ಗೊಬ್ಬರ ತೂಕದಲ್ಲಿ ವಂಚಿಸುತ್ತಿದ್ದ ಅಂಗಡಿಯಾತನಿಗೆ ಬಿತ್ತು ಭಾರಿ ಮೊತ್ತದ ದಂಡ
ಮೈಸೂರು, ಮೇ 15: ಮೈಸೂರಿನ ಸಮೀಪದ ಹುಲ್ಲಹಳ್ಳಿ ಗ್ರಾಮದಲ್ಲಿ ರೈತರಿಗೆ ಮಾರಾಟ ಮಾಡುತ್ತಿದ್ದ ರಸಗೊಬ್ಬರ ತೂಕದಲ್ಲಿ ವಂಚಿಸುತ್ತಿದ್ದ ಗ್ರೋಮೋರ್ ಅಗ್ರೋ ಕೇಂದ್ರದ ಮಾಲೀಕನಿಗೆ ದಂಡ ವಿಧಿಸಲಾಗಿದೆ.
ವಂಚನೆ ಮಾಡಿದ ಮಾಲೀಕನಿಗೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು 1.15 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಕಳೆದ ಶನಿವಾರ ರೈತರಿಗೆ ನೀಡಿದ 50 ಕೆಜಿ ತೂಕದ ಗೊಬ್ಬರದ ಮೂಟೆಯನ್ನು ಪುನಃ ಹೊರಗೆ ತೂಗಿದಾಗ ಕೇವಲ 38.40 ಕೆಜಿ ಮಾತ್ರ ಇದ್ದುದು ಕಂಡು ಬಂದಿತ್ತು. ರೈತರು ಆಕ್ರೋಶಗೊಂಡು ಕೃಷಿ ಇಲಾಖೆಗೆ ದೂರು ನೀಡಿದ್ದರು.
ಹೂವು ಬೆಳೆಗಾರರು 25 ಸಾವಿರ ಪರಿಹಾರ ಪಡೆಯುವುದು ಹೇಗೆ?
ನಂತರ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ರಾಜೀವ್ ಹಾಗೂ ಕೃಷಿ ಅಧಿಕಾರಿ ದೀಪಕ್ ಮಳಿಗೆ ಮೇಲೆ ದಾಳಿ ನಡೆಸಿ ರೈತರ ಸಮ್ಮುಖದಲ್ಲಿ ಮಹಜರ್ ನಡೆಸಿ ಸುಮಾರು 150 ಚೀಲ ಪೊಟ್ಯಾಷ್ ಗೊಬ್ಬರವನ್ನು ವಶಕ್ಕೆ ಪಡೆದಿದ್ದರು. ಇದೀಗ ತೂಕದಲ್ಲಿ ವಂಚನೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಾಲೀಕನಿಗೆ 1.15 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಅಲ್ಲದೇ, ಇಲ್ಲಿ ಗೊಬ್ಬರ ಮಾರಾಟ ಮಾಡದಂತೆ ಮತ್ತು ಇದೇ ಅಂಗಡಿ ಮಾಲೀಕನ ಚಾಮರಾಜನಗರ ವೃತ್ತದಲ್ಲಿರುವ ಇನ್ನೊಂದು ಅಂಗಡಿಯಲ್ಲಿಯೂ ಗೊಬ್ಬರ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.