ಎಚ್ಡಿ ಕೋಟೆಯ ಕಳಾಹೀನ ಶಾಲೆಗೆ ಹೊಸ ಮೆರಗು ಕಲ್ಪಿಸಿದ ಎನ್ಜಿಒ ಸಂಸ್ಥೆ
ಮೈಸೂರು, ಮೇ 26: ಸಾಮಾನ್ಯವಾಗಿ ಸರ್ಕಾರಿ ಶಾಲೆಗಳೆಂದರೆ, ಕಳಾಹೀನ ಗೋಡೆಗಳು, ಸೋರುವ ಛಾವಣಿ, ಮೂಲ ಸೌಲಭ್ಯವಿಲ್ಲದ ಕೊಠಡಿಗಳು ಹೀಗೆ ಅಭಿವೃದ್ಧಿ ವಂಚಿತ ಶಾಲೆಗಳ ಚಿತ್ರಣ ನಮ್ಮ ಮುಂದೆ ಹಾದು ಹೋಗಿ ಬಿಡುತ್ತದೆ.
ಬಹುಶಃ ಯಾರಾದರೂ ಎಚ್. ಡಿ. ಕೋಟೆ ತಾಲ್ಲೂಕಿನ ಜಿ.ಜಿ. (ಗೆಂಡೇಗೌಡರ) ಕಾಲೋನಿ ಗ್ರಾಮಕ್ಕೆ ಭೇಟಿ ನೀಡಿದರೆ ದೂರದಿಂದಲೇ ಆಕರ್ಷಕವಾಗಿ ಕಾಣುವ ಇಲ್ಲಿನ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಕಟ್ಟಡವನ್ನು ನೋಡಿದರೆ ಒಂದು ಕ್ಷಣ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದಂತು ಖಚಿತ. ಏಕೆಂದರೆ ಈ ಶಾಲೆಯ ನೋಟ ಅಷ್ಟೊಂದು ಸುಂದರವಾಗಿದೆ.
ಶತಮಾನ ಪೂರೈಸಿದ ಸರ್ಕಾರಿ ಶಾಲೆ; ಸೀಟುಗಳಿಗೆ ಭಾರೀ ಬೇಡಿಕೆ
ಕಲಾತ್ಮಕ ಬಣ್ಣಗಳಿಂದ ಅಲಂಕಾರ
ಶಾಲಾ ಕಾಂಪೌಂಡ್ನಿಂದ ಆರಂಭವಾಗಿ ಶಾಲಾ ಹೊರಗೋಡೆ ಒಳಗಿನ ಕೊಠಡಿ ಹೀಗೆ ಎಲ್ಲವೂ ಸುಂದರ ಕಲಾತ್ಮಕ ಬಣ್ಣ ಮತ್ತು ಚಿತ್ರಗಳಿಂದ ಕೂಡಿ ನೋಡುಗರನ್ನು ಆಕರ್ಷಿಸುವುದಲ್ಲದೆ, ಇಲ್ಲಿ ಬಿಡಿಸಲಾದ ಚಿತ್ರಗಳು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತದೆ. ಕುಗ್ರಾಮದ ಸರ್ಕಾರಿ ಶಾಲೆಯೊಂದು ಈ ಮಟ್ಟಿಗೆ ಅಭಿವೃದ್ಧಿ ಆಗಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಈ ಶಾಲೆಯನ್ನು ಹತ್ತಿರದಿಂದ ನೋಡುವ ಪ್ರತಿಯೊಬ್ಬರಲ್ಲೂ ಮೂಡುವುದು ಸಹಜ. ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ ಉಷ್ಕ್ರತಿ ಸೇವಾಸಂಸ್ಥೆಯ ಶ್ರಮವಿರುವುದು ಗೋಚರಿಸುತ್ತದೆ.
ಕಳೆ ತಂದುಕೊಟ್ಟ 'ಉಪ್ಕೃತಿ'
ಉಪ್ಕ್ರತಿ ಸೇವಾ ಸಂಸ್ಥೆಯು ತನ್ನದೇ ಆದ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈಗಾಗೆಲೆ ಹಲವಾರು ಕಡೆ ಹತ್ತಾರು ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ನವೀಕರಣ, ಶೌಚಾಲಯ ನಿರ್ಮಾಣ ಸೇರಿದಂತೆ ಹಲವಾರು ಕೆಲಸವನ್ನು ಮಾಡಿದೆ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಸ್ವಯಂ ಸೇವಕರು ಸೇರಿಕೊಂಡು ಯಾವುದೇ ಫಲಾಪೇಕ್ಷೆಯಿಲ್ಲದೆ, ವಾರಾಂತ್ಯದ ಒಂದು ದಿನ ಏನಾದರೊಂದು ಸಾಮಾಜಿಕ ಚಟುವಟಿಕೆ ನಡೆಸುತ್ತಿದ್ದು. ಅವರ ಈ ಶ್ರಮವೇ ಜಿ.ಜಿ ಕಾಲೋನಿ ಗ್ರಾಮದ ಸರ್ಕಾರಿ ಶಾಲೆಗೆ ಕಳೆಕಟ್ಟಿದೆ ಎಂದರೆ ತಪ್ಪಾಗಲಾರದು.
ಚಂದನ್ ನೇತೃತ್ವದ ಉಪ್ಕ್ರತಿಯ ಸ್ವಯಂ ಸೇವಕರ ತಂಡದಲ್ಲಿ ವೃತ್ತಿಪರ ಕಲಾವಿದರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಆರ್ಜೆ, ಸಾಫ್ಟ್ವೇರ್ ಉದ್ಯೋಗಿಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಇದ್ದು, ಇವರೆಲ್ಲರೂ ಸೇರಿ ವಾರಕ್ಕೊಮ್ಮೆ ತಮ್ಮ ಆಮೂಲ್ಯ ಸಮಯವನ್ನು ಸಾಮಾಜಿಕ ಚಟುವಟಿಕೆಗೆ ಮೀಸಲಿಟ್ಟು ಕೆಲಸ ಮಾಡುತ್ತಿದ್ದಾರೆ.
ಜಾಗೃತಿ ಮೂಡಿಸುವ ಚಿತ್ರಕಲೆ
ಸಂಸ್ಥೆ ಈಗಾಗಲೇ ಹಲವು ರೀತಿಯ ಸಮಾಜಮುಖಿ ಕೆಲಸಗಳನ್ನು ಮಾಡಿದ್ದು ಅದರಲ್ಲಿ ಜಿ.ಜಿ ಕಾಲೋನಿ ಗ್ರಾಮದ ಸರ್ಕಾರಿ ಶಾಲೆಗೆ ಬಣ್ಣ ಬಳಿದು ಗೋಡೆಯ ಮೇಲೆ ಚಿತ್ರಕಲೆಗಳನ್ನು ರಚಿಸಿ ಮೆರಗು ನೀಡಿರುವುದು ಒಂದು ಸಾಧನೆಯಾಗಿದೆ. ಸುಮಾರು 25 ಸ್ವಯಂಸೇವಕರ ತಂಡ ಕಾರ್ಯನಿರ್ವಹಿಸಿದ್ದು, ಕಳಾಹೀನವಾಗಿದ್ದ ಶಾಲೆಗೆ ಬಣ್ಣ ಬಳಿದು ಗೋಡೆಯ ಮೇಲೆ ಚಿತ್ರಕಲೆಗಳನ್ನ ರಚಿಸಿ ಹೊಸತನ ತುಂಬಿದ್ದಾರೆ.
ಶಾಲಾ ಗೋಡೆಗಳ ಮೇಲೆ ವಾಟರ್ ಪ್ರೂಫ್ ಪೇಂಟಿಂಗ್, ನಲಿಕಲಿ ತರಗತಿಗೆ ಬಣ್ಣ ಹಚ್ಚಿ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಸಂದೇಶಗಳು ಮತ್ತು ಕಾರ್ಟೂನ್ ಚಿತ್ರಕಲೆಗಳನ್ನು ಕೊಠಡಿಗಳ ಗೋಡೆಗಳ ಮೇಲೆ ರಚಿಸಲಾಗಿದೆ. ಇದಕ್ಕೂ ಕಾರಣವಿದೆ. ಈ ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿರುವುದರಿಂದ, ಆ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಸಂಬಂಧಿತ ಚಿತ್ರಕಲೆಗಳನ್ನು ಬಿಡಿಸುವ ಮೂಲಕ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಡಿಜಿಟಲ್ ಕ್ಲಾಸ್ ರೂಮ್ ವ್ಯವಸ್ಥೆಗೆ ಚಿಂತನೆ
ಇಷ್ಟೇ ಅಲ್ಲದೆ ಈ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಸಲುವಾಗಿ ಡಿಜಿಟಲ್ ಕ್ಲಾಸ್ ರೂಮ್, ಲ್ಯಾಬ್ ಸೆಟಪ್ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಇನ್ನು ಎಸ್ಡಿಎಂ ಸಮಿತಿ ಮತ್ತು ಬಾಲಸುಬ್ರಹ್ಮಣ್ಯನ್ ಕುಟುಂಬದ ಸಹಕಾರದಲ್ಲಿ ಶ್ರಮದಾನ ಕಾರ್ಯಕ್ರಮ ನಡೆದಿರುವುದನ್ನು ನಾವು ಕಾಣಬಹುದಾಗಿದೆ.
ಈ ಸಾಮಾಜಿಕ ಕಾರ್ಯದಲ್ಲಿ ಎನ್ಜಿಒ ಮುಖ್ಯಸ್ಥ ಚಂದನ್, ಸ್ವಯಂಸೇವಕರಾದ ಮಾನಸ, ದರ್ಶನ್, ವಿಕೇಶ್, ಪ್ರಕೃತಿ, ಕಿರಣ್, ಅಮೃತ, ಶಶಾಂಕ್, ವರ್ಷ, ಶರಣ್ಯ, ಅನು, ಪ್ರಾರ್ಥನಾ, ಪ್ರತೀಕ್ಷಾ, ಶಿವಂ, ಮಧುರಾ, ಹರಿಪ್ರಿಯಾ, ಅನನ್ಯಾ, ದೀಪ್ತಿ, ತಸ್ಮಿಯಾ, ಧನುಷಾ, ಸುಹಾಸ್, ಸಿದ್ದೇಶ್, ಸಯೀಮಾ, ಆಶಿಶ್ ಮೊದಲಾದವರು ಭಾಗವಹಿಸಿದ್ದರು.