ದಸರಾ ಆನೆ ದ್ರೋಣನ ಸಾವಿನ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ
ಮೈಸೂರು, ಮೇ 28: ಮತ್ತಿಗೋಡು ಆನೆ ಶಿಬಿರದಲ್ಲಿ ದಸರಾ ಗಜಪಡೆಯಲ್ಲಿನ ಆನೆ ದ್ರೋಣನ ಸಾವು ಪ್ರಾಣಿಪ್ರೇಮಿಗಳಲ್ಲಿ ಆತಂಕ ಮೂಡಿಸಿತ್ತು. ಇದರಿಂದ, ಇಲಾಖೆಯ ಕಾರ್ಯವೈಖರಿ ಹಾಗೂ ಆನೆ ಬಿಡಾರಗಳಲ್ಲಿನ ನಿರ್ವಹಣಾ ವ್ಯವಸ್ಥೆ ಕುರಿತು ಹಲವರು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದರು. ಈಚೆಗೆ ವೈದ್ಯರ ಮತ್ತು ಕಾವಾಡಿಗಳ ನಡುವಿನ ಮಾತಿನ ಚಕಮಕಿಯೂ ವೈರಲ್ ಆಗಿತ್ತು. ಇದರ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಆನೆ ಶಿಬಿರಗಳಲ್ಲಿ ಕಟ್ಟೆಚ್ಚರ ವಹಿಸಿದೆ.
ದಸರಾ ಆನೆ ದ್ರೋಣ ಸಾವು: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಪ್ರತಿ ಆನೆ ಬಿಡಾರಗಳಲ್ಲಿಯೂ ತಪಾಸಣೆ ನಡೆಸುವಂತೆ ಆದೇಶ ನೀಡಿದೆ. ಆನೆಗಳನ್ನು ನಿಯಮಿತವಾಗಿ ಪರೀಕ್ಷಿಸಬೇಕು, ಅದರಲ್ಲೂ ಬೇಸಿಗೆಯಲ್ಲಿ ವಿಶೇಷ ನಿಗಾ ವಹಿಸಬೇಕು, ಆನೆಯ ದೈಹಿಕ ಚಟುವಟಿಕೆ, ಅದರ ವರ್ತನೆ ಅವಲಂಬಿಸಿ ಅದರ ಆಹಾರದಲ್ಲಿ ಬದಲಾವಣೆ ಮಾಡಬೇಕು. ಎಲ್ಲಾ ಶಿಬಿರಗಳಲ್ಲಿ ವೈದ್ಯರು ಯಾವಾಗಲೂ ಲಭ್ಯವಿರಬೇಕು. ವೈದ್ಯರ ಕೊರತೆ ಕಡೆಗೆ ತಕ್ಷಣವೇ ಗಮನಹರಿಸಬೇಕು. ಸೂಚಿಸಿದ ಕಾಲಕಾಲಕ್ಕೆ ಎಲ್ಲ ಆನೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದೆ.
ದ್ರೋಣನ ಸಾವಿನ ತನಿಖೆಯಾಗಲಿ:ಅರಮನೆ ಮುಂದೆ ಮಲಗಿ ವಾಟಾಳ್ ಪ್ರತಿಭಟನೆ
ಇನ್ನು ದಸರೆಯ ಆನೆ ದ್ರೋಣನ ಸಾವಿಗೆ ಹೃದಯಾಘಾತವೇ ಕಾರಣವೆಂದು ಇಂಡಿಯನ್ ಅನಿಮಲ್ ಅಂಡ್ ಬಯೋಲಾಜಿಕಲ್ ಸಂಸ್ಥೆ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿದೆ. ಡಾ.ನಾಗರಾಜ್ ನೇತೃತ್ವದಲ್ಲಿ ಪರೀಕ್ಷೆ ನಡೆಸಿ ಬೆಂಗಳೂರಿನ ಪ್ರಯೋಗಕ್ಕೆ ಕಳುಹಿಸಲಾಗಿದ್ದು, ಇದರ ಪ್ರತಿಯು ಇಲಾಖೆಯ ಕೈ ಸೇರಿದೆ. ಆದರೆ ಮರಣೋತ್ತರ ಪರೀಕ್ಷೆಯ ರೀತಿಯ ಕುರಿತೇ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದ್ರೋಣ ದಿಢೀರ್ ಸಾವಿಗೀಡಾಗಿದ್ದರಿಂದ ಸಾಕಷ್ಟು ಅನುಮಾನ ವ್ಯಕ್ತವಾದ ಹಿನ್ನೆಲೆ, ಮರಣೋತ್ತರ ಪರೀಕ್ಷೆಗೆ ತಜ್ಞರ ಸಮಿತಿಯನ್ನು ನೇಮಕ ಮಾಡಬೇಕಾಗಿತ್ತು. ಪಶು ವೈದ್ಯಕೀಯ ಕಾಲೇಜಿನ ತಜ್ಞರು, ಹಿರಿಯ ವೈದ್ಯಾಧಿಕಾರಿಗಳು ಹಾಗೂ ತಜ್ಞರನ್ನು ಇದರಲ್ಲಿ ನೇಮಕ ಮಾಡಿಕೊಳ್ಳಬೇಕಾಗಿತ್ತು. ಹೀಗೆ ಗೊತ್ತು ಗುರಿ ಇಲ್ಲದೆ ಮರಣೋತ್ತರ ಪರೀಕ್ಷೆ ನಡೆಸಿರುವುದು ಎಷ್ಟು ಸರಿ ಎಂದು ವನ್ಯ ಪ್ರೇಮಿಗಳು ದೂರಿದ್ದಾರೆ.
ದಸರೆಯಲ್ಲಿ ಈ ಬಾರಿ ದ್ರೋಣನ ಸ್ಥಾನವನ್ನು ತುಂಬುವವರು ಯಾರು?
ದ್ರೋಣನ ಸಾವಿನಿಂದ ಈಗ ಎಚ್ಚೆತ್ತುಕೊಂಡಿರುವ ಇಲಾಖೆ, ಆನೆಗಳ ಆರೋಗ್ಯದ ಕುರಿತು ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಕೆಲವು ವೈದ್ಯರು ಆನೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದ ಹಿನ್ನೆಲೆಯಲ್ಲಿ, ಇಲಾಖೆ ವೈದ್ಯರ ವಾಹನಗಳ ಜಿಪಿಎಸ್ ಪರಿಶೀಲಿಸಲಾಗುತ್ತಿದೆ. ಜಿಪಿಎಸ್ ಆಧಾರದಲ್ಲಿ ವೈದ್ಯರು ಯಾವಾಗ ಯಾವ ಶಿಬಿರಕ್ಕೆ ಭೇಟಿ ನೀಡಿದ್ದಾರೆ ಎನ್ನುವುದು ತಿಳಿದು ಬರಲಿದೆ.