ನಿರುದ್ಯೋಗಿಗಳಿಗೆ ದಾರಿದೀಪವಾದ ಮೈಸೂರಿನ ಅಚ್ಯುತಾನಂದ
ಮೈಸೂರು, ಡಿಸೆಂಬರ್.02: ವಾಟ್ಸ್ ಅಪ್, ಫೇಸ್ ಬುಕ್ ನಿಂದ ಬರೀ ಟೈಂ ವೇಸ್ಟ್ . ಇದರಿಂದ ಆಗುವ ಪ್ರಯೋಜನವೇನು? ಎಂಬ ಮಾತು ಹಲವರ ಬಾಯಲ್ಲಿ ಕೇಳಿಬರುತ್ತಿದೆ. ಆದರೆ ಇಂತಹ ಸಾಮಾಜಿಕ ಜಾಲತಾಣಗಳನ್ನೇ ಬಳಸಿಕೊಂಡು ಕೆಲಸ ಗಿಟ್ಟಿಸಿಕೊಳ್ಳುವ ವಿಧಾನವೊಂದನ್ನು ಕಂಡುಹಿಡಿದಿದ್ದಾರೆ ಮೈಸೂರು ನಿವಾಸಿ ಎಸ್. ಅಚ್ಯುತಾನಂದ.
ನಗರದ ಟಿ.ಕೆ.ಲೇಔಟ್ ನಿವಾಸಿಯಾಗಿರುವ ಅಚ್ಯುತಾನಂದ ಬೆಂಗಳೂರಿನ ಇನ್ ಸೈನ್ ಎಕ್ವಿಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಕಾಫಿ ಪಾಯಿಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯುಸಿನೆಸ್ ಯೂನಿಟ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಯಲುಸೀಮೆಯ ರೈತರ ಮೊಗದಲ್ಲಿ ಸಂತಸ: ಕಾರಣವೇನು ಗೊತ್ತಾ?
ಕೆಲವು ತಿಂಗಳಿನಿಂದೀಚೆಗೆ ನಿರುದ್ಯೋಗದ ಸಮಸ್ಯೆ ಕುರಿತು ಅಚ್ಯುತಾನಂದ ಆರಂಭಿಸಿದ 'ಉದ್ಯೋಗ ನಿಮಿತ್ತಂ' ವಾಟ್ಸಾಪ್ ಗ್ರೂಪ್ ನಿಂದ ಇದುವರೆಗೆ 250ಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆದಿದ್ದಾರೆ. ಯಾವುದೇ ಹಣದ ಖರ್ಚಿಲ್ಲದೇ, ಮಧ್ಯವರ್ತಿಗಳ ಹಾವಳಿ ಇಲ್ಲದೆ, ಜಾಬ್ ಕನ್ಸಲ್ಟೆನ್ಸಿಗಳ ಮಧ್ಯ ಪ್ರವೇಶವಿಲ್ಲದೆ ಉದ್ಯೋಗ ನೀಡುವ ವೇದಿಕೆಯನ್ನು ಕಲ್ಪಿಸಿದ್ದಾರೆ.
ವಾಟ್ಸ್ ಅಪ್ ಮೂಲಕವೇ ಉದ್ಯೋಗ ದೊರಕಿಸಿಕೊಡುತ್ತಿರುವ ಅಚ್ಯುತಾನಂದ ಅವರಿಗೆ ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿನ ಸಾಧನೆಗಾಗಿ ಸಮರ್ಥ ಕನ್ನಡಿಗ ಸಂಘವು 2018, ಅ.28ರಂದು ತುಮಕೂರಿನಲ್ಲಿ ಸಮರ್ಥ ಕನ್ನಡಿಗ' ಪ್ರಶಸ್ತಿ ನೀಡಿ ಗೌರವಿಸಿದರೆ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ 2018, ಸೆ.8ರಂದು ನಡೆದ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಸನ್ಮಾನಿಸಲಾಯಿತು. ಮುಂದೆ ಓದಿ...
ಹೀಗೂ ಬಳಸಿಕೊಳ್ಳಬಹುದು
ಪ್ರಸ್ತುತ ದಿನಗಳಲ್ಲಿ ಫೇಸ್ ಬುಕ್, ವಾಟ್ಸಾಪ್ ಮತ್ತಿತರೆ ಸಾಮಾಜಿಕ ಜಾಲತಾಣದಿಂದ ಉಂಟಾಗುತ್ತಿರುವ ಅವಾಂತರಗಳ ಪಟ್ಟಿಯೇ ದೊಡ್ಡದಿದೆ. ಆದರೆ, ಅಚ್ಯುತಾನಂದ ಅವರು ವಾಟ್ಸಾಪ್ ಗ್ರೂಪ್ ಬಳಸಿಕೊಂಡು ಹಲವರಿಗೆ ಉದ್ಯೋಗ ದೊರೆಯುವಂತೆ ಮಾಡುವ ಮೂಲಕ ಸಾಮಾಜಿಕ ಜಾಲತಾಣವನ್ನು ಹೀಗೂ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸೇತುವೆಯಾಗಿ ಕೆಲಸ
ಈ ಗ್ರೂಪ್ ನಲ್ಲಿ ಅಚ್ಯುತಾನಂದರವರು ಉದ್ಯೋಗಿಗಳ ಬಗ್ಗೆ ಮಾಹಿತಿ ಪಡೆದು ಕೈಗಾರಿಕೆಗಳಿಗೆ ಅಗತ್ಯವಿರುವ ಹುದ್ದೆಗಳನ್ನು ಒದಗಿಸುವ ಮೂಲಕ ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಗ್ರೂಪ್ ಅನ್ನು ಆರಂಭಿಸಿದಾಗ 50 ಮಂದಿಯಿದ್ದರು.
ಆದರೆ ಮುಂದಿನ ದಿನಗಳಲ್ಲಿ 14 ತಂಡಗಳಿದ್ದು, ಸುಮಾರು 3,500 ಮಂದಿ ಸದಸ್ಯರನ್ನು ಹೊಂದಿದೆ. ಈ ಗುಂಪಿನ ಮತ್ತೊಂದು ವಿಶೇಷವೆಂದರೆ ವಿವಿಧ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ಸದಸ್ಯರಾಗಿದ್ದಾರೆ. ಇಲ್ಲಿನಿಂದಲೇ ನೇರವಾಗಿ ಉದ್ಯೋಗಿಗಳು ಸಂಸ್ಥೆಯೊಂದಿಗೆ ಸಂಪರ್ಕ ಬಳಸುತ್ತಾರೆ.
ಸಮೀಕ್ಷೆ: ಭಾರತದಲ್ಲಿ ಉದ್ಯೋಗ ಮತ್ತು ಹಣಕಾಸು ಸಮಸ್ಯೆ ಅಧಿಕ!
ನೆಮ್ಮದಿಯ ಜೀವನ
ಒಂದೂವರೆ ವರ್ಷದ ಹಿಂದೆ ಆರಂಭವಾದ ಈ ವಾಟ್ಸ್ ಅಪ್ ಗ್ರೂಪ್ ನಲ್ಲಿ ಇದುವರೆಗೆ 250ಕ್ಕೂ ಹೆಚ್ಚು ಮಂದಿ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಪಡೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಈ ಸಂತಸದ ವಿಷಯವನ್ನು ಗುಂಪಿನಲ್ಲಿನ ಇತರೆ ಸದಸ್ಯರೊಡನೆಯೂ ಹಂಚಿಕೊಂಡಿದ್ದಾರೆ.
ಪ್ರಸ್ತುತ ಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗುತ್ತಿದೆ. ಕಂಪೆನಿಗಳು ತಮ್ಮ ಸಂಸ್ಥೆಗೆ ಬೇಕಾದ ಸಿಬ್ಬಂದಿ ಸಂಖ್ಯೆ, ವಯಸ್ಸು, ಅರ್ಹತೆ, ವೇತನ ಮತ್ತಿತರ ವಿವರವನ್ನು ಗುಂಪಿನಲ್ಲಿ ಪ್ರಕಟಿಸಿದರೆ, ಎಲ್ಲಾ ರೀತಿಯ ವಿದ್ಯಾರ್ಹತೆ ಮತ್ತು ವಯಸ್ಸಿನವರೂ ಈ ಗುಂಪಿನಲ್ಲಿ ಸದಸ್ಯರಾಗಿರುವುದರಿಂದ ಅರ್ಹರಿಗೆ ಆಯಾ ಉದ್ಯೋಗಗಳ ದೊರಕಿಸಿಕೊಡಲು ಅನುಕೂಲವಾಗಿದೆ.
ಯುವಪೀಳಿಗೆಗೆ ಮಾದರಿ
ಗ್ರಾಮೀಣ ಭಾಗದ ಜನರಿಗೆ ಹಾಗೂ ನಿಜವಾಗಿಯೂ ಉದ್ಯೋಗ ಬೇಕಾದವರಿಗೆ ಕೆಲಸ ಸಿಗಲೆಂದು ಈ ಗ್ರೂಪ್ ಆರಂಭಿಸಿದೆ. ಆದರೆ ಇಷ್ಟರ ಮಟ್ಟಿಗೆ ಮೇಲ್ಪಂಕ್ತಿಗೇರುತ್ತದೆ ಎಂದು ಭಾವಿಸಿರಲಿಲ್ಲ ಎಂದು ಸಂತಸಪಡುತ್ತಾರೆ ಅಚ್ಯುತಾನಂದ. ಒಟ್ಟಾರೆ ವಾಟ್ಸ್ ಆಪ್, ಫೇಸ್ ಬುಕ್ ಎಂಬ ಜಾಲತಾಣಗಳಲ್ಲಿ ಟೈಂ ಪಾಸ್ ಮಾಡುವ ಬದಲು ಈ ರೀತಿ ಸಾಮಾಜಿಕ ಕಾರ್ಯಗಳನ್ನು ಮಾಡಬಹುದೆಂಬ ಮಾದರಿಯಾದ ಅಚ್ಯುತಾನಂದರವರ ಪರಿ ಯುವಪೀಳಿಗೆಗೆ ಮಾದರಿಯಾಗಲಿ.