ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದ ಮೈಸೂರಿನ ವ್ಯಕ್ತಿ ಬಂಧನ
ಮೈಸೂರು, ಏಪ್ರಿಲ್ 22:ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಹೆಸರು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದ ಮೈಸೂರಿನ ವಿಜಯನಗರ ನಿವಾಸಿ ಸಿ.ಎನ್.ದಿಲೀಪ್ (36) ಎಂಬಾತನನ್ನು ಕೆ.ಆರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಳ್ಳು ಹೇಳಿ ಪೊಲೀಸ್ ಅಧಿಕಾರಿಗಳಿಂದಲೇ ಸೌಲಭ್ಯ ಪಡೆದುಕೊಳ್ಳುತ್ತಿದ್ದ ಈತನ ನಡೆ ಬಗ್ಗೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಯಾವುದೇ ಗುರುತಿನ ಚೀಟಿಯಾಗಲಿ, ಸಂಬಂಧಿತ ದಾಖಲೆಗಳಾಗಲಿ ಈ ವ್ಯಕ್ತಿಯ ಬಳಿ ಇರಲಿಲ್ಲ.
ಮಹಿಳೆಯಿಂದ ಒಡವೆ ದೋಚಿ, ಸುಳ್ಳು ಆರೋಪವನ್ನೂ ಹೊರಿಸಿದ ನಕಲಿ ಪೊಲೀಸರು
ಪ್ರಕರಣದ ವಿವರ
ಕೆ.ಆರ್. ಠಾಣೆಯ ಇನ್ಸ್ಪೆಕ್ಟರ್ ವಿ.ನಾರಾಯಣಸ್ವಾಮಿ ಅವರಿಗೆ ತಾನು ಐಪಿಎಸ್ ಪ್ರೊಬೇಷನರಿ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ್ದಾನೆ.ತಾನು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಎಂದು ಹೇಳಿ ಏಪ್ರಿಲ್ 19ಕ್ಕೆ ಕಾರು ವ್ಯವಸ್ಥೆ ಮಾಡಿ ವಿಜಯನಗರ 3ನೇ ಹಂತದ ತಮ್ಮ ಮನೆಗೆ ಕಳುಹಿಸಿ ಎಂದು ದರ್ಪದಲ್ಲೇ ಕೇಳಿದ್ದ.
ತದ ನಂತರವೂ ಮತ್ತೆ ಮತ್ತೆ ಫೋನ್ ಮಾಡಿ ಗಾಡಿ ಅರೇಂಜ್ ಆಯ್ತಾ, ಆಗಿದ್ದರೆ ಕಾರಿನ ನಂಬರ್, ಡ್ರೈವರ್, ಮೊಬೈಲ್ ನಂಬರ್ ಅಪ್ ಡೇಟ್ ಮಾಡಿ ಎಂದು ಪೊಲೀಸ್ ಅಧಿಕಾರಿ ಶೈಲಿಯಲ್ಲೇ ಹೇಳುತ್ತಿದ್ದ. ಮತ್ತೆ ಏಪ್ರಿಲ್ 18ರಂದು ಗಾಡಿ ಬರುತ್ತೋ ಇಲ್ವೋ ಹೇಳ್ರೀ. ಬಾಡಿಗೆ ಮತ್ತು ಡ್ರೈವರ್ ಬ್ಯಾಟಾನೂ ನೀವೇ ವ್ಯವಸ್ಥೆ ಮಾಡಿ ಎಂದು ದಿಲೀಪ್ ದರ್ಪದಿಂದಲೇ ಹೇಳಿದ್ದಾನೆ.
ಪೊಲೀಸ್ ವೇಷ ಧರಿಸಿ ಪೊಲೀಸರನ್ನೇ ಯಾಮಾರಿಸಲು ಮುಂದಾದ ಚಾಲಾಕಿ ಕಳ್ಳ
ಚುನಾವಣಾ ಕರ್ತವ್ಯದಲ್ಲಿದ್ದ ಇನ್ಸ್ ಪೆಕ್ಟರ್ ಗೆ ಆತನ ಒತ್ತಡ ಹೆಚ್ಚಾಗಿದ್ದಲ್ಲದೆ, ಆತ ಪದೇ ಪದೇ ಫೋನ್ ಮಾಡುತ್ತಿದ್ದರಿಂದ ಸ್ವಲ್ಪ ಸಂಶಯ ಬಂದಿತ್ತು. ಅದನ್ನು ದೃಢಪಡಿಸಿಕೊಳ್ಳಲು ದಿಲೀಪ್ ಗೆ ಕರೆ ಮಾಡಿ, ಸಾರ್ ಕಾರು ಅರೇಂಜ್ ಆಗಿದೆ. ತಾವು ಯಾವ ವರ್ಷದಲ್ಲಿ ಐಪಿಎಸ್ ಮಾಡಿದ್ದೀರಿ ಮಾಹಿತಿ ನೀಡಿ ಎಂದು ನಯವಾಗಿಯೇ ಕೇಳಿದ್ದರು. 2019ರ ಜನವರಿ 1ರ ಅಧಿಸೂಚನೆಯ ಕ್ರಮ ಸಂಖ್ಯೆ 144ರಲ್ಲಿ 759ನೇ ರಾಂಕ್ ನಲ್ಲಿದೆ ನೋಡಿ ಎಂದು ದಿಲೀಪ್ ಮಾಹಿತಿ ನೀಡಿದ್ದ.
ತಕ್ಷಣ ಮಿನಿಸ್ಟ್ರಿ ಆಫ್ ಹೋಂ ಅಫೇರ್ಸ್ ಅಧಿಸೂಚನೆಯನ್ನು ಇಂಟರ್ ನೆಟ್ ನಿಂದ ಡೌನ್ ಲೋಡ್ ಮಾಡಿದಾಗ ಅದರಲ್ಲಿ 144 ಕ್ರಮ ಸಂಖ್ಯೆಯಲ್ಲಿ ರಾಜಸ್ಥಾನ ಹೋಂ ಟೌನ್ ಕೇರಳ ಕೇಡರ್ ನ ಪದಮ್ ಸಿಂಗ್ 759ನೇ ರಾಂಕ್ ಐಎಎಸ್ ಪ್ರೊಬೇಷನರಿ ಎಂದು ತಿಳಿಯಿತು.
ಆತ ನಕಲಿ ಅಧಿಕಾರಿ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಬಲೆಗೆ ಬೀಳಿಸಲು ಇನ್ಸ್ ಪೆಕ್ಟರ್ ನಾರಾಯಣಸ್ವಾಮಿ ಉಪಾಯ ಮಾಡಿದರು. ತಕ್ಷಣ ಇಬ್ಬರು ಕಾನ್ ಸ್ಟೇಬಲ್ ಗಳನ್ನು ಆತನ ಮನೆ ಬಳಿಗೆ ಕಳುಹಿಸಿ ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಿದಾಗ ಆತ ಬಿಇ ಗ್ರಾಜುಯೇಟ್, ಅಮ್ಮ, ತಂಗಿಯೊಂದಿಗೆ ವಾಸ ಮಾಡುತ್ತಿದ್ದು, ತಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾನೆ ಎಂಬ ವಿಷಯ ತಿಳಿಯಿತು.
ಕಡಬದಲ್ಲಿ ಮಾನಸಿಕ ಅಸ್ವಸ್ಥನ ಮೇಲೆ ಅಮಾನವೀಯ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿ
ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಿದಾಗಲೂ, ಕೇಂದ್ರ ಗೃಹ ಇಲಾಖೆಯ ಅಧಿಸೂಚನೆ ಯನ್ನು ಡೌನ್ಲೋಡ್ ಮಾಡಿಕೊಂಡಿದ್ದ ದಿಲೀಪ್, ಪಿಡಿಎಫ್ ನಲ್ಲಿ ಕ್ರಮ ಸಂಖ್ಯೆ 144ರಲ್ಲಿ ತನ್ನ ಹೆಸರು ಸೇರಿಸಿಕೊಂಡು ಅದೇ ಪ್ರತಿಯನ್ನು ತೋರಿಸಿ ತಾನು ಐಪಿಎಸ್ ಅಧಿಕಾರಿ ಎಂದು ಯಾಮಾರಿಸುತ್ತಿದ್ದ ಎಂಬುದು ತಿಳಿಯಿತು. ಐಪಿಸಿ ಸೆಕ್ಷನ್ 175, 420 ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡ ಕೆ.ಆರ್. ಠಾಣೆ ಇನ್ಸ್ ಪೆಕ್ಟರ್ ವಿ.ನಾರಾಯಣಸ್ವಾಮಿ ಅವರು ದಿಲೀಪ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.