ದರ್ಶನ್ ಡಿಸ್ಜಾರ್ಜ್: ನನಗೇನು ಆಗಿಲ್ಲ ಎಂದ ಚಾಲೆಂಜಿಂಗ್ ಸ್ಟಾರ್
ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಡಿಸ್ಜಾರ್ಜ್ ಆಗಿದ್ದಾರೆ. ಇಂದು (ಮಾರ್ಚ್ 4) ಬೆಳಗ್ಗೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದರ್ಶನ್ ದಾಖಲಾಗಿದ್ದರು.
ಆಸ್ಪತ್ರೆಯಿಂದ ಹೊರಬಂದ ದರ್ಶನ್ ''ಸ್ವಲ್ಪ ಗ್ಯಾಸ್ಟಿಕ್ ಆಗಿತ್ತು. ನನಗೆ ಏನು ಆಗಿಲ್ಲ. ಫಸ್ಟ್ ಕ್ಲಾಸ್ ಆಗಿ ಇದ್ದೇನೆ.'' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗ್ಯಾಸ್ಟಿಕ್ ಸಮಸ್ಯೆಯಿಂದ ದರ್ಶನ್ ಇಂದು ಮುಂಜಾನೆ ಕೊಲಂಬಿಯಾ ಏಷಿಯಾಗೆ ದಾಖಲಾಗಿದ್ದರು. ಆಸ್ಪತ್ರೆಯ ಸ್ಪೆಷಲ್ ವಾರ್ಡ್ ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಒಂದೇ ದಿನದಲ್ಲಿ ಚಿಕಿತ್ಸೆ ಮುಗಿದಿದ್ದು, ವೈದ್ಯರ ಸಲಹೆಯಂತೆ ಡಿಸ್ಜಾರ್ಜ್ ಆಗಿದ್ದಾರೆ.
ಸಿನಿಮಾದ ಕೆಲಸಗಳ ನಡುವೆ ದರ್ಶನ್ ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡದೆ ಇರುವ ಕಾರಣ ಗ್ಯಾಸ್ಟಿಕ್ ಆಗಿತ್ತು. ಇಂದು ಬೆಳಗ್ಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಡಾ.ಅನೂಪ್ ಆಳ್ವಾ ದರ್ಶನ್ರಿಗೆ ಚಿಕಿತ್ಸೆ ನೀಡಿದ್ದಾರೆ.
ಅನಾರೋಗ್ಯದ ಹಿನ್ನಲೆ ನಟ ದರ್ಶನ್ ಆಸ್ಪತ್ರೆಗೆ ದಾಖಲು
ದರ್ಶನ್ 'ರಾಬರ್ಟ್' ಸಿನಿಮಾದ ಹಾಡು ನಿನ್ನೆ (ಮಾರ್ಚ್ 3) ಬಿಡುಗಡೆಯಾಗಿ, ದೊಡ್ಡ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ಏಪ್ರಿಲ್ 9 ರಂದು ಬಿಡುಗಡೆ ಆಗಲಿದೆ.