ಈ ಮಕ್ಕಳಿಗೆ ತಮ್ಮ ದಿನಾಚರಣೆಯ ಅರಿವೇ ಇಲ್ಲ
ಮೈಸೂರು, ನವೆಂಬರ್ 14 : ಮಕ್ಕಳ ದಿನಾಚರಣೆ ಎಂದರೆ ಎಲ್ಲಾ ಚಿಣ್ಣರಿಗೂ ಹಬ್ಬ. ಸಂತಸದಿಂದಲೇ ಶಾಲೆಗೆ ವಿವಿಧ ತೆರನಾದ ಬಟ್ಟೆಗಳನ್ನು ಧರಿಸಿ, ಆಟೋಟಗಳಲ್ಲಿ ಭಾಗವಹಿಸುವಲ್ಲಿ ತಲ್ಲೀನರಾಗುತ್ತಾರೆ. ಆದರೆ ಇನ್ನೊಂದೆಡೆ ತಮ್ಮ ದಿನಾಚರಣೆಯೆಂದು ಅರಿಯದ ಮಕ್ಕಳು ತಮ್ಮ ಹಾಗೂ ಸಂಸಾರದ ನೊಗ ಹೊರುವುದರಲ್ಲಿ ತಲ್ಲೀನರಾಗಿದ್ದಾರೆ.
ಪ್ರದ್ಯುಮ್ನನ ಕೊಲೆಯಂಥ ಘಟನೆಗಳಿಗೆ ಕೊನೆ ಎಂದು?
ಇಂತಹ ಘಟನೆಗೆ ಸಾಕ್ಷಿಯಾಗಿದ್ದು ಮೈಸೂರಿನ ಜಿಲ್ಲಾಡಳಿತದ ಕಚೇರಿಯ ಸುತ್ತಮುತ್ತವೇ . ಒಂದೆಡೆ ಮಕ್ಕಳ ದಿನದಂದು ಬೆಳಿಗ್ಗೆ ವಿವಿಧ ಶಾಲೆಗಳ ಮಕ್ಕಳು ಜಿಲ್ಲಾಡಳಿತ ಆಯೋಜಿಸಿದ ಸೈಕಲ್ ಜಾಥಾ ದಲ್ಲಿ ಪಾಲ್ಗೊಂಡಿದ್ದು ಕಂಡು ಬಂದರೆ, ಇನ್ನೊಂದೆಡೆ ತಾಯಿಯ ಔಷಧ ಖರ್ಚಿಗಾಗಿ ಹಗ್ಗದ ಮೇಲೆ ನಡೆದಾಡುತ್ತಿರುವ ಪುಟಾಣಿ ಕಾಣ ಸಿಕ್ಕಳು.
ಪ್ರಥಮ ಪ್ರಧಾನಿ ಭಾರತ ರತ್ನ ದಿ.ಜವಾಹರ ಲಾಲ್ ನೆಹರೂರವರ ಜನ್ಮದಿನವನ್ನು ಮಕ್ಕಳದಿನವೆಂದು ಆಚರಿಸಲಾಗುತ್ತಿದೆ. ಯಾಕೆಂದರೆ ನೆಹರೂ ಅವರಿಗೆ ಮಕ್ಕಳೆಂದರೆ ತುಂಬಾ ಇಷ್ಟವಂತೆ. ಅದರಿಂದ ಅವರಿಗೆ ಚಾಚಾ ನೆಹರೂ ಅಂತಲೇ ಕರೆಯಲಾಗುತ್ತಿದೆ.
ಅವರ ಜನ್ಮದಿನ ಮಕ್ಕಳ ದಿನಾಚರಣೆ. ನಗರದಲ್ಲಿ ಇಂದು ಸರಿ ಸುಮಾರು ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೂ ಸೈಕಲ್ ಜಾಥಾ, ವಸ್ತು ಪ್ರದರ್ಶನ ಮೈದಾನ, ಮೃಗಾಲಯ ಎಲ್ಲ ಕಡೆಯೂ ಉಚಿತವಾಗಿಯೇ ದರ್ಶನ ಭಾಗ್ಯವಿದೆ. ಚಿಣ್ಣರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಸಂತಸ ಸಂಭ್ರಮಗಳಿಂದ ಮಕ್ಕಳ ದಿನವನ್ನಾಚರಿಸಿಕೊಳ್ಳುತ್ತಿದ್ದಾರೆ.
ಆದರೆ ನಗರದ ಹೃದಯ ಭಾಗದಲ್ಲಿರುವ ಬನುಮಯ್ಯ ಚೌಕದಲ್ಲಿ ಪುಟಾಣಿ ಬಾಲಕಿಯೋರ್ವಳು ತನ್ನ ತಾಯಿಗೆ ಹುಶಾರಿಲ್ಲದ ಕಾರಣ ಔಷಧ ಖರ್ಚು ಹಾಗೂ ಹೊಟ್ಟೆಪಾಡಿಗಾಗಿ ಹಗ್ಗದ ಮೇಲೆ ನಡೆದು ದಾರಿ ಹೋಕರಿಂದ ಹಣ ಸಂಗ್ರಹಿಸುತ್ತಿದ್ದಾಳೆ. ಇನ್ನೂ ಅದೆಷ್ಟು ಮಕ್ಕಳು ಹೊಟ್ಟೆಪಾಡಿಗಾಗಿ ಏನೆಲ್ಲ ಮಾಡುತ್ತಿದ್ದಾರೋ ತಿಳಿದಿಲ್ಲ. ಮಕ್ಕಳ ಕಲ್ಯಾಣ ಇಲಾಖೆ ಇತ್ತ ಗಮನ ಹರಿಸಿ ಮಕ್ಕಳ ಇಂತಹ ಮಕ್ಕಳ ಬಾಳಲ್ಲಿ ಬೆಳಕಿನ ಕಿರಣ ಮೂಡಿಸಲು ಪ್ರಯತ್ನಿಸಬೇಕಿದೆ.