ಮೈಸೂರು ವಿಶೇಷ; ಪಂಚ ರಾಜ್ಯಗಳ ಚುನಾವಣೆ; ಮೈಲಾಕ್ನಿಂದ ಶಾಯಿ ಪೂರೈಕೆ
ಮೈಸೂರು, ಜನವರಿ 12; ಕೇಂದ್ರ ಚುನಾವಣಾ ಆಯೋಗ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆ ಮಾಡಿದೆ. ಇತ್ತ ಮೈಸೂರಿನ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್) ಯಲ್ಲಿ ಅಳಿಸಲಾಗದ ಶಾಯಿ ತಯಾರಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ದೇಶದಲ್ಲಿ ಎಲ್ಲಿಯೇ ಚುನಾವಣೆ ನಡೆಯಲಿ ಒಂದು ವೇಳೆ ವಿದೇಶಗಳಲ್ಲಿ ನಡೆದರೂ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್)ಗೆ ಬಿಡುವಿಲ್ಲದ ಕೆಲಸವಂತು ಇದ್ದೇ ಇರುತ್ತದೆ. ಏಕೆಂದರೆ ಇಲ್ಲಿನ ಶಾಯಿಗೆ ಎಲ್ಲೆಡೆಯಿಂದಲೂ ಬೇಡಿಕೆ ಬರುತ್ತದೆ. ಉತ್ತರ ಭಾರತದ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯು ಫೆ.10ರಿಂದ ಏಳು ಹಂತಗಳಲ್ಲಿ ನಡೆಯಲಿರುವುದರಿಂದ ಈ ಚುನಾವಣೆಗೆ ಬೇಕಾದ ಶಾಯಿಯನ್ನು ಪೂರೈಸುವ ಜವಾಬ್ದಾರಿ ಮೈಲ್ಯಾಕ್ ನದ್ದಾಗಿದೆ.
ಗೋವಾ ಚುನಾವಣೆ; ಟಿಎಂಸಿ ಜೊತೆ ಮೈತ್ರಿ ಇಲ್ಲ ಎಂದ ಕಾಂಗ್ರೆಸ್!
ಹಿಂದೆ ಚುನಾವಣೆಗೆ ಶಾಯಿಯನ್ನು ಹಾಕಲಾಗುತ್ತಿತ್ತು. ಆದರೆ ಈಗ ಮಾರ್ಕರ್ ಪೆನ್ ಗಳ ಮೂಲಕ ಶಾಯಿಯನ್ನು ಬೆರಳುಗಳಿಗೆ ಹಾಕಲಾಗುತ್ತಿದೆ. ಹೀಗಾಗಿ ಐದು ರಾಜ್ಯಗಳಿಗೆ 5 ಲಕ್ಷ ಇಂಕು ಬಾಟಲಿ ಮತ್ತು ಮಾರ್ಕರ್ ಪೆನ್ ಗಳನ್ನು ಕಳುಹಿಸಿಕೊಡಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ
ಕೇಂದ್ರ ಚುನಾವಣಾ ಆಯೋಗ ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ, ಗೋವಾ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಐದು ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಪಂಜಾಬ್ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ
ನವೆಂಬರ್ ತಿಂಗಳಿನಲ್ಲಿಯೇ ಬೇಡಿಕೆ
ಈ ಕುರಿತಂತೆ ಮಾಹಿತಿ ನೀಡಿರುವ ಮೈಲ್ಯಾಕ್ ಅಧ್ಯಕ್ಷ ಎಂ.ಫಣೀಶ್, "ನಮಗೆ ನವೆಂಬರ್ ತಿಂಗಳಲ್ಲಿಯೇ ಐದು ರಾಜ್ಯಗಳ ಚುನಾವಣೆ ಆಯೋಗದಿಂದ ಇಂಕ್ ಬಾಟಲ್ಗಳಿಗೆ ಬೇಡಿಕೆ ಬಂದಿತ್ತು. ಅದರಂತೆ ಉತ್ತರ ಪ್ರದೇಶಕ್ಕೆ 10 ಸಿಸಿಯ 4 ಲಕ್ಷ ಬಾಟಲ್, ಪಂಜಾಬ್ಗೆ 62 ಸಾವಿರ ಬಾಟಲ್, ಗೋವಾಗೆ 5 ಸಾವಿರ ಬಾಟಲ್, ಮಣಿಪುರಕ್ಕೆ 7,400 ಬಾಟಲ್, ಮತ್ತು ಉತ್ತರಾಖಂಡದಿಂದ 30 ಸಾವಿರ ಬಾಟಲ್ಗಳಿಗೆ ಬೇಡಿಕೆ ಬಂದಿತ್ತು ಇನ್ನು ಪಂಜಾಬ್, ಗೋವಾ, ಮಣಿಪುರ, ಹಾಗೂ ಉತ್ತರಾಖಂಡಗಳಿಗೆ ಅವರು ಕೇಳಿದಷ್ಟು ಇಂಕ್ ಬಾಟಲ್ ಸರಬರಾಜು ಮಾಡಲಾಗಿದೆ" ಎಂದು ಹೇಳಿದ್ದಾರೆ.
ಇಂಕ್ ಬಾಟಲ್ ಬದಲಿಗೆ ಮಾರ್ಕರ್ ಪೆನ್
"ಉತ್ತರ ಪ್ರದೇಶ ದೊಡ್ಡ ರಾಜ್ಯವಾಗಿರುವುದರಿಂದ 4 ಲಕ್ಷ ಬಾಟಲ್ ಪೈಕಿ 2 ಲಕ್ಷ ಬಾಟಲ್ಗಳನ್ನು ಪೂರೈಕೆ ಮಾಡಿದ್ದೇವೆ. ಉಳಿದ 2 ಲಕ್ಷ ಬಾಟಲ್ಗಳನ್ನು ಮುಂದಿನ ದಿನಗಳಲ್ಲಿ ಪೂರೈಕೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಪಂಚ ರಾಜ್ಯಗಳ ಚುನಾವಣೆಯಿಂದ ನಮ್ಮ ಸಂಸ್ಥೆ 8.96 ಕೋಟಿ ರೂ. ವಹಿವಾಟು ನಡೆದಿದ್ದು ಚುನಾವಣಾ ಆಯೋಗದವರು ಇಂಕ್ ಬಾಟಲ್ ಬದಲಿಗೆ ಮಾರ್ಕರ್ ಪೆನ್ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ನಾವು ಸುದೀರ್ಘ ಪ್ರಯೋಗ ನಡೆಸಿ ಮಾರ್ಕರ್ ಪೆನ್ ತಯಾರಿಸಿದ್ದು, ಅದನ್ನು ಸದ್ಯದಲ್ಲೇ ಚುನಾವಣಾ ಆಯೋಗದ ಸಮ್ಮುಖದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ" ಎಂ. ಫಣೀಶ್ ಹೇಳಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿತ ಕಾರ್ಖಾನೆ
ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್) ಬಗ್ಗೆ ಹೇಳುವುದಾದರೆ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಠಿಯಿಂದ ಸ್ಥಾಪಿಸಲ್ಪಟ್ಟ ಕಾರ್ಖಾನೆಯಾಗಿದೆ. 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಈ ಕಾರ್ಖಾನೆಯನ್ನು ಸ್ಥಾಪಿಸಿದಾಗ ಇಲ್ಲಿ ಕೇವಲ ಬಣ್ಣಗಳಷ್ಟೆ ತಯಾರಾಗುತ್ತಿತ್ತು. ಬಳಿಕ ಸ್ವಾತಂತ್ರ್ಯ ನಂತರ ಇದು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿತು. ಆದರೆ ಚುನಾವಣೆಯಲ್ಲಿ ಬಳಸುವ ಶಾಯಿ ಬಂದಿದ್ದೇ ಒಂದು ರೋಚಕ ಇತಿಹಾಸ.
ಐದು ದಶಕಗಳ ಹಿಂದೆಯೇ ಮತದಾನದಲ್ಲಿ ನಡೆಯುವ ಅಕ್ರಮ ತಡೆಯಲು ಚುನಾವಣಾ ಆಯೋಗ ಮತದಾರನ ಬೆರಳಿಗೆ ಕಪ್ಪು ಶಾಯಿ (ಮಸಿ) ಬಳಸುವ ವಿಧಾನವನ್ನು ಜಾರಿಗೆ ತಂದಿತ್ತು. ಅಲ್ಲಿಂದ ಇಲ್ಲಿಯವರೆಗೂ ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಶಾಯಿಯನ್ನು ಸರಬರಾಜು ಮಾಡಲಾಗುತ್ತಿರುವುದು ವಿಶೇಷವಾಗಿದೆ. ಸ್ವಾತಂತ್ರ್ಯಾನಂತರ 1951, 57ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ಇದರಲ್ಲಿ ಒಬ್ಬರೇ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು.
ಮೈಲಾಕ್ ನ ಅದೃಷ್ಟದ ಬಾಗಿಲು ತೆರೆಯಿತು
ಈ ನಿರ್ಧಾರ ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯ ಅದೃಷ್ಟದ ಬಾಗಿಲು ತಟ್ಟಿತು ಎಂದರೆ ತಪ್ಪಾಗಲಾರದು. ಅವತ್ತಿನ ಕಾಲದಲ್ಲಿ ಈ ಕಾರ್ಖಾನೆಗೆ ಉತ್ತಮ ಹೆಸರಿತ್ತಲ್ಲದೆ ಸರ್ಕಾರದ ಅಧೀನದಲ್ಲಿದ್ದುದರಿಂದ ಅಳಿಸಲಾಗದ ಶಾಯಿ ತಯಾರಿಸಿ ಕಳುಹಿಸುವ ಜವಬ್ದಾರಿಯನ್ನು ನೀಡಲಾಯಿತು. ಆ ನಂತರ 1962ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಶಾಯಿಯನ್ನು ಪೂರೈಸಿದ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಬಳಿಕ ತಿರುಗಿ ನೋಡದೆ ಚುನಾವಣಾ ಇತಿಹಾಸದಲ್ಲಿ ಮೈಲುಗಲ್ಲು ಸ್ಥಾಪಿಸುತ್ತಾ ಹೋಗುತ್ತಿದೆ. ಅಂದಿನಿಂದ ಚುನಾವಣಾ ಆಯೋಗ ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಕಪ್ಪು ಶಾಯಿ ಸರಬರಾಜಾಗುತ್ತಿದೆ. ಇದು ಮೈಸೂರಿಗೆ ಮಾತ್ರವಲ್ಲ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
Recommended Video
ಉತ್ಕೃಷ್ಟ ಗುಣಮಟ್ಟದ ಶಾಯಿ ತಯಾರಿಕೆ
ಶಾಯಿ ಉತ್ಪಾದನೆ ಆರಂಭಿಸಿದಂದಿನಿಂದ ಇಂದಿನವರೆಗೂ ಕಾರ್ಖಾನೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಈಗಲೂ ಈ ಕಪ್ಪು ಶಾಯಿ ಉತ್ಕೃಷ್ಟ ಗುಣಮಟ್ಟದಲ್ಲಿ ತಯಾರಾಗುತ್ತಿದ್ದು, ಈ ಶಾಯಿ ಕನಿಷ್ಠ 48 ಗಂಟೆಗಳಿಂದ 30 ದಿನಗಳವರೆಗೆ ಅಚ್ಚಳಿಯದೇ ಉಳಿಯುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ದೃಢಪಡಿಸಿದೆ. ಮೈಸೂರಿನಲ್ಲಿ ತಯಾರಾಗುವ ಶಾಯಿಯನ್ನು ದಕ್ಷಿಣ ಆಫ್ರಿಕಾ, ನೇಪಾಳ, ಟರ್ಕಿ, ಭೂತಾನ್ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳಿಗೆ ಚುನಾವಣೆ ಸಮಯಗಳಲ್ಲಿ ರಫ್ತು ಮಾಡಲಾಗುತ್ತದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ.