ಮೈಸೂರು: ಕೊರೊನಾ ವಾರಿಯರ್ಸ್ ಗಳನ್ನು ಅಭಿನಂದಿಸಿದ ಕಿಚ್ಚ ಸುದೀಪ್
ಮೈಸೂರು, ಜುಲೈ 15: ಅಭಿಮಾನಿಗಳನ್ನು ಮಾತನಾಡಿಸಲು ನಟ ಕಿಚ್ಚ ಸುದೀಪ್ ಅವರು ಯೂಟ್ಯೂಬ್ ಚಾನೆಲ್ ಮೂಲಕ ಲೈವ್ ಬಂದಿದ್ದು, ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳನ್ನು ಲೈವ್ ಗೆ ಕರೆತಂದು ಅವರನ್ನು ಅಭಿನಂದಿಸಿದರು.
ಮೈಸೂರು ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಅವರ ಜೊತೆ ಲೈವ್ ನಲ್ಲಿ ಮಾತುಕತೆ ನಡೆಸಿದ ಕಿಚ್ಚ ಸುದೀಪ್, ಕೊರೊನಾ ವೈರಸ್ ಸಂದರ್ಭ ತಮ್ಮ ಜೀವನವನ್ನೇ ಪಣಕ್ಕಿಟ್ಟು ನೀವು ನಿಮ್ಮನ್ನು ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಮೈಸೂರು ಲಾಕ್ ಡೌನ್ ಕುರಿತು ಸಿಎಂಗೆ ಸಾರಾ ಮಹೇಶ್ ಪತ್ರ
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ, ನಿಮ್ಮ ಜೊತೆ ಮಾತಾಡುತ್ತಿರುವುದು ಸಂತೋಷವಾಗಿದೆ, ಲಕ್ಷಾಂತರ ಅಭಿಮಾನಿಗಳು ಆನ್ ಲೈನ್ ನಲ್ಲಿದ್ದು, ಎಲ್ಲರ ಜೊತೆ ಮಾತನಾಡುವ ಅವಕಾಶ ಸಿಕ್ಕಿದ್ದಕ್ಕೆ ಎಲ್ಲ ಅಭಿಮಾನಿಗಳಿಗೂ ಧನ್ಯವಾದ ಎಂದು ತಿಳಿಸಿದರು.
ನಂತರ ಮಾತನಾಡಿ ಡಿಸಿಪಿ ಅವರು, ತಮ್ಮ ಮಾತನ್ನು ಲಕ್ಷಾಂತರ ಜನ ಕೇಳ್ತಾರೆ. ಈ ಸಂದರ್ಭದಲ್ಲಿ ಕೊರೊನಾ ವೈರಸ್ ಹರಡುತ್ತಿದ್ದು, ಜನರು ಮುಂಜಾಗೃತೆಯನ್ನು ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವ ಕೂಡ ಮುಖ್ಯವಾಗಿರುವುದರಿಂದ ಈ ನಿಟ್ಟಿನಲ್ಲಿ ತಾವು ಜಾಗೃತಿ ಮೂಡಿಸಬೇಕು ಎಂದು ಕೇಳಿಕೊಂಡರು.
ಮೊದಲು ಕೊರೊನಾ ವೈರಸ್ ಕಂಡು ಬಂದು ಬಳಿಕ ಇಲ್ಲವಾಗಿ, ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ಹೆಚ್ಚಿನ ಪ್ರಕರಣ ಕಂಡು ಬರುತ್ತಿವೆ. ದೇಶಾದ್ಯಂತ ರಾಜಕಾರಣಿಗಳು, ನಟ-ನಟಿಯರಲ್ಲೂ ಕೊರೊನಾ ವೈರಸ್ ಕಂಡು ಬರುತ್ತಿದೆ. ಸಾಕಷ್ಟು ಸಾವು ನೋವು ಸಂಭವಿಸುತ್ತಿವೆ ಎಂದು ಹೇಳಿದರು.
ಸೋಂಕಿತರ ಚಿಕಿತ್ಸೆಗೆ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ಸಾವಿರ ಬೆಡ್
ರಸ್ತೆ ಅಪಘಾತದಲ್ಲಿ ಕೂಡಾ ಸಾಕಷ್ಟು ಜನರು ಮರಣವನ್ನು ಹೊಂದುತ್ತಿದ್ದಾರೆ. ಕೊರೊನಾ ವೈರಸ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಆ ತರಹದ ಸಾವು ನೋವು ಕಂಡು ಬರುತ್ತಿದೆ. ಇವತ್ತು ತಮ್ಮ ಮೂಲಕ ಒಂದು ಅಭಿಯಾನವನ್ನು ಆರಂಭ ಮಾಡಬೇಕು. ಸಂಚಾರ ನಿಯಮವನ್ನು ನಾವು ಪೊಲೀಸರ ಒತ್ತಡಕ್ಕೋಸ್ಕರ ಪಾಲನೆ ಮಾಡುವುದಲ್ಲ, ವೈಯಕ್ತಿಕ ನಿರ್ಧಾರದಿಂದ ಕೂಡ ನಾವು ನಿಯಮವನ್ನು ಪಾಲನೆ ಮಾಡಿ ಸಾಕಷ್ಟು ಸಾವು ನೋವುಗಳನ್ನು ಕಡಿಮೆ ಮಾಡಬೇಕೆನ್ನುವ ಸಂದೇಶವನ್ನು ನೀಡಬೇಕೆಂದರು.
ಮುಂದಿನ ದಿನಗಳಲ್ಲಿ ಆ ರೀತಿಯ ಜಾಗೃತಿ ಮೂಡಿಸುವ ಕೆಲಸವನ್ನು ನೀವು ಮಾಡಬೇಕು, ಲಕ್ಷಾಂತರ ಜನ ರಸ್ತೆ ಅಪಘಾತದಲ್ಲಿ ಮರಣ ಹೊಂದುವುದನ್ನು ಕಾಣುತ್ತಿದ್ದೇವೆ. ನೀವು ಜಾಗೃತಿ ಮೂಡಿಸುವ ಮುಂದಾಳತ್ವ ವಹಿಸಬೇಕೆಂದು ಸುದೀಪ್ ಅವರಲ್ಲಿ ಮನವಿ ಮಾಡಿದರು.
ಸಾಕಷ್ಟು ಪರಿಸರ ಜಾಗೃತಿ ಮಾಡ್ತೇವೆ. ಬೇರೆ ಬೇರೆ ವಿಷಯಗಳ ಕುರಿತು ಜಾಗೃತಿ ಮೂಡಿಸಬೇಕು. ಅದೇ ರೀತಿ ಸಂಚಾರದ ನಿಯಮ, ರಸ್ತೆ ನಿಯಮ ಪಾಲಿಸುವಂತದ್ದು. ಪ್ರಮುಖವಾಗಿ ಹೆಲ್ಮೆಟ್ ನ್ನು ಧರಿಸಿ ವಾಹನ ಚಾಲನೆ ಮಾಡಿದರೆ, ಲಕ್ಷಾಂತರ ಜನ ಪ್ರಾಣವನ್ನು ಉಳಿಸಿಕೊಳ್ಳುತ್ತಾರೆ.
ತಮ್ಮ ಮೂಲಕ ಸಂಚಾರ ನಿಯಮ ಪಾಲನೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ, ತಮ್ಮ ಮೂಲಕ ಒಂದು ಅಭಿಯಾನವಾಗಲಿ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ನಟ ಸುದೀಪ್ ಖಂಡಿತ ಮಾಡುತ್ತೇವೆ. ಮಾಡುತ್ತಲೂ ಇದ್ದೇವೆ. ಎಲ್ಲಾ ಪೊಲೀಸ್ ಸಿಬ್ಬಂದಿಗಳು, ವೈದ್ಯರು ತಮ್ಮ ಕುಟುಂಬದವರನ್ನೆಲ್ಲ ರಿಸ್ಕ್ ನಲ್ಲಿ ಹಾಕಿ ಕೊರೊನಾ ವೈರಸ್ ನಿಯಂತ್ರಣದ ಕೆಲಸ ಮಾಡುತ್ತಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಎಂದರು.