ಮೈಸೂರಿನಲ್ಲಿ ಕೆಎಎಸ್ ಅಧಿಕಾರಿ ಸುಧಾ ಸಂಬಂಧಿ ಮನೆ ಮೇಲೆ ಎಸಿಬಿ ದಾಳಿ; ಹಲವು ದಾಖಲಾತಿಗಳು ವಶಕ್ಕೆ
ಮೈಸೂರು, ನವೆಂಬರ್ 07: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಶನಿವಾರ ಬೆಳಿಗ್ಗೆ ಬೆಂಗಳೂರಿನ ಬಿಡಿಎ ಭೂಸ್ವಾಧೀನಾಧಿಕಾರಿ ಬಿ.ಸುಧಾ ಅವರ ಮೈಸೂರಿನಲ್ಲಿರುವ ಸಂಬಂಧಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ದಾಳಿ ವೇಳೆ ಸುಧಾ ಮತ್ತು ಬೇನಾಮಿ ಹೆಸರಿನಲ್ಲಿರುವ ಅಪಾರ ಪ್ರಮಾಣದ ಆಸ್ತಿ ಪತ್ರ ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ಬೆಮೆಲ್ ಲೇಔಟ್ ನಲ್ಲಿ ಸುಧಾ ಅವರ ಸಂಬಂಧಿ ಮನೆ ಇದೆ. ಎಸಿಬಿಯ 9 ಜನರ ಅಧಿಕಾರಿಗಳ ತಂಡ ಶನಿವಾರ ಬೆಳಿಗ್ಗೆ ಆ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಪ್ರಿಂಟರ್, ಲ್ಯಾಪ್ ಟಾಪ್, ಆಸ್ತಿ ಪತ್ರಗಳು, ಚಿನ್ನಾಭರಣ ಸೇರಿದಂತೆ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಹಲವು ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿಯಲ್ಲೂ ಕೆಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಆಸ್ತಿಗೆ ಸಂಬಂಧಿಸಿದಂತೆ ನಾವು ಆದಾಯ ತೆರಿಗೆ ಪಾವತಿಸಿದ್ದೇವೆ. ನಮ್ಮ ಎಲ್ಲಾ ದಾಖಲಾತಿಗಳು ಕಾನೂನುಬದ್ಧವಾಗಿದೆ ಎಂದು ಆ ಮನೆಯವರು ಸ್ಪಷ್ಟನೆ ನೀಡಿದರು. ಆದರೂ ವಶಪಡಿಸಿಕೊಂಡ ದಾಖಲಾತಿಗಳನ್ನು ಪರಿಶೀಲನೆ ನಡೆಸಲು ಎಸಿಬಿ ಅಧಿಕಾರಿಗಳು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ಸುಧಾ ಅವರ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೊಡಿಗೇಹಳ್ಳಿಯ ಭವ್ಯ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ಹಗೂ ಹತ್ತು ಲಕ್ಷ ನಗದು ದೊರೆತಿದೆ.
ಉಡುಪಿ ಜಿಲ್ಲೆಯ ಚಾಂತಾರಿನಲ್ಲಿ ಇರುವ ಸುಧಾ ಅವರ ಗಂಡನ ಮನೆ ಮೇಲೂ ದಾಳಿ ನಡೆದಿದ್ದು, ಹೆಬ್ರಿ ತೆಂಕಬೆಟ್ಟು ಸೇರಿದಂತೆ ರಾಜ್ಯದ 6 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಎಸಿಬಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದೆ.