ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಎಬಿವಿಪಿ ಪ್ರತಿಭಟನೆ
ಮೈಸೂರು, ನವೆಂಬರ್ 6: ರಿಪಬ್ಲಿಕ್ ಟಿವಿ ಮಾಧ್ಯಮದ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಮೂಲಭೂತ ಸ್ವಾತಂತ್ರ್ಯದ ಮೇಲೆ ತುರ್ತು ಪರಿಸ್ಥಿತಿಯ ಹೇರಿಕೆಯಾಗಿದೆ ಎಂದು ಆರೋಪಿಸಿದರು.
"ಮೈಸೂರು ಡಿಸಿಗೆ ನಾಡಿನ ಪರಂಪರೆ ಕುರಿತು ತಿಳಿವಳಿಕೆ ನೀಡಿ"; ಪತ್ರ ಬರೆದ ಸಾರಾ ಮಹೇಶ್
ಅರ್ನಬ್ ಗೋಸ್ವಾಮಿ ಅವರನ್ನು ಅವರ ನಿವಾಸದಿಂದ ಬುಧವಾರ ಬೆಳಿಗ್ಗೆ ಬಂಧಿಸಿರುವುದು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಮೌಲಿಕ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದ ಹಾಗಿದೆ. ಕಾನೂನು ಬಾಹಿರವಾಗಿ ಬಂಧಿಸಿರುವುದು ಇಡೀ ದೇಶದ ಪತ್ರಿಕಾ ಸ್ವಾತಂತ್ರ್ಯವನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಗಿಸುವ ಷಡ್ಯಂತ್ರವಾಗಿದೆ ಎಂದರು.
ಅರ್ನಬ್ ಗೋಸ್ವಾಮಿ ಪಾಲಘರ್ ನಲ್ಲಿ ಸಾಧುಗಳ ಹತ್ಯೆ ನಡೆದಿರುವ ಬಗ್ಗೆ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅನೇಕ ಕಾನೂನು ಬಾಹಿರ ಕೃತ್ಯಗಳ ಕುರಿತಾಗಿ ರಾಜ್ಯ ಸರ್ಕಾರಕ್ಕೆ ಕನ್ನಡಿ ಹಿಡಿದಂತೆ ತೋರಿಸಿದ್ದರು. ಈ ಎಲ್ಲ ಘಟನೆಗಳನ್ನು ವರದಿ ಮಾಡಿರುವುದು ಪ್ರಜಾಪ್ರಭುತ್ವದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಅಸಹಿಷ್ಣುವಾಗಿದೆ ಎಂದು ಕಿಡಿಕಾರಿದರು.
ಮಹಾರಾಷ್ಟ್ರ ಪೊಲೀಸರ ನಿಖೆಯ ನಂತರ 2018ರಲ್ಲಿ ನಡೆದ ಆತ್ಮಹತ್ಯೆಯ ಕೇಸ್ ಅಂತ್ಯಕಂಡಿತ್ತು. ಆದರೆ ಸೇಡು ತೀರಿಸಿಕೊಳ್ಳುವ ಉದ್ದೇಶಕ್ಕಾಗಿ ಆ ಕೇಸನ್ನು ಮತ್ತೆ ಓಪನ್ ಮಾಡಿ ಮಹಾರಾಷ್ಟ್ರ ಸರ್ಕಾರವು ತನ್ನ ಪ್ರಜಾಪ್ರಭುತ್ವ ವಿರೋಧಿ ಮುಖವಾಡವನ್ನು ಬಯಲು ಮಾಡಿಕೊಂಡಿದೆ.
ಬಂಧನದ ಸಂದರ್ಭದಲ್ಲಿ ಅರ್ನಬ್ ಗೋಸ್ವಾಮಿಯವರ ಮನೆಯ ಸದಸ್ಯರೊಂದಿಗೆ ಪೊಲೀಸರು ನಡೆದುಕೊಂಡ ವರದಿಯು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿನ ಭಯಾನಕ ಕರಾಳ ದಿನಗಳನ್ನು ನೆನಪಿಸಿ ಕೊಡುತ್ತವೆ. ಅರ್ನಬ್ ಗೋಸ್ವಾಮಿ ಬಂಧನವು ಮಹಾರಾಷ್ಟ್ರದಲ್ಲಿನ ಮೌಲಿಕ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯ ಮತ್ತು ರಾಜ್ಯ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮುಖವಾಡ ಬಯಲಿಗೆ ಬರುತ್ತಿದೆ ಎಂದು ಆರೋಪಿಸಿದರು.
ಅರ್ನಬ್ ಗೋಸ್ವಾಮಿಯವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಮತ್ತು ಮಹಾರಾಷ್ಟ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ನಿಲ್ಲಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿತು.