ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಚಾಲನೆ
ಮೈಸೂರು, ಜುಲೈ 1: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾಮಗಾರಿ ಇಂದು ಆರಂಭಗೊಂಡಿದೆ. ವಿಷ್ಣು ಸ್ಮಾರಕ ನಿರ್ಮಾಣ ವಿವಾದಕ್ಕೆ ಹೈಕೋರ್ಟ್ ಅಂತಿಮ ತೆರೆ ಎಳೆದಿದ್ದು, ಮೈಸೂರು ಜಿಲ್ಲಾಡಳಿತದ ವತಿಯಿಂದ ಕಾಮಗಾರಿಗೆ ಹಸಿರು ಸೂಚನೆ ಸಿಕ್ಕಿದೆ. ಹೀಗಾಗಿ ತಹಶೀಲ್ದಾರ್ ಪೊಲೀಸ್ ಬಂದೋಬಸ್ತ್ ಸಮ್ಮುಖದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿ ಇಂದಿನಿಂದ ಆರಂಭವಾಗಿದೆ.
ಭಾರತಿ ವಿಷ್ಣುವರ್ಧನ್ ಅವರು ಸ್ಮಾರಕ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಕೂಡ ಇದ್ದರು.
ವಿಷ್ಣು ಸ್ಮಾರಕದ ನೀಲನಕ್ಷೆ ತಯಾರಿ: ಸದ್ಯದಲ್ಲೇ ಆರಂಭ ಕಾಮಗಾರಿ
ಈ ವೇಳೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಸ್ಮಾರಕ ಕಾಮಗಾರಿ ಕೆಲಸ ಆರಂಭವಾಗಲಿದೆ. ಇದು ಒಂಬತ್ತು ತಿಂಗಳ ಪ್ರಸವ ಇದ್ದ ಹಾಗೆ. ಮಗು ಹುಟ್ಟಿದ ನಂತರದ ಸಂತಸ ವರ್ಣಿಸಲು ಸಾಧ್ಯವಿಲ್ಲ. ಅದೇ ರೀತಿ ಈ ಕಾರ್ಯ ಕೂಡ. ಯಾವುದೇ ಅಡಚಣೆ ಇಲ್ಲದೆ ಕೆಲಸ ನಡೆಯಲಿ. ವಿಷ್ಣು ಸ್ಮಾರಕಕ್ಕೆ ಬೇಕಾದ ಎಲ್ಲಾ ಯೋಜನೆಗಳು ನಮ್ಮಲ್ಲಿದೆ. ಕಾಮಗಾರಿ ವೆಚ್ಚಕ್ಕೆ 11 ಕೋಟಿ ತಗುಲಬಹುದು. ಸರ್ಕಾರದಿಂದ ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ. ಈ ಸ್ಮಾರಕ ಅಭಿಮಾನಿಗಳ ಹಾಗೂ ಸಾರ್ವಜನಿಕರ ಸ್ವತ್ತು. ಇಲ್ಲಿ ಫಿಲ್ಮ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್, ಮ್ಯೂಸಿಯಂ ಎಲ್ಲವೂ ಬರಲಿದೆ ಎಂದು ತಿಳಿಸಿದರು.
ನಟ ಅನಿರುದ್ಧ್ ಮಾತನಾಡಿ, ಮೈಸೂರಿನಲ್ಲಿ ಸ್ಮಾರಕ ಆಗುತ್ತಿರುವುದು ಖುಷಿ ತಂದಿದೆ. ವಿಷ್ಣು ಅಪ್ಪಾಜಿಯವರ ಕನಸು ಕೂಡ ಇದೇ ಆಗಿತ್ತು. ಇದು ಕೇವಲ ಸ್ಮಾರಕವಲ್ಲ, ರಾಜ್ಯದ ಮಾಡೆಲ್. ರಂಗ ತರಬೇತಿಯಿಂದ ಹಿಡಿದು ಸಿನಿಮಾಗೆ ಸಂಬಂಧಿಸಿದ ಎಲ್ಲ ರೀತಿಯ ತರಬೇತಿ ಇಲ್ಲಿ ಇರಲಿದೆ. ದಕ್ಷಿಣ ಭಾರತದಲ್ಲಿ ಇದೊಂದು ಉತ್ತಮ ಮ್ಯೂಸಿಮ್ ಆಗಬೇಕಿದೆ. ಅಭಿಮಾನಿಗಳ ಆಶಯದಂತೆ ಅಪ್ಪಾಜಿ ಕನಸು ಇದೀಗ ಈಡೇರುತ್ತಿದೆ. 10 ವರ್ಷಗಳ ಕಾಲ ನಡೆದ ಹೋರಾಟದ ಫಲ ಇಂದು ದೊರಕಿದೆ ಎಂದರು.
ಸದ್ಯದಲ್ಲೇ ಮೈಸೂರಿನಲ್ಲಿ ಡಾ.ವಿಷ್ಣು ಸ್ಮಾರಕ ಕಾಮಗಾರಿ ಆರಂಭ
ಮೈಸೂರು ಉದ್ಬೂರಿನ ಹಾಳಾಲು ಗ್ರಾಮದಲ್ಲಿ ಮೈಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆ ಪಕ್ಕದಲ್ಲಿ ಸ್ಮಾರಕ ಸ್ಥಳವಿದ್ದು, ಮೊದಲಿಗೆ 5 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತದಿಂದ ಸ್ವಚ್ಛಗೊಳಿಸಲಾಯಿತು. ಜೆಸಿಬಿ, ಟ್ಯ್ರಾಕ್ಟರ್ ಸಹಾಯದೊಂದಿಗೆ ಕಾಮಗಾರಿ ಇಂದಿನಿಂದ ಆರಂಭವಾಗಿದೆ.