ಸೇವ್ ಮೈಸೂರು ಅಭಿಯಾನಕ್ಕೆ 'ಸಲಗ'ದ ಬಲ: ಹೆಲಿ ಟೂರಿಸಂ ಆರಂಭಕ್ಕೆ ವಿಜಯ್ ವಿರೋಧ
ಮೈಸೂರು, ಏಪ್ರಿಲ್ 15: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮರಗಳನ್ನು ಕಡಿದು ಹೆಲಿ ಟೂರಿಸಂ ಆರಂಭಿಸುವ ಪ್ರವಾಸೋದ್ಯಮ ಇಲಾಖೆ ನಿರ್ಧಾರದ ವಿರುದ್ಧ ನಡೆಯುತ್ತಿರುವ "ಸೇವ್ ಮೈಸೂರು' ಅಭಿಯಾನಕ್ಕೆ ʼಸಲಗʼ ಚಿತ್ರತಂಡ ಸಾಥ್ ನೀಡಿದೆ.
ಹೆಲಿ ಟೂರಿಸಂ ಸಲುವಾಗಿ ನೂರಾರು ಮರಗಳ ಹನನಕ್ಕೆ ಮುಂದಾಗಿದ್ದ ಪ್ರವಾಸೋದ್ಯಮ ಇಲಾಖೆ ನಡೆಯನ್ನು ವಿರೋಧಿಸಿ ನಡೆಯುತ್ತಿರುವ ಅಭಿಯಾನದ ಕುರಿತಂತೆ ನಟ ದುನಿಯಾ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿದ್ದಾರೆ.
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
ಈ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ನಟ ವಿಜಯ್, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡುವ ಸಲುವಾಗಿ ಲಲಿತ್ ಮಹಲ್ ಹೋಟೆಲ್ ಮುಂಭಾಗದ ಮರಗಳನ್ನು ಕಡಿಯುವ ವಿಚಾರ ಗಮನಕ್ಕೆ ಬಂತು. ನಾವುಗಳು ಮರ ಬೆಳೆಸೋಕೆ ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು ಎಂದಿದ್ದಾರೆ.
ಆ ಜಾಗದಲ್ಲಿ ಮರಗಳು ಇರೋದಕ್ಕೆ ಅಷ್ಟು ಸುಂದರವಾಗಿ ಕಾಣೋದು. ಶೂಟಿಂಗ್ ಟೈಂನಲ್ಲಿ ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದಾಗ ಖುಷಿ ಆಗುತ್ತದೆ. ಹೀಗಾಗಿ ಈ ಯೋಜನೆಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿ, ಮರ ಕಡಿಯೋದನ್ನು ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡುವ ಪ್ಲಾನ್ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಹೇಗಿರುತ್ತೋ, ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡೋದಕ್ಕೂ ಅಷ್ಟೇ ವಿರೋಧ ಇರುತ್ತದೆ. ಸೇವ್ ಮೈಸೂರು ಕ್ಯಾಂಪೇನ್ಗೆ ನನ್ನ ಬೆಂಬಲ ಇದೆ. ಸರ್ಕಾರ ಮತ್ತೆ ಯೋಚನೆ ಮಾಡಿ ಯೋಜನೆ ಕೈಗೆತ್ತಿಕೊಳ್ಳಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿರುವ ದುನಿಯಾ ವಿಜಯ್, ಸೇವ್ ಮೈಸೂರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.