ಅನುಮತಿ ಪಡೆಯದೆ ಪುರಾತನ ಮೂರ್ತಿ ಇಟ್ಟುಕೊಂಡ ಆರೋಪ: ಕಲಾವಿದೆ ಬಂಧನ
ಮೈಸೂರು, ಜುಲೈ 2: ಖ್ಯಾತ ಮರಳು ಕಲಾಕೃತಿ ಕಲಾವಿದೆ ಗೌರಿ ಅವರನ್ನು ತಿ.ನರಸೀಪುರ ಪೊಲೀಸರು ಇಂದು ಬಂಧಿಸಿದ್ದಾರೆ. ಪ್ರಾಚ್ಯವಸ್ತು ಇಲಾಖೆಗೆ ಮಾಹಿತಿ ನೀಡದೆ ವಿಷ್ಣುವಿನ ಮೂರ್ತಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರೆಂಬ ಆರೋಪದ ಮೇರೆಗೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮೈಸೂರಿನ ಚಾಮುಂಡಿಬೆಟ್ಟ ರಸ್ತೆಯಲ್ಲಿ ಸ್ಯಾಂಡ್ ಮ್ಯೂಸಿಯಂ ನ್ನು ಗೌರಿ ನಿರ್ಮಾಣ ಮಾಡಿದ್ದಾರೆ. ತಿ.ನರಸೀಪುರ ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಪುರಾತನ ಕಲ್ಲಿನ ವಿಷ್ಣುವಿನ ಮೂರ್ತಿ ಸಿಕ್ಕಿತ್ತು.
"ಮೈಸೂರಿನಲ್ಲಿ ಹೆಚ್ಚುತ್ತಿವೆ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು''
ವಿಷ್ಣು ಮೂರ್ತಿಯ ಪಕ್ಕದಲ್ಲೇ ಜೆಸಿಬಿಯಿಂದ ಕಾಮಗಾರಿಯೂ ನಡೆದಿತ್ತು. ನಂತರ ಈ ಮೂರ್ತಿಯನ್ನು ತಮ್ಮ ಬಳಿ ಇರಿಸಿಕೊಂಡಿದ್ದ ಗೌರಿ ಪ್ರಾಚ್ಯವಸ್ತು ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.
ಈ ಕುರಿತು ಬಿಳಿಗೆರೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಗೌರಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಮೈಸೂರು ಡಿಸಿಯಿಂದ ಖಡಕ್ ಎಚ್ಚರಿಕೆ
ಕೆಆರ್ಎಸ್ ರಸ್ತೆಯಲ್ಲಿರುವ ಗೌರಿ ನಿವಾಸ ಜಲಭಾಗ್ ಗೆ ಪೊಲೀಸರು ಭೇಟಿ ನೀಡಿದ್ದು, ವಿಷ್ಣು ಮೂರ್ತಿಯನ್ನು ವಶಕ್ಕೆ ಪಡೆದ ನಂತರ ಪೊಲೀಸರು ಗೌರಿ ಅವರನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ. ವಿಷ್ಣು ಮೂರ್ತಿ ಸಂರಕ್ಷಣೆ ಮಾಡಲು ಯತ್ನಿಸಿದ್ದಕ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಂದು ಗೌರಿ ತಾಯಿ ಆರೋಪಿಸಿದ್ದಾರೆ.