ಸೋಲಿನ ಬಳಿಕ ಜೂನ್ 12ಕ್ಕೆ ಮೊದಲ ಬಾರಿಗೆ ಸಿದ್ದರಾಮಯ್ಯ ಮೈಸೂರಿಗೆ ಎಂಟ್ರಿ
ಮೈಸೂರು, ಜೂನ್ 9 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಬಳಿಕ ತವರು ಜಿಲ್ಲೆಗೆ ಇದೇ ಜೂನ್ 12ರಂದು ಆಗಮಿಸಲಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತು, ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಅತೀ ಕಡಿಮೆ ಅಂತರಿದಂದ ಗೆಲುವು ಸಾಧಿಸಿದ ಸಿದ್ದರಾಮಯ್ಯ, 5 ದಿನ ಕ್ಷೇತ್ರಕ್ಕೆ ಭೇಟಿ ನೀಡಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.
ಸೋಲಿನ ಬಳಿಕ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದರೂ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡದೆ ಹಿಂದೆ ತಮ್ಮನ್ನು, ಈಗ ತಮ್ಮ ಮಗನನ್ನು ಗೆಲ್ಲಿಸಿದ ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ವಾರ, ಹದಿನೈದು ದಿನಗಳಿಗೊಮ್ಮೆ ನಗರಕ್ಕೆ ಬರುತ್ತಿದ್ದ ಅವರು, ಚುನಾವಣೆ ಫಲಿತಾಂಶ ಬಂದು ತಿಂಗಳು ಆಗುತ್ತಾ ಬಂದರೂ ಇತ್ತ ತಲೆ ಹಾಕಿರಲಿಲ್ಲ.
ಅಂದು ಬೆಳಗ್ಗೆ 11ಕ್ಕೆ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿ ಆಯೋಜಿಸಿರುವ ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
'ಎರಡೇ ಎರಡು ನಿಮಿಷದಲ್ಲಿ ಸರ್ಕಾರ ಉರುಳಿಸಬಲ್ಲರು ಸಿದ್ದರಾಮಯ್ಯ!'
ತಿ.ನರಸೀಪುರ ಕ್ಷೇತ್ರದಲ್ಲಿ ಸೋಲುಂಡಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ, ಸಚಿವ ಪುಟ್ಟರಂಗಶೆಟ್ಟಿ, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಸಿ.ಎಂ.ಇಬ್ರಾಹಿಂ, ವಿಧಾನಪರಿತಷ್ ಸದಸ್ಯ ಆರ್.ಧರ್ಮಸೇನಾ, ಡಿಸಿಸಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಭಾಗವಹಿಸಲಿದ್ದಾರೆ. ಶಾಸಕ ಡಾ.ಯತೀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ.
ಅರಸು ಬಳಿಕ ಐದು ವರ್ಷ ಪೂರ್ಣಗೊಳಿಸಿದ ಸಿಎಂ
ವರುಣಾ ಕ್ಷೇತ್ರದಿಂದ ಗೆದ್ದ ಪ್ರಥಮ ಅವಧಿಯಲ್ಲಿಯೇ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ಸಿದ್ದರಾಮಯ್ಯ, ಆ ನಂತರದ ಚುನಾವಣೆಯಲ್ಲಿ ಗೆದ್ದು, ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿದ್ದರು. ಡಿ.ದೇವರಾಜ ಅರಸು ಅವರ ಬಳಿಕ ಐದು ವರ್ಷ ಪೂರ್ಣಗೊಳಿಸಿದ ಕಾಂಗ್ರೆಸ್ ಮುಖ್ಯಮಂತ್ರಿ ಎನ್ನುವ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಸತತ ಚುನಾವಣೆಯನ್ನು ಎದುರಿಸಿದ್ದ ಸಿದ್ದರಾಮಯ್ಯ ಅವರು ಕ್ಷೇತ್ರ ಮರು ವಿಂಗಣೆಯಾದ ಬಳಿಕ ಮೈಸೂರು, ತಿ.ನರಸೀಪುರ, ನಂಜನಗೂಡು ತಾಲೂಕಿನ ಹಲವು ಗ್ರಾಮಗಳನ್ನು ಸೇರಿಸಿ, ನೂತನವಾಗಿ ಅಸ್ತಿತ್ವಕ್ಕೆ ಬಂದ ವರುಣಾ ಕ್ಷೇತ್ರದಿಂದ ಕಣಕ್ಕಿಳಿದು ನಿರಾಯಾಸವಾಗಿ ಗೆಲುವು ಕಂಡಿದ್ದರು.
ಕೊನೆ ಚುನಾವಣೆ ಚಾಮುಂಡೇಶ್ವರಿ ಕ್ಷೇತ್ರದಿಂದ
ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎನ್ನುವ ಹಂಬಲ ಇಟ್ಟುಕೊಂಡಿದ್ದ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದಲೇ ಮತ್ತೊಮ್ಮೆ ಕಣಕ್ಕಿಳಿಯಲಿ ಎನ್ನುವ ಅಭಿಲಾಷೆ ಅವರ ಅಭಿಮಾನಿಗಳಲ್ಲಿತ್ತು. ಆದರೆ ತಮ್ಮ ಪುತ್ರ ರಾಕೇಶ್ ನಿಧನದ ಬಳಿಕ ಕಿರಿಯ ಪುತ್ರ ಡಾ.ಯತೀಂದ್ರ ಅವರಿಗೆ ರಾಜಕೀಯ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರ ಬದಲಿಸುವ ನಿರ್ಧಾರಕ್ಕೆ ಬಂದರು. ರಾಜಕೀಯ ತಜ್ಞರು, ಅಪ್ತರ ಮಾತನ್ನು ಲೆಕ್ಕಿಸದೆ, ತಮಗೆ ರಾಜಕೀಯ ಜನ್ಮ, ಮರು ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಕೊನೆ ಚುನಾವಣೆ ಎದುರಿಸುವುದಾಗಿ ಕಣಕ್ಕಿಳಿದರು.
ಸೋಲಿನ ಕಾರಣಕ್ಕೆ ಅತೀವ ಬೇಸರ
ಆದರೆ, ವಿಧಾನಸಭೆ ಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಸಂಚರಿಸಿದಾಗ ಜನರ ಪ್ರತಿಕ್ರಿಯೆ, ವಿವಿಧ ವರದಿಗಳನ್ನು ಕಂಡ ಸಿದ್ದರಾಮಯ್ಯ, ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದಲೂ ಕಣಕ್ಕಿಯುವ ನಿರ್ಧಾರ ಕೈಗೊಂಡಿದ್ದರು. ಬಾದಾಮಿ ಕ್ಷೇತ್ರದಲ್ಲಿನ ಗೆಲುವಿನ ಖುಷಿಗಿಂತ ತಾವು ಅಪಾರವಾಗಿ ನಂಬಿದ್ದ ತವರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನಿಂದ ಬೇಸರಗೊಂಡಿದ್ದಾರೆ. ಇದಕ್ಕೆ ವಿರೋಧಿಗಳ ಲೆಕ್ಕಾಚಾರದ ನಡೆ, ಜಾತಿ ಸಮೀಕರಣವೂ ಕಾರಣವಾಗಿದ್ದು ಸಾಕಷ್ಟು ಬೇಸರಗೊಳ್ಳುವಂತೆ ಮಾಡಿರುವುದಂತೂ ಸುಳ್ಳಲ್ಲ.
ಅಧಿಕಾರಾರೂಢ ಕಾಂಗ್ರೆಸ್ ಗೆ ಹಿನ್ನಡೆ
ಮೇ ಹನ್ನೆರಡನೇ ತಾರೀಕು ವಿಧಾನಸಭೆ ಚುನಾವಣೆ ನಡೆದಿತ್ತು. ಹದಿನೈದನೇ ತಾರೀಕು ಫಲಿತಾಂಶ ಬಂದು ಅಧಿಕಾರಾರೂಢ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಯಿತು. ಈ ಸಂದರ್ಭದಲ್ಲಿ ಬೇಷರತ್ ಆಗಿ ಜೆಡಿಎಸ್ ಗೆ ಬೆಂಬಲ ಘೋಷಿಸಿದ ಕಾಂಗ್ರೆಸ್, ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಒಪ್ಪಿಕೊಂಡಿತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ತಮ್ಮ ತವರು ಜಿಲ್ಲೆಗೆ ಬಂದಿರದಿದ್ದ ಸಿದ್ದರಾಮಯ್ಯ ಜೂನ್ ಹನ್ನೆರಡನೇ ತಾರೀಕು ಭೇಟಿ ನೀಡುತ್ತಿದ್ದಾರೆ.