ಬಸವನನ್ನು ಕಿತ್ತುಕೊಂಡು ಕುಟುಂಬವೊಂದನ್ನು ಬಹಿಷ್ಕಾರ ಹಾಕಿದ ತಗಡೂರು ಗ್ರಾಮಸ್ಥರು!
ಮೈಸೂರು, ಡಿಸೆಂಬರ್ 13: 21ನೇ ಶತಮಾನದಲ್ಲೂ ಬಹಿಷ್ಕಾರದಂಥಹ ಪಿಡುಗು ನಂಜನಗೂಡಿನಲ್ಲಿ ಕಂಡುಬಂದಿದೆ. ಹೌದು, ತಾಲೂಕಿನ ತಗಡೂರಿನಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆಯೊಂದು ನಡೆದಿದೆ.
ಕೂಲಿ ಮಾಡಿ ಬಸವನ ಮುಖಾಂತರ ಭಿಕ್ಷೆ ಎತ್ತಿ ದಿನದೂಡುವ ತಮ್ಮ ಕುಟುಂಬಕ್ಕೆ ತಗಡೂರಿನಲ್ಲಿ ಬಹಿಷ್ಕಾರ ಹಾಕಲಾಗಿದೆ ಎಂದು ಆ ಕುಟುಂಬದ ಮುಖ್ಯಸ್ಥ ಮಹದೇವೇಗೌಡ ಅವರು ತಾಲೂಕು ಆಡಳಿತಕ್ಕೆ ದೂರು ನೀಡಿದ್ದಾರೆ.
ಮೈಸೂರು: ದಲಿತರಿಗೆ ಬಹಿಷ್ಕಾರದ ಅಮಾನವೀಯ ಶಿಕ್ಷೆ
ಈ ಬಹಿಷ್ಕಾರದಿಂದಾಗಿ ತಮ್ಮ ಕುಟುಂಬಕ್ಕೆ ಈಗ ಗ್ರಾಮದ ಸಾರ್ವಜನಿಕ ನಲ್ಲಿಯಲ್ಲಿ ನೀರಿಲ್ಲ. ಗ್ರಾಮದ ಅಂಗಡಿಗಳಲ್ಲಿ ಸಾಮಗ್ರಿಗಳು ದೊರೆಯುತ್ತಿಲ್ಲ. ಯಾರ ಮನೆಗೂ ಹೋಗುವಂತಿಲ್ಲ. ಗ್ರಾಮದ ಯಾರೂ ಅವರ ಮನೆಗೆ ಬರುವಂತಿಲ್ಲ ಎಂದು ಕೂಟದ ತೀರ್ಮಾನ ಪ್ರಕಟವಾಗಿದೆ.
ಈ ಕೂಟದ ಕಟ್ಟಪ್ಪಣೆಯಿಂದಾಗಿ ತಮ್ಮ ಕುಟುಂಬವೀಗ ಪರದಾಡುವಂತಾಗಿದೆ. ಗಾಮದ ಯಾರಾದರೂ ಇವರ ಮನೆಗೆ ಹೋಗುವುದಿರಲಿ, ಇವರನ್ನು ಮಾತನಾಡಿಸಿದರೂ ಅವರಿಗೆ ತಲಾ 100 ರೂ. ದಂಡ ಹಾಕಲಾಗುತ್ತದೆ ಎಂದು ಮಹದೇವೇಗೌಡ ತಿಳಿಸಿದ್ದಾರೆ.
ಇದೆಂಥಾ ದೌರ್ಜನ್ಯ: ಗೀಕಳ್ಳಿಯ ಈ ಕುಟುಂಬಕ್ಕೆ ಕಂಟಕವಾಯ್ತು ಬಹಿಷ್ಕಾರ
ಗ್ರಾಮದ ಸಪ್ತ ದೇವಾಲಯದ ಅರ್ಚಕರು ಹಾಗೂ ಜಾತಿ ಸಮಾಜದ ಮುಖಂಡರು ಎಂದು ಕರೆಸಿಕೊಳ್ಳುವ ಮಹನೀಯರೇ ಈ ಅಮಾನವೀಯ ಕಟ್ಟುಪಾಡನ್ನು ಈ ಕುಟುಂಬದ ಮೇಲೆ ಹೇರಿದ್ದಾರೆ ಎಂದು ಹೇಳಲಾಗಿದೆ. ಈ ಬಡ ಕುಟುಂಬ ಮಾಡಿದೆ ಎನ್ನಲಾದ ಕೃತ್ಯದ ಬಗ್ಗೆ ವಿಚಾರಣೆ ನಡೆಸಿದ ಈ ಕೂಟದ ಮುಖಂಡರು, 10 ಸಾವಿರ ರೂ. ದಂಡ ವಸೂಲಿ ಮಾಡಿಯೂ ಬಹಿಷ್ಕಾರ ಸಡಿಲಿಸಿಲ್ಲ ಎಂದು ಮಹದೇವೇಗೌಡ ನಂಜನಗೂಡು ತಾಲ್ಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
ಮಹದೇವೇಗೌಡರ ಕುಟುಂಬ ನಂಜನಗೂಡಿಗೆ ಬಂದು ತಹಸಿಲ್ದಾರರ ಅನುಪಸ್ಥಿತಿಯಲ್ಲಿ ಉಪತಹಸಿಲ್ದಾರ್ ಬಾಲಸುಬ್ರಮಣ್ಯಂ ಅವರಿಗೆ ಈ ಕುರಿತು ದೂರು ಸಲ್ಲಿಸಿದೆ.
ದೂರು ಹಿಂಪಡೆಯದ ಅತ್ಯಾಚಾರ ಸಂತ್ರಸ್ತೆಗೆ ಬಹಿಷ್ಕಾರದ ಶಿಕ್ಷೆ!
ಬದುಕಿನ ಬಂಡಿ ಸಾಗಿಸುತ್ತಿದ್ದ ಈ ಕುಟುಂಬದ ಬಸವನನ್ನು ಈ ಮುಖಂಡರು ಕಿತ್ತುಕೊಂಡಿದ್ದು, ಅದನ್ನು ವಾಪಸ್ ಕೊಡಿಸಿ ಬಹಿಷ್ಕಾರಕ್ಕೆ ಕೊನೆ ಹಾಕಿಸುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.