ಜನದಟ್ಟಣೆ ತಪ್ಪಿಸಲು ಮೈಸೂರು ನಗರದ 7 ಕಡೆ ಮಾರುಕಟ್ಟೆ
ಮೈಸೂರು, ಮಾರ್ಚ್ 31: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟುವ ಸಂಬಂಧ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ, ಸಾರ್ವಜನಿಕರ ಹಿತದೃಷ್ಟಿಯಿಂದ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 7 ಮಾರುಕಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರಿಗೆ ಸಮೀಪವಾಗುವಂತೆ ನಗರದ ವಿವಿಧ ಸ್ಥಳಗಳಲ್ಲಿ 7 ಮಾರುಕಟ್ಟೆಗಳನ್ನು ಸ್ಥಾಪಿಸಿ, ಈ ಮೂಲಕ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು ಹಾಗೂ ಇನ್ನಿತರೆ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಅನುಕೂಲ ಮಾಡಲಾಗಿದೆ. ಜನರು ವ್ಯಾಪಾರ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ತೆರೆಯಲಾಗಿರುವ ಮಾರುಕಟ್ಟೆಗಳಲ್ಲಿ ಉಸ್ತುವಾರಿ ಕಾರ್ಯನಿರ್ವಹಿಸಲು ಸಿಬ್ಬಂದಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಪೆಟ್ರೋಲ್ ಬಂಕ್ ಸುಡುತ್ತೇನೆಂದ ಲೇಡಿ ಎಸ್ಐ: ಸೇವೆಯಿಂದ ಬಿಡುಗಡೆ
ಆಹಾರ ಮೇಳ ಮೈದಾನ ಲಲಿತ್ ಮಹಲ್ ಹೋಟೆಲ್ ಪಕ್ಕ, ವಸ್ತುಪ್ರದರ್ಶನ ಮೈದಾನ ಎಂ.ಜಿ.ರಸ್ತೆ, ಬೆಮೆಲ್ ಲಾಸ್ಟ್ ಬಸ್ ಸ್ಟ್ಯಾಂಡ್ ಸಮೀಪ, ದೇವನೂರು 1ನೇ ಹಂತ ಸ್ಟೇಡಿಯಂ ನಿರ್ಮಾ ಮಸೀದಿ ಹತ್ತಿರ, ಚಾಮುಂಡಿ ವಿಹಾರ ಸ್ಟೇಡಿಯಂ ಮೈದಾನ, ವಿಜಯನಗರ 2ನೇ ಹಂತ ಸಂಡೇ ಮಾರುಕಟ್ಟೆ, ಬನ್ನಿಮಂಟಪದ ಮೈದಾನ ಬೆಂಗಳೂರು ರಸ್ತೆ ಹೀಗೆ ಏಳು ಕಡೆಗಳಲ್ಲಿ ರೈತರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಮಾರುಕಟ್ಟೆ ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ವ್ಯಾಪಾರ ಸಾಮಗ್ರಿಗಳನ್ನು ಗುರುತಿಸಿದ ಚೌಕಟ್ಟುಗಳಲ್ಲಿ ಇಟ್ಟು ವ್ಯಾಪಾರ ವಹಿವಾಟು ನಡೆಸಬೇಕು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ವ್ಯಾಪಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.