ಮೈಸೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ
ಮೈಸೂರು, ಮೇ 29: ಕ್ಷುಲ್ಲಕ ಕಾರಣಕ್ಕೆ ನಿಂದಿಸಿದ್ದರಿಂದ ಆಕ್ರೋಶಿತನಾದ ಮತ್ತೊಬ್ಬನು ನಿಂದಿಸಿದವನ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಬಿಳಿಕೆರೆ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಬಿಳಿಕೆರೆ ಗ್ರಾಮದ ನಿವಾಸಿ ಚಂದ್ರಶೇಖರಾಚಾರಿ ಎಂಬಾತನನ್ನು ಕಾಳಪ್ಪ ನಾಯಕ (35) ಎಂಬಾತ ನಿಂದಿಸಿದ್ದ ಎನ್ನಲಾಗಿದೆ. ಇದರಿಂದ ಉದ್ರಿಕ್ತನಾದ ಚಂದ್ರಶೇಖರಾಚಾರಿ ಮನೆಯಿಂದ ಆ್ಯಸಿಡ್ ತಂದು ಕಾಳಪ್ಪನ ಮೇಲೆ ಎರಚಿದ್ದಾನೆ. ಆ್ಯಸಿಡ್ ದಾಳಿಯಿಂದ ಮುಖದ ಬಲ ಭಾಗ, ಕಿವಿ ಹಾಗೂ ಬೆನ್ನಿನಲ್ಲಿ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ ಮಾಡಿದ ವ್ಯಕ್ತಿ
ಆ್ಯಸಿಡ್ ದಾಳಿ ಮಾಡಿದ ಬಿಳಿಕೆರೆ ನಿವಾಸಿ ಚಂದ್ರಶೇಖರಾಚಾರಿ (40) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಂದ್ರಶೇಖರಾಚಾರಿ ಮತ್ತು ಕಾಳಪ್ಪ ನಡುವೆ ಆರಂಭಗೊಂಡ ಮಾತಿನ ಚಕಮಕಿ ನಂತರ ವಿಕೋಪಕ್ಕೆ ತಿರುಗಿದೆ.
ಕಾಳಪ್ಪ ಅಶ್ಲೀಲವಾಗಿ ನಿಂದಿಸಿದ್ದರಿಂದ ಸಿಟ್ಟಿಗೆದ್ದು ಚಂದ್ರಶೇಖರಾಚಾರಿ ಆ್ಯಸಿಡ್ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.