ಮೈಸೂರಿನಲ್ಲಿ ಮುಸ್ಲಿಂ ಮನೆಗೆ ಬಂದ ವರಮಹಾಲಕ್ಷ್ಮಿ!
ಮೈಸೂರು, ಆಗಸ್ಟ್ 4: ಕೋಮುಸೌಹಾರ್ದವನ್ನು ಪ್ರತಿನಿಧಿಸುವ, ಸಹಬಾಳ್ವೆಯನ್ನು ಸಂಕೇತಿಸುವ ಸನ್ನಿವೇಶವೊಂದು ವರಮಹಾಲಕ್ಷ್ಮಿ ಹಬ್ಬದಂದು ಮೈಸೂರಿನಲ್ಲಿ ಸೃಷ್ಟಿಯಾಗಿತ್ತು. ಲಕ್ಷ್ಮೀ ದೇವಿ ಹಿಂದುಗಳ ಪಾಲಿಗೆ ವರವ ನೀಡುವ ಮಹಾಮಾತೆ.
ಹಿಂದುಗಳು ವರಮಹಾಲಕ್ಷ್ಮಿಹಬ್ಬ ಆಚರಿಸುವುದು ಸಂಪ್ರದಾಯ, ಆದರೆ ಇದೇ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸಿದರೆ ಅದು ಖಂಡಿತ ಅಚ್ಚರಿ. ಮೈಸೂರಿನ ಹೆಗ್ಗಡದೇವನಕೋಟೆ ರಸ್ತೆಯಲ್ಲಿರುವ ಕೋಟೆ ಹುಂಡಿಯಲ್ಲಿನ ಮುಸ್ಲಿಂ ಮನೆಯೊಂದರಲ್ಲಿ ಶ್ರಾವಣ ಮಾಸದ ಎರಡನೇ ಶುಕ್ರವಾರದ ದಿನ ಪತಿ ಪತ್ನಿ ಇಬ್ಬರೂ ಸೇರಿ ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ.
ಶಾಸ್ತ್ರಬದ್ಧವಾಗಿ ವರಮಹಾಲಕ್ಷ್ಮಿ ವ್ರತ ಆಚರಿಸುವುದು ಹೀಗೆ...
ಜಾಕೀರ್ ಹುಸೇನ್ ಹಾಗೂ ಆತನ ಪತ್ನಿ ಮಮತಾ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಊರಿನಲ್ಲಿನ ಮುತ್ತೈದೆಯರನ್ನು ಕರೆದು ಅರಿಶಿನ, ಕುಂಕುಮ ಫಲ ತಾಂಬೂಲಗಳನ್ನು ನೀಡಿದರು.
ಒಟ್ಟಿನಲ್ಲಿ ಮುಸ್ಲಿಂ ಸಮುದಾಯದವರೋರ್ವರ ಮನೆಯಲ್ಲಿಯೂ ಹಿಂದೂಗಳ ಹಬ್ಬದ ಆಚರಣೆಯಾಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯ ಸಂದೇಶ ನೀಡಿರುವುದು ಶ್ಲಾಘನೀಯ ಇತ್ತ ಮೈಸೂರಿನ ಚಿಕ್ಕವಕ್ಕಲಗೇರಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶುಕ್ರವಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮೀಯರು ಒಟ್ಟುಗೂಡಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು.
ದೇವಾಲಯದ ಆವರಣದಲ್ಲಿ ಸೇರಿದ ಮೂರೂ ಧರ್ಮೀಯರು ದೇವಾಲಯದಲ್ಲಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ತನ್ಮೂಲಕ ಸರ್ವಧರ್ಮ ಏಕತೆಯ ಸಂದೇಶ ಸಾರಿದರು.
ಒಗ್ಗಟ್ಟಿನಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ:
ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮಹಿಳೆಯರು ತಮ್ಮದಲ್ಲದ ಆಚರಣೆಯಲ್ಲಿ ಭಾಗವಹಿಸಿ ವಿಶೇಷ ಅನುಭವ ಪಡೆದರು. ವಿಶೇಷ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯದಲ್ಲಿ ಎಲ್ಲರಿಗೂ ಒಟ್ಟಾಗಿ ಪಾಲ್ಗೊಂಡಿದ್ದರಿಂದ ದೇವಾಲಯದ ಆವರಣದಲ್ಲಿ ವಿಶೇಷ ವಾತಾವರಣ ಸೃಷ್ಟಿಯಾಗಿತ್ತು.
ಧೌರ್ಮಿಕ ಸೌಹಾರ್ದತೆ
ಜನರಲ್ಲಿ ಧೌರ್ಮಿಕ ಸೌಹಾರ್ದತೆ, ಏಕತೆಯ ಭಾವನೆ ಮೂಡಿಸುವ ವತಿಯಿಂದ ಚಾಮರಾಜ ಕ್ಷೇತ್ರದ ಚಿಕ್ಕವಕ್ಕಲಗೇರಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವಸ್ಥಾನದ ಸಮಿತಿ ಹಾಗೂ ಜೆಡಿಎಸ್ ನಗರ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
500 ಮಹಿಳೆಯರಿಗೆ ಸೀರೆ
ಕಾರ್ಯಕ್ರಮದಲ್ಲಿ ಜೆಡಿಎಸ್ ನಗರಾಧ್ಯಕ್ಷ ಕೆ.ಹರೀಶ್ ಗೌಡ ಉಚಿತವಾಗಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಸುಮಾರು 500 ಮಹಿಳೆಯರಿಗೆ ಸೀರೆ, ಅರಿಶಿನ ಕುಂಕುಮ, ಬಳೆ , ಹೂ ಹಣ್ಣು ವಿತರಿಸಿದರು.
ಕೋಮುಸೌಹಾರ್ದಕ್ಕೆ ನಾಂದಿ
"ಬದಲಾದ ಯಾಂತ್ರಿಕ ಜಗತ್ತಿನಲ್ಲಿ ಸಮಾಜದಲ್ಲಿ ಜನರಲ್ಲಿ ಪರಸ್ಪರ ವೈರುಧ್ಯದ ಭಾವನೆಗಳು ಹೆಚ್ಚಾಗುತ್ತಿವೆ. ಕೋಮುವಾದಿ ಭಾವನೆಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಪರಿಹಾರವಾಗಿ ಜನರ ನಡುವೆ ಸಾಮರಸ್ಯ, ಏಕತೆ, ಸೌಹಾರ್ದತೆ ಭಾವನೆ ಮೂಡಿಸುವ ಸಲುವಾಗಿ ಸರ್ವ ಧರ್ಮದವರನ್ನು ಸೇರಿಸಿ ವರಲಕ್ಷ್ಮಿ ಹಬ್ಬ ಆಚರಿಸಲಾಗಿದೆ. ಎಲ್ಲರೂ ಒಟ್ಟಾಗಿ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಇದು ಮಹಿಳೆಯರು ಆಚರಿಸುವ ಮುಖ್ಯವಾದ ಹಬ್ಬವಾಗಿದೆ. ಹಾಗಾಗಿ ಈ ಸಂದರ್ಭದಲ್ಲಿ ಮಹಿಳೆಯರನ್ನು ಗೌರವಿಸಿ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ" ಎಂದು ಈ ಸಂದರ್ಭದಲ್ಲಿ ಕೆ.ಹರೀಶ್ ಗೌಡ ಹೇಳಿದರು.