ತನ್ವೀರ್ ಕತ್ತಿಗೆ ಮಚ್ಚು ಹಾಕುವ ಮುನ್ನ ನಾಯಿ ಕತ್ತು ಸೀಳುತ್ತಿದ್ದುದೇಕೆ?
ಮೈಸೂರು, ನವೆಂಬರ್ 23: ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾರೆ. ತನ್ವೀರ್ ಸೇಠ್ ಒಳಗೊಂಡಂತೆ ಗಣ್ಯರ ಕೊಲೆ ಮಾಡಲು ಈ ಹಿಂದೆಯೇ ಸಂಚು ರೂಪಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ.
ಇಷ್ಟೇ ಅಲ್ಲ, ಈ ರೀತಿ ಕೊಲೆ ಮಾಡಲು ತರಬೇತಿಯನ್ನೂ ಪಡೆದಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಅವರ ಆ ತರಬೇತಿಯ ವಿವರಗಳನ್ನು ಕೇಳಿದರೆ ಶಾಕ್ ಆಗುವುದು ಖಚಿತ.
ಕೊಲೆ ಮಾಡಲು ತರಬೇತಿ ಹೇಗಿತ್ತು?
ಕೊಲೆ ಮಾಡಲು ಈ ಒಂದು ತಂಡ ಮಾಡಿದ್ದ ಸಿದ್ಧತೆಯನ್ನು ಕೇಳಿದರೆ ಬೆಚ್ಚಿಬೀಳಿಸುವಂತಿದೆ. ವ್ಯಕ್ತಿಗಳ ಕತ್ತು ಕುಯ್ಯಲು ಮೊದಲು ನಾಯಿಗಳ ಕತ್ತು ಕುಯ್ಯುವ ಮೂಲಕ ಅಭ್ಯಾಸ ಮಾಡಿಕೊಂಡಿದ್ದರು ಈ ಆರೋಪಿಗಳು. ನಾಯಿಗಳ ಕತ್ತು ಕತ್ತರಿಸಿ ಕೊಲೆಯ ಪ್ಲಾನ್ ಗಳನ್ನು ನಡೆಸಲಾಗಿತ್ತು ಎಂಬ ವಿಷಯವೂ ತನಿಖೆ ವೇಳೆ ತಿಳಿದುಬಂದಿದೆ.
ತನ್ವೀರ್ ಸೇಠ್ ಕೊಲೆ ಯತ್ನ; ಮಾಸ್ಟರ್ ಮೈಂಡ್ ಯಾರು? ತನಿಖೆಯಿಂದ ಹೊರಬಿತ್ತು ಸ್ಫೋಟಕ ಮಾಹಿತಿ
ನಾಯಿಯನ್ನೇ ಏಕೆ ಆರಿಸಿಕೊಂಡರು?
ಮನುಷ್ಯರ ಕತ್ತು ಕುಯ್ಯಲು ಕಲಿಯುವುದಕ್ಕೆ ನಾಯಿ ಕತ್ತು ಕುಯ್ಯುವುದನ್ನು ಶುರು ಮಾಡಿದ್ದಾರೆ. ನಾಯಿಯನ್ನೇ ಈ ಅಭ್ಯಾಸಕ್ಕೆ ಆಯ್ಕೆ ಮಾಡಿಕೊಳ್ಳಲೂ ಒಂದು ಕಾರಣವಿದೆ. ನಾಯಿ ಕುತ್ತಿಗೆ ಭಾಗ ಮನುಷ್ಯನ ಕುತ್ತಿಗೆಗಿಂತ ಗಟ್ಟಿಯಾಗಿದೆ. ಇದೇ ಕಾರಣದಿಂದ ನಾಯಿಗಳ ಕುತ್ತಿಗೆ ಕತ್ತರಿಸಿದರೆ ಮನುಷ್ಯರ ಕತ್ತನ್ನು ಸೀಳುವುದು ಸುಲಭ ಎಂದು ಈ ತಂಡ ಈ ಅಭ್ಯಾಸ ನಡೆಸಿತ್ತು. ಈ ಅಭ್ಯಾಸದ ಫಲವಾಗಿ ಆರೋಪಿ ಫರ್ಹಾನ್ ತನ್ವೀರ್ ಸೇಠ್ ಕುತ್ತಿಗೆಗೆ ಮಚ್ಚಿನೇಟು ಹಾಕಿದ್ದಾನೆ.
ಮಾಸ್ಟರ್ ಮೈಂಡ್ ಬಂಧಿಸಿದ್ದ ಪೊಲೀಸರು
ಆರ್ ಎಸ್ ಎಸ್ ರಾಜು ಕೊಲೆ ಆರೋಪಿ ಅಬೀದ್ ಪಾಷನೇ ಶಾಸಕ ತನ್ವೀರ್ ಸೇಠ್ ಕೊಲೆ ಪ್ರಯತ್ನದ ಹಿಂದೆಯೂ ಇರುವುದು ಎಂಬುದು ತಿಳಿಯುತ್ತಿದ್ದಂತೆ ಪೊಲೀಸರು ಎರಡು ದಿನದ ಹಿಂದೆ ಆತನನ್ನು ಬಂಧಿಸಿದ್ದರು. ಅಬೀದ್ ಪಾಷ ಈ ಪ್ರಕರಣದ ಮಾಸ್ಟರ್ ಮೈಂಡ್ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು, ಈ ವೇಳೆ ಕೆಲ ಮಹತ್ವದ ಮಾಹಿತಿಗಳು ಹೊರಬಿದ್ದಿದ್ದವು. ಈ ವೇಳೆ ಅಬೀದ್ ಪಾಷ, ಮೈಸೂರಿನಲ್ಲಿ ಪಿಎಫ್ ಐನ 30 ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎನ್ನುವ ವಿಚಾರವನ್ನು ಬಾಯ್ಬಿಟ್ಟಿದ್ದನು.
"ವರದಿಗೆ ಮುನ್ನವೇ ಎಸ್ ಡಿಪಿಐ ಬಗ್ಗೆ ರಾಜಕೀಯ ಪ್ರೇರಿತ ಹೇಳಿಕೆ ಏಕೆ?"; ಅಬ್ದುಲ್ ಮಜೀದ್
ಗಣ್ಯವ್ಯಕ್ತಿಗಳೇ ಈ ತಂಡದ ಟಾರ್ಗೆಟ್
ಒಂದು ತಂಡದಲ್ಲಿ 15 ಜನರಂತೆ ಈ ಗುಂಪು ಕಾರ್ಯನಿರ್ವಹಿಸುತ್ತದೆ. ರಾಜಕಾರಣಿಗಳು, ಧರ್ಮಗುರುಗಳು, ಗಣ್ಯ ವ್ಯಕ್ತಿಗಳೇ ಇವರ ಟಾರ್ಗೆಟ್. ಪ್ರತಿ ಹಂತದಲ್ಲಿ ಪ್ರಮುಖ ವ್ಯಕ್ತಿಗಳ ಚಲನವಲನವನ್ನು ಈ ಸದಸ್ಯರು ಗಮನಿಸುತ್ತಿದ್ದರು. ಆ ಮೂಲಕ ಹತ್ಯೆಗೆ ಸಂಚು ರೂಪಿಸಲಾಗುತ್ತಿತ್ತು. ತನ್ವೀರ್ ಹತ್ಯೆ ಯತ್ನಕ್ಕೆ ಮುನ್ನ ಇದೇ ರೀತಿ ನಿಗಾವಹಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸರು 5 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.