ಮೈಸೂರಿನಲ್ಲಿ ಕೋವಿಡ್ ಚಿಕಿತ್ಸೆಗೆ ವಾರದೊಳಗೆ 428 ಹೆಚ್ಚುವರಿ ಹಾಸಿಗೆ
ಮೈಸೂರು, ಅಕ್ಟೋಬರ್ 12: ಮೈಸೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಒಟ್ಟು 590 ಹಾಸಿಗೆಗಳು ಲಭ್ಯವಿದ್ದು, ಇನ್ನು ಒಂದು ವಾರದಲ್ಲಿ ಹೆಚ್ಚುವರಿಯಾಗಿ 428 ಹಾಸಿಗೆಗಳನ್ನು ಅಳವಡಿಸಲಾಗುವುದು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವೈದ್ಯಕೀಯ ಕಾಲೇಜುಗಳಲ್ಲಿ 178, ಜಿಲ್ಲಾಸ್ಪತ್ರೆಗಳಲ್ಲಿ 250, ಟ್ರಾಮಾ ಸೆಂಟರ್ ಗಳಲ್ಲಿ 260, 6 ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆ ಸೇರಿ ಜಿಲ್ಲೆಯಲ್ಲಿ ಒಟ್ಟು 1,318 ಹಾಸಿಗೆಗಳು ಕೋವಿಡ್ ಗೆ ಲಭ್ಯವಾಗಲಿದೆ. ಜೆಎಸ್ ಎಸ್ ಸಂಸ್ಥೆಯಿಂದ 400 ಹಾಸಿಗೆ ದೊರೆಯಲಿದ್ದು, ಒಟ್ಟು 1,718 ಹಾಸಿಗೆಗಳು ಕೋವಿಡ್ ಚಿಕಿತ್ಸೆಗೆ ಸಿಗಲಿದೆ" ಎಂದು ತಿಳಿಸಿದರು.
"ಒಟ್ಟು 3,500 ಹಾಸಿಗೆ ಕೋವಿಡ್ ಚಿಕಿತ್ಸೆಗೆ"
"ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಖಾಸಗಿ ಆಸ್ಪತ್ರೆಗಳಿಂದ ಒಂದೂವರೆ ಸಾವಿರ ಹಾಸಿಗೆಗಳು ಕೋವಿಡ್ ಗೆ ಲಭ್ಯವಾಗಲಿದೆ. ಇದೂ ಸೇರಿ ಒಟ್ಟು ಸುಮಾರು 3,500 ಹಾಸಿಗೆ ಕೋವಿಡ್ ಚಿಕಿತ್ಸೆಗೆ ಸಿಗಲಿದೆ" ಎಂದು ಸಚಿವರು ತಿಳಿಸಿದರು.
ಕೊರೊನಾ ನಿಯಂತ್ರಣ, ಸಾವಿನ ಪ್ರಮಾಣ ಇಳಿಸುವುದು ಮೊದಲ ಆದ್ಯತೆ
"ಮನೆಯಲ್ಲೇ ಕುಳಿತು ದಸರಾ ವೀಕ್ಷಿಸಿ"
"ಈ ಬಾರಿ ನಾಡಹಬ್ಬ ದಸರಾ ಆಚರಣೆಯಾಗಲಿದೆ. ಜನರಿಗೂ ಹಬ್ಬಕ್ಕೆ ಬರುವ ಉತ್ಸಾಹ ಇದೆ. ಆದರೆ ಕೋವಿಡ್ ಯಾವಾಗ ಬೇಕಾದರೂ ಬರಬಹುದು. ಆದ್ದರಿಂದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸರಳವಾಗಿ ಹಬ್ಬ ಆಚರಿಸುತ್ತಿದ್ದು, ಜನರು ಮನೆಯಲ್ಲೇ ಕುಳಿತು ಆಚರಣೆ ವೀಕ್ಷಿಸಬಹುದು. 300ಕ್ಕಿಂತ ಹೆಚ್ಚು ಜನರು ಆಚರಣೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದಕ್ಕೆ ಜನರು ಸಹಕರಿಸಬೇಕು" ಎಂದು ಕೋರಿದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಉಪಸ್ಥಿತರಿದ್ದರು.
ಮನೆಯಲ್ಲೇ ಆರೈಕೆ, ಟೆಲಿ ಮೆಡಿಸಿನ್ ಗೆ ಒತ್ತು
ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿಯಾದ ದರದಂತೆ ಚಿಕಿತ್ಸೆ ಕೊಡಲು ಸೂಚನೆ ನೀಡಲಾಗಿದೆ. ಸರ್ಕಾರದಿಂದ ಶಿಫಾರಸು ಮಾಡಿದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲೇ ಆರೈಕೆ ಹಾಗೂ ಟೆಲಿ ಮೆಡಿಸಿನ್ ಗೆ ಒತ್ತು ನೀಡಲಾಗಿದೆ. ಕೊರೊನಾ ಸಾವಿನ ಪ್ರಕರಣಗಳು ಹೆಚ್ಚಾಗಲು ತಡವಾಗಿ ಆಸ್ಪತ್ರೆಗೆ ಬರುವುದು ಕೂಡ ಕಾರಣ. ಅಂತಹವರನ್ನು ಬೇಗನೆ ಆಸ್ಪತ್ರೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಿಎಂ ನನ್ನ ಮೇಲೆ ನಂಬಿಕೆ ಇಟ್ಟು ಆರೋಗ್ಯ ಇಲಾಖೆ ನೀಡಿದ್ದಾರೆ: ಸಚಿವ ಕೆ.ಸುಧಾಕರ್
"2 ವಾರದಲ್ಲಿ ಕೋವಿಡ್ ನಿಯಂತ್ರಣಕ್ಕೆ"
ದಿನಕ್ಕೆ 3-4 ಸಾವಿರ ಕೊರೊನಾ ಪರೀಕ್ಷೆ ಮಾಡಲು ಹೊಸ ಲ್ಯಾಬ್ ಗಳನ್ನು ಆರಂಭಿಸಲಾಗುತ್ತಿದೆ. ಮೈಸೂರಿನಲ್ಲಿ ಮುಂದಿನ ಎರಡು ವಾರಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ಇದಕ್ಕೆ ಜನರ ಸಹಕಾರ ಅಗತ್ಯವಿದೆ. ಕೋವಿಡ್ ಇನ್ನೂ ನಿಂತಿಲ್ಲ. ಆದರೆ ಮಾಸ್ಕ್ ಮಾಯವಾಗಿದೆ. ಇಂತಹ ಸಮಯದಲ್ಲಿ ಎಲ್ಲರೂ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.