ಆಸ್ಪತ್ರೆಯಿಂದ ಕಳುಹಿಸಿದ್ರು..ಆಂಬ್ಯುಲೆನ್ಸ್ ನಲ್ಲೇ ಮಗುವಾಯ್ತು
ಮೈಸೂರು, ನವೆಂಬರ್, 23 : ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ತೆರಳುವಾಗಲೇ ಗರ್ಭಿಣಿಯರಿಗೆ ಹೆರಿಗೆಯಾಗುವ ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗುತ್ತಿವೆ. ಗರ್ಭಿಣಿಯರ ನಿರ್ಲಕ್ಷ್ಯ ಭಾವವೇ ಈ ರೀತಿಯ ಘಟನೆಗಳಿಗೆ ಕಾರಣವಾಗಿದ್ದು, ಆಂಬುಲೆನ್ಸ್ ನಲ್ಲೇ ಮಗು ಜನಿಸಿದ ಮತ್ತೊಂದು ಘಟನೆ ವರದಿಯಾಗಿದೆ.
ಹೆಚ್.ಡಿ.ಕೋಟೆಯ ಕಾರಾಪುರ ಹಾಡಿಯ ನಿವಾಸಿ ಯೋಗೀಶ್ ಅವರ ಪತ್ನಿ ಚಾರುಲತಾ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಹೋಗುವಾಗ ಈ ಘಟನೆ ನಡೆದಿದೆ.[ಟಿವಿಎಸ್ ಮೇಲೆ ತೊಟ್ಟಿಲಲ್ಲಿ ಕಂದಮ್ಮಗಳ ಪಯಣ!]
ಗರ್ಭಿಣಿಯಾಗಿದ್ದ ಚಾರುಲತಾ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಂಡು ಬಂದು, ತಿಂಗಳು ತುಂಬಿ ನೋವು ಕಾಣಿಸಿಕೊಂಡ ಮೇಲೆ ಆಸ್ಪತ್ರೆಗೆ ಹೋದರಾಯಿತು ಎಂದು ಸುಮ್ಮನಾಗಿದ್ದರು. ಈ ನಡುವೆ ಹೆಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದರು. ಆದರೆ ಸ್ಥಳೀಯ ವೈದ್ಯರು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ.[ಎಚ್ಡಿ ಕೋಟೆ ಬಳಿ ಮಹಿಳೆ ಮೇಲೆ ಎರಗಿದ ಕರಡಿ]
ವೈದ್ಯರ ಸಲಹೆಯ ಮೇರೆಗೆ 108 ಆಂಬ್ಯುಲೆನ್ಸ್ ನಲ್ಲಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ತೆರಳುವಾಗ ಹೆರಿಗೆ ನೋವು ಹೆಚ್ಚಾಗಿದೆ. ಆಗ ಅಂಬ್ಯುಲೆನ್ಸ್ ನಲ್ಲಿದ್ದ ಶುಶ್ರೂಷಕ ಆರ್.ಸುರೇಶ್ ಮತ್ತು ಚಾಲಕ ಶಿವಕುಮಾರ್ ಅವರುಗಳೇ ಸುಸೂತ್ರವಾಗಿ ಹೆರಿಗೆ ಮಾಡಿಸಿ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ. ಇಷ್ಟಕ್ಕೂ ಚಾರುಲತಾಳಿಗೆ ಮೈಸೂರಿಗೆ ಹೋಗಿ ಎಂದಿರುವ ಹೆಚ್.ಡಿ.ಕೋಟೆ ಆಸ್ಪತ್ರೆ ವೈದ್ಯರ ನಡೆ ಮಾತ್ರ ಪ್ರಶ್ನಾರ್ಥಕವಾಗಿದೆ.