ಕುಡಿಬೇಡ ಎಂದಿದ್ದಕ್ಕೆ ಮದುಮಗನ ಕೊಲೆಗೆ ಯತ್ನಿಸಿದ ಬಾವ
ಮೈಸೂರು, ಜನವರಿ 29: ಮದ್ಯಪಾನ ಮಾಡಬೇಡ ಎಂದು ಹೇಳಿದ್ದೇ ತಪ್ಪಾಯ್ತಾ? ಇದೇ ದ್ವೇಷ ಇಟ್ಟುಕೊಂಡಿದ್ದ ತಂಗಿಯ ಗಂಡ, ನಾಳೆ ಹಸೆಮಣೆಗೆ ಏರಬೇಕಿದ್ದ ಬಾಮೈದನನ್ನು ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿದ್ದಾನೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು ಯರಹಳ್ಳಿಯಲ್ಲಿ ನಾಳೆ ಮದುವೆಯಾಗಬೇಕಿದ್ದ ಮದುಮಗ ಮನು ಮತ್ತು ಅತ್ತೆ ಹೇಮಾವತಿ ಮೇಲೆ ಕೆಂಡಗಣ್ಣ ಎನ್ನುವವನು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವತಿ ಮೇಲೆ ಹಾವೇರಿಯಲ್ಲಿ ಆಸಿಡ್ ದಾಳಿ
ಗಂಭೀರವಾಗಿ ಗಾಯಗೊಂಡ ಮನು ಮತ್ತು ಹೇಮಾವತಿಯನ್ನು ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಸೆಣಸಾಟ ನಡೆಸುತ್ತಿದ್ದಾರೆ. ಮದುಮಗ ಮನೋಜನ ಕುತ್ತಿಗೆ ಸೀಳಿದ್ದು, ಅತ್ತೆಯ ಎರಡು ಕೈಗಳನ್ನು ಸೀಳಿದ ಕೆಂಡಗಣ್ಣನನ್ನು ಅರೆಸ್ಟ್ ಮಾಡಲಾಗಿದೆ.
ಹತ್ತು ವರ್ಷದ ಹಿಂದೆ ಮನು ತನ್ನ ತಂಗಿ ತನುಜಾಳನ್ನು ಕೆಂಡಗಣ್ಣನ ಜೊತೆ ಮದುವೆ ಮಾಡಿಸಿದ್ದನು. ಹತ್ತು ವರ್ಷದಿಂದಲೂ ಕೆಂಡಗಣ್ಣನು ಪತ್ನಿಯ ಬಳಿ ಹಣ ಕೇಳುವುದು, ಎಟಿಎಂ ಕಾರ್ಡ್ ಕಿತ್ತುಕೊಳ್ಳುವುದು ಹೀಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಬಂದಿದ್ದನು.
ಕುಡಿತದ ವ್ಯಸನಿಯಾಗಿದ್ದ ಕೆಂಡಗಣ್ಣ ಪತ್ನಿ ಬಳಿ ಹಣ ಕಿತ್ತುಕೊಂಡು ಮದ್ಯ ಕುಡಿಯುತ್ತಿದ್ದನು. ಹೀಗೆ ಕುಡಿದು ಬಾವ ಹಾಳಾಗುತ್ತಿದ್ದಾನಲ್ಲ ಎಂದು ಮನೋಜ್ ಕುಡಿಯಬೇಡಿ ಎಂದು ಬಾವನಿಗೆ ಹಲವು ಬಾರಿ ಬುದ್ದಿ ಹೇಳಿದ್ದನು. ಈ ಕಾರಣಕ್ಕೆ ಮನೋಜ್ ಮೇಲೆ ದ್ವೇಷ ಇಟ್ಟುಕೊಂಡಿದ್ದ ಕೆಂಡಗಣ್ಣ ಮನುವನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಮದುಮಗ ಮನು ಗಂಭೀರ ಗಾಯಗೊಂಡಿದ್ದರಿಂದ ನಾಳೆ ನಡೆಯಬೇಕಿದ್ದ ಮದುವೆ ಸಮಾರಂಭ ಸ್ಥಗಿತಗೊಂಡಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.