ಪ್ರವಾಹದ ಬಳಿಕ, ನೆಲೆ ಕಾಣಬೇಕಾದ ಬದುಕಿಗಾಗಿ ಶುರುವಾಗಿದೆ ಹುಡುಕಾಟ
ಮೈಸೂರು, ಆಗಸ್ಟ್ 12 : ರಾಜ್ಯದ ಹಲವೆಡೆ ಕಳೆದ ಒಂದು ವಾರ ಅಬ್ಬರಿಸಿದ್ದ ಆಶ್ಲೇಷ ಮಳೆ ಕೊಂಚ ತಣ್ಣಗಾಗಿದೆ. ಮಳೆಯ ಆರ್ಭಟದಿಂದ ಅಲ್ಲಲ್ಲಿ ಗುಡ್ಡ ಕುಸಿತ, ಮರ, ವಿದ್ಯುತ್ ಕಂಬಗಳು ಧರೆಗುರುಳಿದ ಸ್ಥಿತಿ ಒಂದೆಡೆ, ಮತ್ತೊಂದೆಡೆ ಮನೆಯನ್ನೇ ಕಳೆದುಕೊಂಡು ಪರಿಹಾರ ಕೇಂದ್ರ ಸೇರಿದವರು ಹಲವರು... ಮನೆ ಕಳೆದುಕೊಂಡವರಿಗೆ ಈಗ ಹೊಸ ಬದುಕಿನ ಚಿಂತೆ. ಕಳೆದ ವರ್ಷ ಭೂಕುಸಿತದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೇ ಇನ್ನೂ ಮನೆ ಸಿಕ್ಕಿಲ್ಲ. ಈಗ ಮತ್ತಷ್ಟು ಸಂತ್ರಸ್ತರಾಗಿದ್ದಾರೆ.
ಕೇರಳದಲ್ಲಿ ತಗ್ಗಿದ ಪ್ರವಾಹ, ಸಾವಿನ ಸಂಖ್ಯೆ 76ಕ್ಕೆ ಏರಿಕೆ
ಮಳೆಯ ಪ್ರವಾಹಕ್ಕೆ ಕಾವೇರಿ ನದಿ ಪಾತ್ರದಲ್ಲಿ ನೂರಾರು ಕುಟುಂಬಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆ. ನೂರಾರು ಮಂದಿ ಪರಿಹಾರ ಕೇಂದ್ರ ಸೇರಿದ್ದಾರೆ. ಬೆಳೆ, ಆಸ್ತಿ- ಪಾಸ್ತಿ ಹಾನಿಯಿಂದ ಕಂಗಾಲಾಗಿರುವ ನಿರಾಶ್ರಿತರು, ಮುಂದೇನೂ ತಿಳಿಯದ ಸ್ಥಿತಿಯಲ್ಲಿ ದಿನ ದೂಡುವಂತಾಗಿದೆ. ಪ್ರವಾಹದಿಂದ ತತ್ತರಿಸಿದ ಬೆಳೆಗಾರರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದಿನಬಳಕೆ ವಸ್ತುಗಳು ನೀರು ಪಾಲಾಗಿವೆ. ಮರು ಬಳಕೆಗೂ ಉಪಯೋಗವಿಲ್ಲದ ಸ್ಥಿತಿಯಲ್ಲಿರುವ ಸಾಮಗ್ರಿಗಳು ನೀರಲ್ಲಿ ತೇಲಾಡುತ್ತಿವೆ.
ಭಾನುವಾರದಿಂದ ತಣ್ಣಗಾದ ಮಳೆಯ ಆರ್ಭಟದಿಂದ ಪ್ರವಾಹ ಪ್ರದೇಶದಲ್ಲಿ ನಿಧಾನವಾಗಿ ನೀರು ಇಳಿಯುತ್ತಿದೆ. ವಾರದ ಬಳಿಕ ಮೊದಲ ಸೂರ್ಯ ದರ್ಶನವಾಗಿದೆ. ಕಾರ್ಮೋಡ ಹಾಗೂ ದಟ್ಟ ಮಂಜು ನಗರದಲ್ಲಿ ಆವೃತವಾಗಿದೆ. ಐದು ದಿನಗಳಿಂದ ಸಂಪರ್ಕ ಕಳೆದುಕೊಂಡಿದ್ದ ಕೆಲವು ಗ್ರಾಮಗಳು ಭಾನುವಾರ ಒಳರಸ್ತೆಗಳ ಮೂಲಕ ಸಂಪರ್ಕ ಪಡೆದವು.
ಮಡಿಕೇರಿಯ ಹಲವು ಭಾಗವನ್ನೇ ಆಪೋಶನ ಪಡೆದ ಪ್ರವಾಹದ ಭೀತಿ ಈಗಲೂ ಘೋರ ಎನ್ನುತ್ತಾರೆ ಜನರು. ಪ್ರವಾಹ ಇಳಿದಿದೆ. ಆದರೆ ನೀರಿನ ರಭಸಕ್ಕೆ ಗ್ರಾಮಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಿದೆ.
ಡಿಸಿ, ಎಸ್ ಪಿ ವ್ಯಾನ್ ತಡೆದು ದುರ್ಗದಹಳ್ಳಿ ಗ್ರಾಮಸ್ಥರ ಆಕ್ರೋಶ
ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪಾಡಂತೂ ಹೇಳ ತೀರದಾಗಿದೆ. ನೀರಿನ ರಭಸಕ್ಕೆ ಮಣ್ಣಿನ ಮೇಲ್ಪದರ ಹಾಗೂ ಡಾಂಬರು ರಸ್ತೆ, ಕಾಂಕ್ರೀಟ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ತಿಯಾಗಲು ತಿಂಗಳುಗಳೇ ಬೇಕಿವೆ.
ಪ್ರವಾಹದಲ್ಲಿ ಹಂದಿ, ಆಡು, ಹಸು ಸೇರಿದಂತೆ ನೂರಾರು ಪ್ರಾಣಿಗಳು ಮೃತಪಟ್ಟಿವೆ. ರಸ್ತೆಯಲ್ಲಿಯೇ ಕೆಸರು ಮತ್ತು ತ್ಯಾಜ್ಯದ ರಾಶಿ ಬಿದ್ದಿದ್ದು, ಜನರಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ರೋಗಗಳು ಹರಡುವುದನ್ನು ತಡೆಗಟ್ಟಲು ಈಗಾಗಲೇ ಆರೋಗ್ಯ ಇಲಾಖೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕೆಸರು ಇದ್ದ ಕಡೆ ಡಿ.ಡಿ.ಟಿ ಪೌಡರ್ ಸಿಂಪಡಣೆ ಮಾಡುತ್ತಿದ್ದಾರೆ. ಇತ್ತ ಹಾಸಿಗೆ, ಹೊದಿಕೆಗಳು ಅಗತ್ಯಕ್ಕಿಂತ ಹೆಚ್ಚು ಪೂರೈಕೆಯಾಗುತ್ತಿದ್ದು, ಅಗತ್ಯ ವಸ್ತುಗಳನ್ನು ಪಡೆಯಲು ಸಂತ್ರಸ್ತರು ಸಾಲುಗಟ್ಟಿ, ಕಾಯುತ್ತಿದ್ದ ದೃಶ್ಯ ಮನ ಕಲುಕುವಂತಿತ್ತು. ದಾನಿಗಳೇ ವಸ್ತುಗಳನ್ನು ವಿತರಿಸುತ್ತಿದ್ದರಿಂದ ವಿತರಣೆಗೆ ಸಾಕಷ್ಟು ತೊಡಕುಗಳು ಕಂಡು ಬಂದಿತು.
ಪ್ರವಾಹ ಕಡಿಮೆ ಆಯಿತು, ಮನೆ, ಸಾಮಾನು ಎಲ್ಲಾ ಕೊಚ್ಕೊಂಡು ಹೋಯ್ತು, ಈಗೇನು ಮಾಡೋಣ ನಾವು? ಇಲ್ಲಿ ಇರೋತನಕ ಎಲ್ಲಾ ಚೆಂದಾ.. ಆದರೆ ನಮಗೆ ಪರಿಹಾರ ಸಿಗೋದು ಪಕ್ಕಾನಾ? ಎಂಬುದು ಸಂತ್ರಸ್ತ ಕೇಂದ್ರದ ಪ್ರತಿಯೊಬ್ಬರ ಪ್ರಶ್ನೆ.
ಇಲ್ಲಿರುವ ಯಾರು ಸಹ ಬೇಕೆಂದು ಅನುಭವಿಸಿದ ಸಂಕಷ್ಟ ಇದಲ್ಲ. ಆದರೆ ಪ್ರಕೃತಿಯ ಆಟದ ಮುಂದೆ ಇದು ನಗಣ್ಯ ಕೂಡ. ಅವರ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದವರು ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು. ಇನ್ನಾದರೂ ನಾವು ಅವರನ್ನು ಪ್ರಶ್ನಿಸೋಣ. ಸಂತ್ರಸ್ತರ ಸಂಕಷ್ಟಕ್ಕೆ ಪರಿಹಾರವಿರಲಿ ಉತ್ತರವನ್ನಾದರೂ ಹುಡುಕುವ ಪ್ರಯತ್ನ ಮಾಡೋಣ.