ನಾಗರಹೊಳೆ ಕಾಡಿನಿಂದ ನಾಡಿಗೆ ಬಂದ 53 ಆದಿವಾಸಿ ಕುಟುಂಬಗಳು
ಮೈಸೂರು, ಜೂನ್.17 : ಜಿಲ್ಲೆಯ ಅಂಚಿನಲ್ಲಿರುವ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ಹಾಡಿಗಳಲ್ಲಿ ಜೀವಿಸುತ್ತಿದ್ದ 53 ಆದಿವಾಸಿ ಕುಟುಂಬಗಳು ಈಗ ಶಾಶ್ವತವಾಗಿ ತಮ್ಮ ಹುಟ್ಟಿದ ನೆಲೆಯನ್ನು ಬಿಟ್ಟು ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಹಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ.
ರಾಜ್ಯ ಅರಣ್ಯ ಇಲಾಖೆ ಭೂಮಿ, ಬ್ಯಾಂಕ್ ಠೇವಣಿ ಜತೆಗೆ ಈ ಸ್ಥಳಾಂತರ ಪ್ರಕ್ರಿಯೆ ನಡೆಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಎಚ್ ಡಿ ಕೋಟೆಯ ಭೀಮನಹಳ್ಳಿಗೆ ಈ 53 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಅಮಾಯಕ ಆದಿವಾಸಿಯ ಹತ್ಯೆ, ಸೆಲ್ಫಿ ಮತ್ತು ಸಾಮಾಜಿಕ ಮಾಧ್ಯಮ!
ಪ್ರತಿ ಕುಟುಂಬಕ್ಕೆ 3 ಎಕರೆ ಭೂಮಿ, 2 ಲಕ್ಷ ಬ್ಯಾಂಕ್ ಠೇವಣಿ ಹಾಗೂ ತಾತ್ಕಾಲಿಕ ಖರ್ಚಿಗೆ 75 ಸಾವಿರ ರೂಪಾಯಿ ನಗದು ನೀಡಲಾಗಿದೆ. 2 ನೇ ಹಂತದಲ್ಲಿ ಹಡು ಗುಂಡಿ, ತಿತಿಮತಿ ಸಮೀಪದ ಮಜ್ಜಿಗೆಹಳ್ಳ ಹಾಗೂ ಆನೆಕ್ಯಾಂಪ್ ಹಾಡಿಯ 70 ಕುಟುಂಬಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು.
ಎಲ್ಲಾ ಇಲಾಖೆಗಳು ಹೀಗೆ ಸ್ಥಳಾಂತರಗೊಂಡವರಿಗೆ ನಾನಾ ಸೌಲಭ್ಯಗಳನ್ನು ಒದಗಿಸಲಿವೆ. ಸುಮಾರು 10 ಲಾರಿಗಳಲ್ಲಿ ಈ ಆದಿವಾಸಿಗಳ ಮನೆ ಸಾಮಾಗ್ರಿಗಳನ್ನು ಭೀಮನಹಳ್ಳಿಗೆ ಸ್ಥಳಾಂತರಿಲಾಗಿದೆ.
ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾನವ-ಕಾಡು ಪ್ರಾಣಿ ಸಂಘರ್ಷವನ್ನು ತಪ್ಪಿಸುವ ಸಲುವಾಗಿ ಹಾಡಿಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಸ್ವಯಂ ಪ್ರೇರಿತ ಸ್ಥಳಾಂತರ ಯೋಜನೆಯನ್ನು ಅರಣ್ಯ ಇಲಾಖೆ ಜಾರಿಗೊಳಿಸಿದೆ.
ಈ ಯೋಜನೆಯ ಪ್ರಕಾರ ಕಾಡು ತೊರೆಯುವ ಆದಿವಾಸಿಗಳಿಗೆ ಮನೆ ಹಾಗೂ ಜಮೀನನ್ನು ಅರಣ್ಯ ಇಲಾಖೆ ಕಾಡಿನ ಹೊರಗೆ ನೀಡುತ್ತದೆ.