರಡಿ, ಚಿರತೆ ಹಾಗೂ ಕೆಲವೊಮ್ಮೆ ಹುಲಿ ಸಹ ಕಾಣಿಸಿಕೊಂಡು ಪ್ರವಾಸಿಗರಲ್ಲಿ ಖುಷಿ ಹೆಚ್ಚಿಸಿವೆ.
ಬಂಡೀಪುರದಲ್ಲಿ ಸಫಾರಿ ಟಿಕೆಟ್ ಸಮಯ, ಜಾಗ ಎರಡೂ ಬದಲು
ಅನೇಕ ಪ್ರವಾಸಿಗರು ಸಫಾರಿಗೆ ಹೋಗಿ ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುವುದರ ಜೊತೆಗೆ ಕ್ಯಾಮೆರಾಗಳಲ್ಲೂ ಅವುಗಳನ್ನು ಸೆರೆ ಹಿಡಿದು ಸಂತಸ ಪಡುತ್ತಿದ್ದಾರೆ. ಸಫಾರಿ ವಲಯಗಳಾದ ತಾವರಕಟ್ಟೆ ಕೆರೆ, ಟೈಗರ್ ರೋಡ್, ವೆಸ್ಲಿ ರೋಡ್, ಮೂಲಾಪುರ, ಕಡಬನಕಟ್ಟೆ, ಹೊಳ್ಕಲ್ ಕೆರೆ ರಸ್ತೆ, ಬಸವನಕಟ್ಟೆ, ಅರಳಿಕಟ್ಟೆ ಭಾಗಗಳಲ್ಲಿ ಕೆರೆ ಕಟ್ಟೆಗಳಿದ್ದು ಈ ಪ್ರದೇಶದಲ್ಲಿ ವನ್ಯಜೀವಿಗಳು ಹೆಚ್ಚು ಸುಳಿದಾಡುತ್ತಿವೆ.
ಬಂಡೀಪುರದಲ್ಲಿ ಹೊಸ ಸಫಾರಿ ಜೋನ್ಗೆ ಗ್ರೀನ್ ಸಿಗ್ನಲ್
ಕೆರೆ ಕಟ್ಟೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹುಲಿ, ಕೆರೆಯ ನೀರಿನಲ್ಲಿ ಆಟವಾಡುತ್ತಿರುವ ಇತರ ಪ್ರಾಣಿಗಳು ಕೂಡ ಕಂಡಿವೆ. ಬಂಡೀಪುರ- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ಹಿಂಡು ಸದಾ ಕಾಣಸಿಗುತ್ತಿದೆ. ಬಂಡೀಪುರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ನ ಪರಿಸರತಜ್ಞರು, ಸಫಾರಿಗೆ ಪ್ರವಾಸಿಗರನ್ನು ಕರೆದೊಯ್ಯುವ ಸಮಯದಲ್ಲಿ ಅನೇಕ ಪ್ರಾಣಿಗಳ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಬೆಂಕಿ ಬಿದ್ದ ಸಮಯದಲ್ಲಿ ಪ್ರಾಣಿಗಳು ಕಣ್ಣಿಗೆ ಬೀಳುತ್ತಿರಲಿಲ್ಲ, ಈಗ ಮಳೆಯಾಗಿ ಮೇವು ಚಿಗುರುತ್ತಿರುವುದರಿಂದ ಪ್ರಾಣಿಗಳು ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.