ಕಡೆ ಕಾರ್ತೀಕ ಪ್ರಯುಕ್ತ ಮೈಸೂರಿನೆಲ್ಲೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ
ಮೈಸೂರು, ಡಿಸೆಂಬರ್ 4 : ಕಾರ್ತೀಕ ಮಾಸದ ಕೊನೆಯ ಸೋಮವಾರ ಪ್ರಯುಕ್ತ ಮೈಸೂರಿನ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆಯಲು ಭಕ್ತರ ಮಹಾಪೂರ ಹರಿದು ಬಂತು.
ಕಾರ್ತೀಕ ಮಾಸದ ಸೇವೆಗಳನ್ನು ಪೂರೈಸಲು ಭಕ್ತರು ಬೆಳಗಿನ ಜಾವ 4 ಗಂಟೆಗೆ ಕಪಿಲಾ ನದಿಯಲ್ಲಿ ಸ್ನಾನ ಮಾಡಿಕೊಂಡು ದೇವಾಲಯದ ಸುತ್ತ ಉರುಳುಸೇವೆ, ಧೂಪ, ದೀಪ ಹಾಗೂ ಹರಕೆ ಮುಡಿ ಸಲ್ಲಿಸುವುದರಲ್ಲಿ ಉತ್ಸಾಹದಿಂದ ತೊಡಗಿದ್ದರು.
ಚಾಮುಂಡಿಬೆಟ್ಟದಲ್ಲಿ ಜನಸಾಗರದ ನಡುವೆ ಅದ್ದೂರಿಯಾಗಿ ನಡೆದ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ
ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್ ಹಾಗೂ ಋತ್ವಿಕರ ತಂಡ ಕಪಿಲಾ ನದಿಯಿಂದ ತಂದ ತೀರ್ಥದಿಂದ ಸ್ವಾಮಿಗೆ ಅಭಿಷೇಕ, ಪಂಚಾಮೃತ, ಹಾಲಿನ ಅಭಿಷೇಕ, ಬಿಲ್ವಪತ್ರೆ ಅರ್ಚನೆ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಹಿಳೆಯರು ದೇವಾಲಯದ ವಸಂತ ಮಂಟಪದ ಸುತ್ತ ತುಪ್ಪದ ದೀಪ ಹಚ್ಚಿ ಹರಕೆ ತೀರಿಸಿದರು. ದೇವಾಲಯದ ದಾಸೋಹ ಭವನದಲ್ಲಿ 10 ಸಾವಿರ ಭಕ್ತರಿಗೆ ಸಿಹಿ, ವಾಂಗಿಭಾತ್, ಮೊಸರನ್ನ, ಅನ್ನ-ಸಾರು ಹಾಗೂ ಪಾಯಸ ಬಡಿಸಲಾಯಿತು.
ಉದ್ಭವ ಮಹಾಲಕ್ಷ್ಮಿಯ ಪುಣ್ಯಕ್ಷೇತ್ರ ರಾಯಚೂರಿಗೆ ಹರಿದು ಬಂದ ಭಕ್ತಸಾಗರ
ನಗರದೆಲ್ಲೆಡೆ ಕಡೆ ಕಾರ್ತೀಕ ಸೋಮವಾರದ ಸಂಭ್ರಮ ಮನೆ ಮಾಡಿತ್ತು. ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ತಾಲೂಕು ಹಾಗೂ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲೂ ರೈತರು ತಮ್ಮ ಕೆಲಸಗಳಿಂದ ಬಿಡುವು ತೆಗೆದುಕೊಂಡು ತಮ್ಮ ತಮ್ಮ ಮನೆದೇವರಿಗೆ, ಗ್ರಾಮದೇವತೆಗೆ ಸಮೀಪದ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಹಲವು ದೇಗುಲಗಳಲ್ಲಿ ದೀಪೋತ್ಸವ ಕಣ್ಮನ ಸೆಳೆಯಿತು.