ಗುಜರಾತಿನಿಂದ ಮೈಸೂರಿನ ಝೂಗೆ ಬರಲಿವೆ 5 ಸಿಂಹಗಳು
ಮೈಸೂರು, ಜೂನ್ 18: ಮೈಸೂರಿನ ಪ್ರಸಿದ್ಧ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಮುಂದಿನ ತಿಂಗಳೊಳಗಾಗಿ ಗುಜರಾತಿನಿಂದ ಐದು ಸಿಂಹಗಳು ಬರಲಿವೆ. ಗುಜರಾತಿನ ಸಕ್ಕರ್ ಬರ್ಗ್ ಮೃಗಾಲಯದಿಂದ ಸಿಂಹಗಳನ್ನು ಕರೆತರಲಾಗುತ್ತಿದೆ.
ಮೈಸೂರು, ಸುತ್ತಮುತ್ತ ಊರು ನೋಡಲು ದರ್ಶಿನಿ ಪ್ಯಾಕೇಜ್
ಈಗಾಗಲೇ ಕರ್ನಾಟಕ ಮೃಗಾಲಯ ಪ್ರಾಧಿಕಾರ ಮತ್ತು ಗುಜರಾತ್ ಮೃಗಾಲಯ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಚರ್ಚಿಸಿ ಎರಡು ಕಡೆಗಳಿಂದ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲು ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಕೋರಿದ್ದು, ಇದಕ್ಕೆ ಸಮ್ಮತಿಯೂ ದೊರೆತಿದೆ. ಈ ಪ್ರಕಾರ ಮೈಸೂರು ಮೃಗಾಲಯಕ್ಕೆ ಐದು ಸಿಂಹಗಳನ್ನು ಕರೆತರಲಾಗುತ್ತಿದೆ. ಇದಕ್ಕೆ ಬದಲಿಯಾಗಿ ಮೈಸೂರಿನ ಮೃಗಾಲಯದಿಂದ ಎರಡು ಹಿಪ್ಪೊಪೊಟಮಸ್ ಹಾಗೂ ಮೂರು ಕಾಡೆಮ್ಮೆಗಳನ್ನು ಗುಜರಾತ್ ಮೃಗಾಲಯಕ್ಕೆ ನೀಡಲಾಗುತ್ತಿದೆ.
ಸದ್ಯಕ್ಕೆ ಗುಜರಾತಿನಲ್ಲಿ ಬಿಸಿಲಿನ ಧಗೆ ಹೆಚ್ಚಿರುವುದರಿಂದ ಪ್ರಾಣಿಗಳಿಗೆ ಪ್ರಯಾಣ ಕಷ್ಟವಾಗುತ್ತದೆ. ಈ ಕಾರಣದಿಂದ ಕರೆತರಲು ತಡವಾಗಿದೆ. ಮುಂದಿನ ತಿಂಗಳು ಉಷ್ಣಾಂಶ ಕಡಿಮೆ ಆದಲ್ಲಿ ಪ್ರಾಣಿಗಳನ್ನು ಕರೆತರುವುದಾಗಿ ತಿಳಿದುಬಂದಿದೆ.