ವಿಷ್ಣು ಸ್ಮಾರಕದ ನೀಲನಕ್ಷೆ ತಯಾರಿ: ಸದ್ಯದಲ್ಲೇ ಆರಂಭ ಕಾಮಗಾರಿ
ಮೈಸೂರು, ಜೂನ್ 29: ಬಹುನಿರೀಕ್ಷಿತ ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸದ್ಯದಲ್ಲೇ ಚಾಲನೆ ದೊರಕಲಿದೆ.
ಮೈಸೂರು ತಾಲ್ಲೂಕಿನ ಮಾನಂದವಾಡಿ ರಸ್ತೆಯ ಉದ್ಬೂರು ಗೇಟ್ ಎದುರು ಆಲಾಳು ಗ್ರಾಮದ ಸರ್ವೆ ನಂಬರ್ 8ರಲ್ಲಿ 5 ಎಕರೆ ಭೂಮಿಯನ್ನು ಈ ಹಿಂದಿನ ಸಿಎಂ ಸಿದ್ದರಾಮಯ್ಯ ಮಂಜೂರು ಮಾಡಿದ್ದರು. ಸದರಿ ಭೂಮಿ ಮೈಸೂರು ಜಿಲ್ಲಾಡಳಿತ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಖಾತೆಯೂ ಆಗಿದೆ. ಈ ನಡುವೆ ಉದ್ಬೂರು ಮಹದೇವಮ್ಮ, ಸಣ್ಣಪ್ಪ ಹಾಗೂ ಇತರರು ಉಳುಮೆ ಭೂಮಿಯನ್ನು ಕೊಡುವುದಿಲ್ಲವೆಂದು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅರ್ಜಿದಾರರ ಕೋರಿಕೆ ಮೇರೆಗೆ ತಡೆಯಾಜ್ಞೆ ನೀಡಿತ್ತು.
ಸದ್ಯದಲ್ಲೇ ಮೈಸೂರಿನಲ್ಲಿ ಡಾ.ವಿಷ್ಣು ಸ್ಮಾರಕ ಕಾಮಗಾರಿ ಆರಂಭ
ತಹಶೀಲ್ದಾರ್ ರಮೇಶ್ ಬಾಬು ರಾಜ್ಯ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ಸರ್ಕಾರಿ ಭೂಮಿ ಎಂದು ಸಾಬೀತು ಮಾಡಿದ್ದರು. ಇದಾದ ಬಳಿಕ ಎದುರಾಳಿಗಳು ವಿಚಾರಣೆಗೆ ಗೈರಾಗಿದ್ದರಿಂದ ನ್ಯಾಯಾಲಯವು ತಡೆಯಾಜ್ಞೆ ತೆರವು ಮಾಡಿ ಸ್ಮಾರಕ ನಿರ್ಮಾಣ ಮಾಡಬಹುದು ಎಂದು ಆದೇಶಿಸಿದೆ.
ಸದ್ಯ 5 ಎಕರೆ ಭೂಮಿಯಲ್ಲಿ 11 ಕೋಟಿ ಅನುದಾನದಲ್ಲಿ ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಟ್ರಸ್ಟ್ ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಡಾ.ವಿಷ್ಣುವರ್ಧನ್ ಅವರ ಅಳಿಯ, ಚಿತ್ರನಟ ಅನಿರುದ್ಧ ಪ್ರತಿಕ್ರಿಯಿಸಿ, ಆರ್ಕಿಟೆಕ್ಚರಲ್ ನಕ್ಷೆ ಶೇ 90ರಷ್ಟು ಆಗಿದೆ. ವಿನ್ಯಾಸ ಪೂರ್ಣಗೊಂಡ ನಂತರ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ದಿನಾಂಕ ನಿಗದಿಗೊಳಿಸಿದಾಗ ಸಭೆ ಕರೆದು ಚರ್ಚಿಸಿ, ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.