ಕೆಎಸ್ ಒಯು 95 ಸಾವಿರ ವಿದ್ಯಾರ್ಥಿಗಳಿಗೆ ಸಿಗುವುದೇ ಆಂತರಿಕ ಮಾನ್ಯತೆ?
ಮೈಸೂರು, ಜೂನ್ 13 : ಈಗಾಗಲೇ ಮಾನ್ಯತೆ ದೊರಕಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಲ್ಲಿ 2013-14, 2014-15ನೇ ವರ್ಷದಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಆಂತರಿಕ ಮಾನ್ಯತೆ ದೊರಕಿಸಿಕೊಡುವ ಪ್ರಯತ್ನವು ಆರಂಭಗೊಂಡಿದೆ.
ಈಗಾಗಲೇ ಹೊರರಾಜ್ಯಗಳಲ್ಲಿ ವಿವಿ ಅಡಿಯಲ್ಲಿ ಅಧ್ಯಯನ ಕೇಂದ್ರ ಆರಂಭಿಸಿದ್ದು, ಅನುಮತಿಯಿಲ್ಲದೇ ಇದ್ದರೂ ತಾಂತ್ರಿಕ ಕೋರ್ಸ್ ಗಳ ಆರಂಭ ಸೇರಿದಂತೆ ಹಲವು ಕಾನೂನುಗಳ ಉಲ್ಲಂಘನೆಯಾಗಿದ್ದ ಕಾರಣ ವಿ.ವಿ.ಗೆ ವಿಶ್ವವಿದ್ಯಾಲಯ ಯುಜಿಸಿ ಮಾನ್ಯತೆ ರದ್ದುಪಡಿಸಿತ್ತು. ಇದರಿಂದ, ಈ ಸಾಲುಗಳಲ್ಲಿ ತಾಂತ್ರಿಕೇತರ ಕೋರ್ಸ್ ಗಳಿಗೆ ದಾಖಲಾಗಿದ್ದ ಅಂದಾಜು 95 ಸಾವಿರ ವಿದ್ಯಾರ್ಥಿಗಳ ಪದವಿಗೂ ಕುತ್ತು ಬಂದಿತ್ತು.
ಕೆಎಸ್ಓಯು: ನೂತನ ಕುಲಪತಿ ವಿದ್ಯಾಶಂಕರ್ ಅಧಿಕಾರ ಸ್ವೀಕಾರ
ಪದವಿಗೆ ಮಾನ್ಯತೆ ದೊರೆಯದ ಕಾರಣ ಶಿಕ್ಷಣವನ್ನು ಮುಂದುವರೆಸುವುದಕ್ಕಾಗಲೀ, ಉದ್ಯೋಗ ಪಡೆದುಕೊಳ್ಳುವುದಕ್ಕಾಗಲೀ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್ ಒಯು ಹೈಕೋರ್ಟ್ನಲ್ಲಿ 2017ರ ಅ.15ರಂದು ಪ್ರಕರಣ ದಾಖಲಿಸಿತ್ತು. ಈ ವಿದ್ಯಾರ್ಥಿಗಳಿಗೆ ರಾಜ್ಯದೊಳಗೆ ಮಾನ್ಯತೆ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆದರೂ, ಈವರೆಗೂ ಯುಜಿಸಿ ಮಾನ್ಯತೆ ನೀಡಿಲ್ಲ.
ಕರ್ನಾಟಕ ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
ಇದೀಗ ಮೈಸೂರು -ಕೊಡಗು ಸಂಸದರಾದ ಪ್ರತಾಪ್ ಸಿಂಹ ನೇತೃತ್ವದಲ್ಲಿ 10 ಸಂಸದರನ್ನು ಒಳಗೊಂಡ ವಿವಿ ಕುಲಪತಿ ನೇತೃತ್ವದ ನಿಯೋಗ ಮುಂದಿನ ವಾರ ನವದೆಹಲಿಯ ಯುಜಿಸಿಗೆ ಭೇಟಿ ನೀಡಲಿದೆ. ವಿಶ್ವವಿದ್ಯಾಲಯದಿಂದ ನಿಯಮ ಉಲ್ಲಂಘನೆಯಾಗಿದ್ದಕ್ಕೆ ವಿದ್ಯಾರ್ಥಿಗಳಿಗೆ ಬರೆ ಹಾಕುವುದು ಬೇಡ, ಅವರಿಗೆ ಈಗಾಗಲೇ ಅಂಕಪಟ್ಟಿ ನೀಡಲಾಗಿದೆ. ಮಾನ್ಯತೆ ನೀಡಿದಲ್ಲಿ, ಪ್ರಮಾಣಪತ್ರ ವಿತರಣೆ ಮಾಡಲು ಒತ್ತಡ ಹೇರಲಾಗುವುದು ಎನ್ನುತ್ತಾರೆ ಅಧಿಕಾರಿಗಳು. ಹೀಗೆ ಮಾನ್ಯತೆ ಸಿಕ್ಕರೆ 95 ಸಾವಿರ ಅಭ್ಯರ್ಥಿಗಳ ಭವಿಷ್ಯ ಉಜ್ವಲವಾಗಲಿದೆ.