ನಿಂದಿಸಿದ ಮಹಿಳಾ ಪಿಎಸ್ ಐ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು
ಮೈಸೂರು, ಜೂನ್ 6: ಮಗನ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ಟಿ.ನರಸೀಪುರ ಸಬ್ ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್ ವಿರುದ್ಧ ದೂರು ದಾಖಲಾಗಿದೆ.
ಅತ್ಯಾಚಾರ ಆರೋಪ: ಆದಾಯ ತೆರಿಗೆ ಅಧಿಕಾರಿ ವಿರುದ್ಧ ಎಫ್ಐಆರ್
ಮಂಗಳವಾರ ರಾತ್ರಿ, ಯಾಸ್ಮಿನ್ ತಾಜ್ ಹಾಗೂ ಅವರ ಮಗ ಸ್ಕೂಟರ್ ನಲ್ಲಿ ಬರುತ್ತಿದ್ದು, ವಾಹನ ಚಾಲನೆ ಸಂದರ್ಭ, ಪರಮೇಶ್ ಎಂಬುವವರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಸಮಯದಲ್ಲಿ ಯಾಸ್ಮಿನ್, ಪರಮೇಶ್ ಅವರದ್ದೇ ತಪ್ಪು ಎಂಬುವಂತೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರಲ್ಲದೇ ಅವರ ಮೇಲೆ ಹಲ್ಲೆ ಮಾಡಿ, ತಮಗೆ ಅಧಿಕಾರಿಗಳು ಗೊತ್ತು ಎಂದು ಧಮ್ಕಿ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಕುರಿತು ಪರಮೇಶ್ ಸಿದ್ದಾರ್ಥ ಟ್ರಾಫಿಕ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಯಾಸ್ಮಿನ್ ತಾಜ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಪರಮೇಶ್ ದೂರು ದಾಖಲಿಸುತ್ತಿದ್ದಂತೆ ಯಾಸ್ಮಿನ್ ತಾಜ್ ಅವರಿಂದಲೂ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ. ಸ್ನೇಹಿತನ ಸೂಟ್ಕರ್ ನಲ್ಲಿ ಮಗನನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಗಾಯತ್ರಿಪುರಂ ಚರ್ಚ್ ಬಳಿ ಎದುರಿನಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಪರಮೇಶ ಅವರು ನಮ್ಮ ಸ್ಕೂಟರ್ ಗೆ ಡಿಕ್ಕಿ ಹೊಡೆದರು. ಪರಿಣಾಮ, ನಾನು ಮತ್ತು ಮಗ ರಸ್ತೆ ಮೇಲೆ ಬಿದ್ದು, ಮಗನಿಗೆ ಪೆಟ್ಟಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಯಿತು. ಅಪಘಾತ ಮಾಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಪರಮೇಶ ಅವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದರು ಎಂದು ಯಾಸ್ಮಿನ್ ತಾಜ್ ಅವರು ಪ್ರತಿ ದೂರಿನಲ್ಲಿ ಆರೋಪಿಸಿದ್ದಾರೆ.