ಮೈಸೂರು: ಗಂಡನನ್ನು ಬಿಟ್ಟು ಬರದಿದ್ದಕ್ಕೆ ಮಹಿಳೆಯನ್ನು ಹತ್ಯೆಗೈದ ಪ್ರಿಯಕರ
ಮೈಸೂರು, ಡಿಸೆಂಬರ್ 9 : ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಹೊಂದಿದ್ದ ಯುವಕನೊಬ್ಬ ಆಕೆಯೊಂದಿಗೆ ಜಗಳ ತೆಗೆದು ಬಳಿಕ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನ ಮಾರುತಿ ಬಡಾವಣೆಯಲ್ಲಿ ಇಂದು (ಶನಿವಾರ) ನಡೆದಿದೆ.
ಹುಣಸೂರು ಪಟ್ಟಣದ ನರಸಿಂಹಸ್ವಾಮಿ ಬಡಾವಣೆ ನಿವಾಸಿ ಮಹಾದೇವ ಎಂಬುವರ ಪುತ್ರ ಪ್ರವೀಣ್ ಎಂಬಾತನೇ ಜ್ಯೋತಿ ಎನ್ನುವ ಗೃಹಿಣಿಯನ್ನು ಹಗ್ಗಬಿಗಿದು ಹತ್ಯೆ ಮಾಡಿದ ಆರೋಪಿ.
ಮಾರುತಿಯ ಬಡಾವಣೆಯಲ್ಲಿ ವಾಸವಾಗಿದ್ದ ಮೂರು ಮಕ್ಕಳ ತಾಯಿ ಜ್ಯೋತಿ ಎಂಬಾಕೆಗೂ ಪ್ರವೀಣ್ ಗೆ ಕಳೆದೊಂದು ವರ್ಷದ ಹಿಂದೆ ಪರಿಚಯವಾಗಿ ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಪತಿಯಿಲ್ಲದ ವೇಳೆ ಪ್ರವೀಣ್ ಜೊತೆಯಲ್ಲಿ ಕಾಲ ಕಳೆಯುತ್ತಿದ್ದ ಜ್ಯೋತಿಗೆ ಮುಂದೊಂದು ಮಗ್ಗುಲ ಮುಳ್ಳಾಗಿ ಪ್ರವೀಣ್ ಚುಚ್ಚುತ್ತಾನೆ ಎಂಬ ಆಲೋಚನೆ ಬಂದಿರಲಿಲ್ಲ.
ಗಂಡನಿಗೆ ಗೊತ್ತಿಲ್ಲದಂತೆ ಡಿಂಗ್ ಡಾಂಗ್ ಆಡುತ್ತಿದ್ದ ಜ್ಯೋತಿ ಗಂಡನನ್ನು ಬಿಟ್ಟು ಬರಲು ಜ್ಯೋತಿಗೆ ಪ್ರವೀಣ್ ಒತ್ತಾಯಿಸುತ್ತಿದ್ದ. ಅಷ್ಟೇ ಅಲ್ಲದೆ ತನ್ನನೊಂದಿಗೆ ಬರುವುಂತೆ ಜ್ಯೋತಿಗೆ ಪ್ರವೀಣ್ ಬಲವಂತ ಮಾಡುತ್ತಿದ್ದ ಎನ್ನಲಾಗಿದೆ.
ಪ್ರವೀಣನ ಉಪಟಳ ಹೆಚ್ಚಾಗುತ್ತಿದ್ದಂತೆಯೇ ಜ್ಯೋತಿ ತಿರುಗಿಬಿದ್ದಿದ್ದಳು. ಆತನ ಮನೆಗೆ ಹೋಗಿ ಎಚ್ಚರಿಕೆ ನೀಡಿ ಬಂದಿದ್ದಳು. ಇದರಿಂದ ಕೋಪಗೊಂಡ ಪ್ರವೀಣ್ ಇಂದು(ಶನಿವಾರ) ಬೆಳಗ್ಗೆ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಆಕೆಯ ಕತ್ತನ್ನು ಹಗ್ಗದಿಂದ ಬಿಗಿದು ಕೊಲೆಗೈದಿದ್ದಾನೆ.
ಬಳಿಕ ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಪ್ರಶಾಂತ್ ಲಾಡ್ಜ್ ನ ಮೇಲಿನ ಮಹಡಿಗೆ ತೆರಳಿ ಅಲ್ಲಿಂದ ತನ್ನ ತಂದೆಗೆ ಫೋನ್ ಮಾಡಿ ಸಾಯುವುದಾಗಿ ಹೇಳಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಹೆತ್ತವರು ಅವನ ಮನವೊಲಿಸಿ ಕೆಳಗೆ ಇಳಿಸಿದ್ದಾರೆ.
ಅಷ್ಟರಲ್ಲೇ ಪೊಲೀಸರಿಗೆ ಮಾಹಿತಿ ಹೋಗಿದ್ದರಿಂದ ಸ್ಥಳಕ್ಕೆ ಡಿವೈಎಸ್ಪಿ ಭಾಸ್ಕರ, ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ, ಪಿಎಸ್ ಐ ಷಣ್ಮುಗಂ ಮತ್ತು ಸಿಬ್ಬಂದಿ ತೆರಳಿ ಆತನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.