ನಂಜನಗೂಡಿನಲ್ಲಿ ಅಪಘಾತ; ಶಾಲಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಮಗು ಸಾವು
ಮೈಸೂರು, ಫೆಬ್ರವರಿ ೦8: ಶಾಲಾ ವಾರ್ಷಿಕೋತ್ಸವಕ್ಕೆ ಬೈಕಿನಲ್ಲಿ ಮಾವನೊಂದಿಗೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕಿನ ಮಲ್ಕುಂಡಿ ಸಮೀಪದ ಎಂ.ಕೊಂಗಳ್ಳಿ ಬಳಿ ಶುಕ್ರವಾರ ನಡೆದಿದೆ.
ಮೃತ ಬಾಲಕಿಯನ್ನು ಯಡಹಳ್ಳಿ ಗ್ರಾಮದ ಗಿರೀಶ್ ಎಂಬವರ ಪುತ್ರಿ ಗಾನವಿ (6) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲಕಿಯ ತಾಯಿ ಪುಟ್ಟಿ, ಮಾವ ಮಲ್ಲಹಳ್ಳಿ ಗ್ರಾಮದ ಮಹೇಂದ್ರ, ತಂಗಿ ಪಾವನಿ (4) ಗಾಯಗೊಂಡಿದ್ದಾರೆ.
ಮದ್ದೂರಿನಲ್ಲಿ ಲಾರಿ-ಆಟೋ ಅಪಘಾತ; ಮೂವರು ಸ್ನೇಹಿತರ ಸಾವು
ಬಾಲಕಿ ಗಾನವಿ ಹುಲ್ಲಹಳ್ಳಿಯಲ್ಲಿರುವ ಜ್ಞಾನ ಸಂಜೀವಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಿನ್ನೆ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಿಗದಿಯಾಗಿತ್ತು. ಹುಳ್ಳಹಳ್ಳಿ ಶಾಲೆಗೆ ತೆರಳಲು ಯಡಹಳ್ಳಿ ಗ್ರಾಮದಿಂದ ತಾಯಿ, ತಂಗಿ ಮತ್ತು ಮಾವನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆ ಸಂಭವಿಸಿದೆ.
ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ ಐ ಸುರೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸರಣಿ ಅಪಘಾತದಲ್ಲಿ ಬೈಕ್ ಸವಾರ ಸಾವು: ಮೈಸೂರಿನಲ್ಲಿ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರರೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಬೆಲವತ್ತ ಗ್ರಾಮದ ನಿವಾಸಿ ಪ್ರಜ್ವಲ್ (21) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಮೇಟಗಳ್ಳಿ ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಗೆ ಕಾರೊಂದು ಡಿಕ್ಕಿ ಹೊಡೆದು ನಿಂತಿತ್ತು. ಕಾರಿನ ಹಿಂಬದಿಗೆ ಈ ಬೈಕ್ ಡಿಕ್ಕಿ ಹೊಡೆದಿತ್ತು.
ಕಣ್ಣಿಲ್ಲದ ಪತ್ನಿಗೆ ಕಣ್ಣು ನೀಡಿ, ಕಣ್ಮುಚ್ಚಿದ ಪೊಲೀಸ್ ಪೇದೆ...
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ನೆಲಕ್ಕೆ ಬಿದ್ದಿದ್ದು ಹಿಂದಿನಿಂದ ಬಂದ ಟಿಪ್ಪರ್ ಬೈಕ್ ಸವಾರನ ಮೇಲೆ ಹರಿದಿದೆ. ಸವಾರ ಮತ್ತು ಬೈಕ್ ಅನ್ನು ಟಿಪ್ಪರ್ ಸ್ವಲ್ಪ ದೂರ ಎಳೆದುಕೊಂಡು ಮುಂದಕ್ಕೆ ತಂದಿದ್ದು ಸವಾರ ಸಾವನ್ನಪ್ಪಿದ್ದಾನೆ. ಈ ಕುರಿತು ವಿವಿಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕರನ್ನು ವಿಚಾರಣೆಗೊಳಪಡಿಸಿದ್ದಾರೆ.