ವೈದ್ಯರ ಮುಷ್ಕರ : ಮಂಡ್ಯದಲ್ಲಿ ಆಟೋದಲ್ಲೇ ಮಗು ಜನನ!
ಮೈಸೂರು, ನವೆಂಬರ್ 16: ಖಾಸಗಿ ವೈದ್ಯರ ಮುಷ್ಕರದ ಕಾವು ಒಂದೆಡೆಯಿದ್ದರೆ, ಇತ್ತ ಮಂಡ್ಯದಲ್ಲಿ ಗರ್ಭಿಣಿಯೊಬ್ಬರಿಗೆ ಆಟೋದಲ್ಲೇ ಹೆರಿಗೆಯಾಗಿದ್ದು, ವಿಚಾರ ತಿಳಿದು ಚಿಕಿತ್ಸೆ ನೀಡಿ ಸರ್ಕಾರಿ ವೈದ್ಯರು ಮಾನವೀಯತೆಯನ್ನು ಮೆರೆದಿದ್ದಾರೆ.
ಮಾನವೀಯತೆ ಮರೆತ ವೈದ್ಯರು ನಿಲ್ಲದ ರೋಗಿಗಳ ಅಳಲು
ನಗರದ ಷುಗರ್ ಟೌನ್ ನಿವಾಸಿ ರವಿಯವರ ಪತ್ನಿ ಸವಿತ ಎಂಬುವರು ಹೆರಿಗೆ ನೋವಿನಿಂದ ಬಳಲುತ್ತಿದ್ದು, ಕುಟುಂಬದವರು ಅವರನ್ನು ಆಟೋದಲ್ಲಿ ಕರೆದುಕೊಂಡು ಮಿಮ್ಸ್ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಗೆ ದಾಖಲಾಗಲು ಚೀಟಿಗಾಗಿ ಸರತಿ ಸಾಲಿನಲ್ಲಿ ಸವಿತ ಮನೆಯವರು ಕ್ಯೂ ನಿಂತಿದ್ದಾರೆ. ಆದರೆ ಮುಷ್ಕರದಿಂದ ವೈದ್ಯರ ಕೊರತೆ ಇರುವುದರಿಂದ ರೋಗಿಗಳ ಸಂಖ್ಯೆ ಅಧಿಕವಾಗಿದ್ದು, ಕ್ಯೂ ತುಂಬಾ ಉದ್ದವಿತ್ತು.
ತಕ್ಷಣ ಮುಷ್ಕರ ನಿಲ್ಲಿಸಿ, ವೈದ್ಯರಿಗೆ ಹೈಕೋರ್ಟ್ ಸೂಚನೆ
ಆಟೋದಲ್ಲಿದ್ದ ಸವಿತಾ ಅವರಿಗೆ ಚೀಟಿ ಪಡೆಯುವಷ್ಟರಲ್ಲೇ ಹೆರಿಗೆ ನೋವು ತುಂಬಾ ಕಾಣಿಸಿಕೊಂಡಿದೆ. ಪರಿಣಾಮ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ವಿಚಾರ ತಿಳಿದ ವೈದ್ಯರು ಆಟೋ ಬಳಿಯೇ ಧಾವಿಸಿ ಚಿಕಿತ್ಸೆ ನೀಡಿದ್ದಾರೆ.
ಮುಷ್ಕರದಿಂದ ಹೆರಿಗೆಗಾಗಿ ಮಿಮ್ಸ್ ಆಸ್ಪತ್ರೆಗೆ ಬರುತ್ತಿರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದ್ದು, ಪ್ರತಿನಿತ್ಯ ಸುಮಾರು 17 ಹೆರಿಗೆಗಳು ಮಿಮ್ಸ್ ಆಸ್ಪತ್ರೆಯಲ್ಲಿ ಆಗುತ್ತಿತ್ತು. ಆದರೆ ಮುಷ್ಕರದಿಂದ ದಿನಕ್ಕೆ 20ಕ್ಕಿಂತ ಹೆಚ್ಚು ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ